ಕಾರಂತರ ಪುಸ್ತಕಗಳ ಮರು ಮುದ್ರಣ ಅಗತ್ಯ: ಚಿರಂಜೀವಿ ಸಿಂಗ್
ಬೆಂಗಳೂರು, ಫೆ. 11: ಶಿವರಾಮ ಕಾರಂತರ ಸಾಹಿತ್ಯವನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ, ಸರಕಾರ ಅವರ ಕೃತಿಗಳನ್ನು ಮರುಮುದ್ರಣ ಮಾಡಿ ಸಬ್ಸಿಡಿ ದರದಲ್ಲಿ ನೀಡುವ ಮೂಲಕ ಕಾರಂತರನ್ನು ಯುವ ಪೀಳಿಗೆಗೆ ತಲುಪಿಸುವ ಅಗತ್ಯವಿದೆ ಎಂದು ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ಆರ್ಟಿ ನಗರದ ತರಳಬಾಳು ಗ್ರಂಥಾಲಯದಲ್ಲಿ ಶಿವರಾಮ ಕಾರಂತ ವೇದಿಕೆಯಿಂದ ಆಯೋಜಿಸಿದ್ದ ಶಿವರಾಮ ಕಾರಂತ ವೇದಿಕೆ ಬೆಳ್ಳಿಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಆಧುನಿಕ ಯುಗದ ತಾಂತ್ರಿಕ ಭರಾಟಯಲ್ಲಿ ಸಮಾಜ ಮುಖಿಚಿಂತನೆಯಲ್ಲಿ ತೊಡಗುವವರ ಸಂಖ್ಯೆ ಕ್ಷೀಣಿಸುತ್ತಿದೆ.
ಅಲ್ಲದೆ, ಯುವ ಪೀಳಿಗೆಯಲ್ಲಿ ಓದುವ ಹವ್ಯಾಸ ಕಡಿಮೆಯಾಗಿದೆ. ಶಿವರಾಮ ಕಾರಂತರು ಸಮಾಜಮುಖಿ ಚಿಂತನೆಗಳಲ್ಲಿ ತೊಡಗಿರುತ್ತಿದ್ದರು. ಹೀಗಾಗಿ ಅವರ ಆದರ್ಶಗಳನ್ನು ಯುವಕರಿಗೆ ತಲುಪಿಸುವ ಉದ್ದೇಶದಿಂದ ಅವರ ಪುಸ್ತಕಗಳನ್ನು ಮರುಮುದ್ರಣ ಮಾಡಬೇಕಾದ ಅಗತ್ಯವಿದೆ ಎಂದರು.
ಕಾರಂತರಿಗೆ ಕಲೆಯ ಬಗ್ಗೆ ಅಪಾರ ಆಸಕ್ತಿಯಿತ್ತು. ಹೀಗಾಗಿ ಕಲೆಯ ಬಗ್ಗೆ ಅವರು ಆಳವಾದ ಅಧ್ಯಯನ ಮಾಡಿ, ಅನುಭವವನ್ನು ಬರವಣಿಗೆಯಲ್ಲಿ ದಾಖಲಿಸುತ್ತಿದ್ದರು. ಕನ್ನಡ ಸಾಹಿತ್ಯ, ವಿಜ್ಞಾನಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕೆಂದು ಕಾರಂತರು ಚಿಂತನೆ ನಡೆಸುತ್ತಿದ್ದರು ಎಂದರು.
ದೇಶದ ಜನರಲ್ಲಿ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ. ಆದರೆ ಅಮೆರಿಕದಂತಹ ಮುಂದುವರೆದ ರಾಷ್ಟ್ರಗಳಲ್ಲೂ ಓದುವ ಹವ್ಯಾಸ ಹೆಚ್ಚುತ್ತಿದೆ. ನಮ್ಮ ಜನರು ಸಮಾಜಮುಖಿ ಚಿಂತನೆಗಳಲ್ಲಿ ತೊಡಗಲು ಪುಸ್ತಕಗಳು ಮಹತ್ತರ ಪಾತ್ರ ವಹಿಸುತ್ತವೆ. ಹೀಗಾಗಿ ಜನರಲ್ಲಿ ಪುಸ್ತಕಗಳನ್ನು ಓದಲು ಉತ್ತೇಜನ ನೀಡಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಸರಕಾರಿ-ಖಾಸಗಿ ವಲಯಗಳೆರಡರಲ್ಲೂ ಪ್ರಾಮಾಣಿಕತೆ ಕೊರತೆಯಿದೆ. ಹೀಗಾಗಿ ಎಲ್ಲ ವಲಯಗಳಲ್ಲೂ ಭ್ರಷ್ಟಾಚಾರ ಆವರಿಸಿರುವುದು ವಿಷಾದನೀಯ ಸಂಗತಿ ಎಂದು ಚಿರಂಜೀವಿಸಿಂಗ್ ಬೇಸರ ವ್ಯಕ್ತಪಡಿಸಿದರು.
ಅಡಿಗರ ಕಾವ್ಯ ಒಂದು ಅವಲೋಕನದ ಬಗ್ಗೆ ಮಾತನಾಡಿದ ಹಿರಿಯ ಪರ್ತಕರ್ತೆ ಡಾ.ಪೂರ್ಣಿಮಾ, ಗೋಪಾಲಕೃಷ್ಣ ಅಡಿಗರು ಕನ್ನಡದ ಸಾರ್ವಜನಿಕ ಶ್ರೇಷ್ಠ ಕವಿಗಳಲ್ಲೊಬ್ಬರು. ಕನ್ನಡದ ಕಾವ್ಯ ಕ್ಷೇತ್ರದಲ್ಲಿ ನವ್ಯತೆ ಎಂಬ ಹೊಸ ಸಂಪ್ರದಾಯ ಬೆಳೆಸಿ ತಮ್ಮ ಕಾವ್ಯ, ಗದ್ಯ, ವೈಚಾರಿಕತೆ, ವ್ಯಕ್ತಿತ್ವ, ಪ್ರಭಾವ, ಮಾರ್ಗದರ್ಶನಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ನೀಡಲು ಕಾರಣರಾದ ಯುಗ ಪ್ರವರ್ತಕ ಕವಿ. ನವೋದಯ ಸಾಹಿತ್ಯಗಳ ರಚನೆ ಯಲ್ಲಿ ಅಡಿಗರ ಕೊಡುಗೆ ಅಪಾರ.
ಅವರ ಬರವಣಿಗೆ ಹೊಸತನದಿಂದ ಕೂಡಿತ್ತು. ಯುವ ಜನಾಂಗದ ನಾಡಿ ಮಿಡಿತ ಅರಿತ್ತಿದ್ದರು. ಅಡಿಗರ ಸಮಗ್ರ ಕಾವ್ಯವನ್ನು ಓದಿದಾಗ ಆಧುನಿಕ ಮಹಾಕಾವ್ಯವೊಂದನ್ನು ಓದಿದ ಅನುಭವವಾಗುತ್ತದೆ. ಇವರ ಕಾವ್ಯದ ನಾಯಕ ಸ್ವಾತಂತ್ರೋತ್ತರ ಭಾರತದ ಆಧುನಿಕ ಸಂವೇದನೆಯ ವ್ಯಕ್ತಿ. ಸ್ವತಂತ್ರ ಭಾರತದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ವಾಸ್ತವ ಇವರ ಕಾವ್ಯದಲ್ಲಿ ಆಕಾರ ಪಡೆದಂತೆ ಬಹುಶಃ ಕನ್ನಡದಲ್ಲಿ ಮತ್ತೆ ಯಾರ ಕಾವ್ಯದಲ್ಲೂ ಕಾಣಿಸಿಕೊಂಡಿಲ್ಲ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಹಿರಿಯ ವಿಮರ್ಶಕ ಬಿ.ವಿ.ಕೆದಿಲಾಯರಿಗೆ ಸನ್ಮಾನಿಸಲಾಯಿತು.







