ಸೇನೆಯನ್ನು ಅವಮಾನಿಸಿದ ಮೋಹನ್ ಭಾಗವತ್ ಗೆ ನಾಚಿಕೆಯಾಗಬೇಕು: ರಾಹುಲ್ ಗಾಂಧಿ
ಹೊಸದಿಲ್ಲಿ, ಫೆ.12: ಭಾರತೀಯ ಸೇನೆಯ ಬಗ್ಗೆ 'ಅಗೌರವಯುತವಾದ' ಹೇಳಿಕೆಯನ್ನಿತ್ತ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
"ದೇಶಕ್ಕಾಗಿ ಹೋರಾಡಲು ಆರೆಸ್ಸೆಸ್ ಕೇವಲ ಮೂರು ದಿನದಲ್ಲಿಯೇ ಸೇನೆಯೊಂದನ್ನು ಸನ್ನದ್ಧಗೊಳಿಸುವ ಸಾಮರ್ಥ್ಯ ಹೊಂದಿದೆ. ಇದಕ್ಕಾಗಿ ಸೇನೆಗೆ 6ರಿಂದ 7ತಿಂಗಳು ಬೇಕಾದೀತು" ಎಂಬ ಭಾಗವತ್ ಹೇಳಿಕೆಯನ್ನು ರಾಹುಲ್ ಟೀಕಿಸಿದ್ದಾರೆ.
"ನಮ್ಮ ಹುತಾತ್ಮರು ಹಾಗೂ ಸೇನೆಯನ್ನು ಅವಮಾನಿಸಿದ್ದಕ್ಕಾಗಿ ನಿಮಗೆ ನಾಚಿಕೆಯಾಗಬೇಕು'' ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
"#ApologizeRSS" ಎಂಬ ಹ್ಯಾಶ್ ಟ್ಯಾಗ್ ಉಪಯೋಗಿಸಿದ ರಾಹುಲ್ "ಆರೆಸ್ಸೆಸ್ ಮುಖ್ಯಸ್ಥರ ಭಾಷಣ ಪ್ರತಿಯೊಬ್ಬ ಭಾರತೀಯನಿಗೂ ಒಂದು ಅವಮಾನ. ದೇಶಕ್ಕಾಗಿ ಪ್ರಾಣ ಬಲಿದಾನಗೈದವರಿಗೆ ಅದು ಅಗೌರವ ಸೂಚಿಸುತ್ತಿದೆ. ಅದು ನಮ್ಮ ರಾಷ್ಟ್ರಧ್ವಜಕ್ಕೆ ಹಾಗೂ ಅದಕ್ಕೆ ವಂದಿಸುವ ಪ್ರತಿಯೊಬ್ಬ ಸೈನಿಕನಿಗೂ ಅವಮಾನ'' ಎಂದಿದ್ದಾರೆ ರಾಹುಲ್.
ಭಾಗವತ್ ಅವರನ್ನು ಟೀಕಿಸಿದವರಲ್ಲಿ ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿ ಹಾಗೂ ಪಾಟಿದಾರ್ ಚಳುವಳಿ ನಾಯಕ ಹಾರ್ದಿಕ್ ಪಟೇಲ್ ಕೂಡ ಸೇರಿದ್ದಾರೆ.
"ದೇಶದಲ್ಲಿ ದಂಗೆಗಳ ಕಿಡಿ ಹಚ್ಚುವ ಅಂಡರ್ ವೇರ್ ಧರಿಸಿದವರ ಸೇನೆ ಆರೆಸ್ಸೆಸ್ ಆಗಿದೆ. ದೇಶದ ಜನತೆಗೆ ಮೋದಿ ಸರಕಾರಿ ಉದ್ಯೋಗ ನೀಡಲು ಅನುವು ಮಾಡಿಕೊಡಲು ಭಾಗವತ್ ಅವರಿಗೆ ದೇಶಾದ್ಯಂತ ಪಕೋಡಾ ಮಾರಲು ನಾನು ಆಗ್ರಹಿಸುತ್ತೇನೆ'' ಎಂದು ಮೇವಾನಿ ಟ್ವೀಟ್ ಮಾಡಿದ್ದಾರೆ.
ಹಾರ್ದಿಕ್ ಪಟೇಲ್ ಕೂಡ ಪ್ರತಿಕ್ರಿಯಿಸಿ, "ಭಾಗವತ್ ಅವರಿಂದ ಯಾರೂ ದೇಶಭಕ್ತಿ ಕಲಿಯಬೇಕಾಗಿಲ್ಲ'' ಎಂದಿದ್ದಾರೆ.