ಶಿವಮೊಗ್ಗ ನಗರ ಕ್ಷೇತ್ರ - ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ : ವೈ.ಹೆಚ್.ನಾಗರಾಜ್
ಶಿವಮೊಗ್ಗ, ಫೆ. 11: 'ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರ ಅಥವಾ ಶಿಕಾರಿಪುರ ವಿಧಾನಸಭಾ ಕ್ಷೇತ್ರದದಲ್ಲಿ ಕಣಕ್ಕಿಳಿಯಬೇಕೆಂಬ ಆಕಾಂಕ್ಷೆಯಿದೆ. ಈಗಾಗಲೇ ಈ ಕುರಿತಂತೆ ಪಕ್ಷದ ವರಿಷ್ಠರಿಗೆ ಮನವಿ ಮಾಡಿಕೊಂಡಿದ್ದೆನೆ. ಆದರೆ ಟಿಕೆಟ್ಗೆ ಲಾಬಿ ನಡೆಸಲು ಹೋಗುವುದಿಲ್ಲ. ಒತ್ತಡವೂ ಹಾಕುವುದಿಲ್ಲ. ಪಕ್ಷದ ನಿರ್ಧಾರದಂತೆ ಮುನ್ನಡೆಯುತ್ತೆನೆ. ವರಿಷ್ಠರ ನಿರ್ಧಾರಕ್ಕೆ ಬದ್ದವಿರುತ್ತೆನೆ' ಎಂದು ಜಿಲ್ಲಾ ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ವೈ.ಹೆಚ್.ನಾಗರಾಜ್ ತಿಳಿಸಿದ್ದಾರೆ.
ಕಾಂಗ್ರೆಸ್ ಸೇವಾದಳಕ್ಕೆ ಕನಿಷ್ಠ 10 ಕ್ಷೇತ್ರದಲ್ಲಿಯಾದರೂ ಟಿಕೆಟ್ ನೀಡಬೇಕೆಂಬ ಮನವಿಯನ್ನು ಪಕ್ಷದ ವರಿಷ್ಠರಿಗೆ ಮಾಡಲಾಗಿದೆ. ಇದರಲ್ಲಿ ತಾವು ಕೂಡ ಓರ್ವ ಆಕಾಂಕ್ಷಿಯಾಗಿದ್ದೆನೆ. ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿದ್ದು, ಪಕ್ಷದ ತತ್ವ - ಸಿದ್ದಾಂತಗಳಿಗೆ ಬದ್ದನಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದೆನೆ ಎಂದು ಹೇಳಿದ್ದಾರೆ.
ಜಿಲ್ಲೆಯಾದ್ಯಂತ ಕಾಂಗ್ರೆಸ್ ಪಕ್ಷದ ಪರವಾದ ಅಲೆ ಕಂಡುಬರುತ್ತಿದೆ. ಈ ಬಾರಿ ಜಿಲ್ಲೆಯ ಎಲ್ಲ ಏಳು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರ ಜನಪರ ಆಡಳಿತ ಪಕ್ಷದ ಗೆಲುವಿಗೆ ಪೂರಕವಾಗಿರಲಿದೆ ಎಂದು ವೈ.ಹೆಚ್.ನಾಗರಾಜ್ ಅಭಿಪ್ರಾಯಪಟ್ಟಿದ್ದಾರೆ.
ಹಲವರ ಪೈಪೋಟಿ: ವಿಧಾನಸಭೆ ಚುನಾವಣೆಗೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಕೋರಿ ಹಲವು ನಾಯಕರು ಪೈಪೋಟಿ ನಡೆಸುತ್ತಿದ್ದಾರೆ. ಈಗಾಗಲೇ ಹಾಲಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಹಾಗೂ ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ ನೇತೃತ್ವದಲ್ಲಿ 11 ನಾಯಕರ ತಂಡವು ಟಿಕೆಟ್ಗೆ ತೀವ್ರ ಲಾಬಿ ನಡೆಸುತ್ತಿದೆ. ಹೆಚ್.ಎಂ.ಚಂದ್ರಶೇಖರಪ್ಪ ನೇತೃತ್ವದ ತಂಡವು ದೆಹಲಿ ಹಾಗೂ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಭೇಟಿಯಾಗಿ ತಮ್ಮಗಳಲ್ಲಿಯೇ ಓರ್ವರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿಕೊಂಡಿದೆ.
ಈ ನಡುವೆ ಜಿಲ್ಲಾ ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ, ವೀರಶೈವ ಸಮಾಜದ ಮುಖಂಡ ವೈ.ಹೆಚ್.ನಾಗರಾಜ್ರವರು ಕೂಡ ಟಿಕೆಟ್ಗೆ ರೇಸ್ಗೆ ಧುಮುಕಿದ್ದಾರೆ. ವೀರಶೈವ ಸಮಾಜಕ್ಕೆ ಪ್ರಾತಿನಿಧ್ಯ ಹಾಗೂ ಕಾಂಗ್ರೆಸ್ ಸೇವಾದಳ ಕೋಟಾದಡಿ ಟಿಕೆಟ್ ನೀಡುವಂತೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್ ವರಿಷ್ಠರಿಗೆ ಮನವಿ ಮಾಡಿಕೊಂಡಿದ್ದಾರೆ. ಶಿಕಾರಿಪುರ ಅಥವಾ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ತಮಗೆ ಅವಕಾಶ ಮಾಡಿಕೊಡುವಂತೆ ಕೋರಿಕೊಂಡಿದ್ದಾರೆಂಬ ಎಂಬ ಮಾಹಿತಿ ಕೇಳಿಬಂದಿದೆ.