ಶ್ರೀನಗರ: ಭಯೋತ್ಪಾದಕರ ದಾಳಿಗೆ ಓರ್ವ ಯೋಧ ಹುತಾತ್ಮ
ಸಿಆರ್ಪಿಎಫ್ ಮುಖ್ಯ ಕಚೇರಿ ದಾಳಿಗೆ ವಿಫಲ ಯತ್ನ
ಹೊಸದಿಲ್ಲಿ, ಫೆ.12: ಶ್ರೀನಗರದ ಕರಣ್ ನಗರದಲ್ಲಿ ಸೋಮವಾರ ಉಗ್ರಗಾಮಿಗಳು ಹಾಗೂ ಸೈನಿಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಸಿಆರ್ಪಿಎಫ್ ಯೋಧ ಹುತಾತ್ಮನಾಗಿದ್ದಾರೆ.
ಇದಕ್ಕೆ ಮೊದಲು ಉಗ್ರಗಾಮಿಗಳು ಸಿಎಆರ್ಪಿಎಫ್ನ ಮುಖ್ಯ ಕಚೇರಿಗೆ ದಾಳಿ ನಡೆಸುವ ಯತ್ನವನ್ನು ಭದ್ರತಾ ಸಿಬ್ಬಂದಿಗಳು ವಿಫಲಗೊಳಿಸಿದರು.
‘‘ಸೋಮವಾರ ಬೆಳಗ್ಗೆ ಇಬ್ಬರು ಉಗ್ರರು ಎಕೆ 47 ರೈಫಲ್ಸ್ಗಳನ್ನು ಹಿಡಿದುಕೊಂಡು ಸಿಆರ್ಪಿಎಫ್ನ ಮುಖ್ಯ ಕಚೇರಿಗೆ ದಾಳಿ ನಡೆಸಲು ಯತ್ನಿಸಿದರು. ಉಗ್ರರು ಮುಖ್ಯ ಕಚೇರಿಯ ಸನಿಹದ ಕಟ್ಟಡ ತಲುಪಿದ್ದರು. ಐದು ಕುಟುಂಬವನ್ನು ತೆರವುಗೊಳಿಸಲಾಗಿದ್ದು, ಕಾರ್ಯಾಚರಣೆ ಮುಂದುವರಿದಿದೆ’’ ಎಂದು ಸಿಆರ್ಪಿಎಫ್ ಐಜಿ ರವಿದೀಪ್ ಸಹಾಯ್ ಹೇಳಿದ್ದಾರೆ.
‘‘ಇಬ್ಬರು ಶಂಕಾಸ್ಪದ ವ್ಯಕ್ತಿಗಳು ಬೆಳಗ್ಗೆ 4:30ರ ಸುಮಾರಿಗೆ ಸೇನಾ ಶಿಬಿರದ ಸನಿಹ ಶಸ್ತಾಸ್ತ್ರಗಳನ್ನು ಹೊತ್ತುಕೊಂಡು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ನಾವು ಅವರ ಮೇಲೆ ದಾಳಿ ನಡೆಸಿದ್ದು, ಗುಂಡಿನ ಚಕಮಕಿ ನಡೆದಿತ್ತು’’ ಎಂದು ಸಿಆರ್ಪಿಎಫ್ ವಕ್ತಾರರು ತಿಳಿಸಿದ್ದಾರೆ.
ಎರಡು ದಿನಗಳ ಹಿಂದೆ ಜಮ್ಮುವಿನ ಸಂಜುವಾನ್ ಸೇನಾ ಶಿಬಿರಕ್ಕೆ ದಾಳಿ ನಡೆಸಿದ್ದ ಉಗ್ರಗಾಮಿಗಳು ಐದು ಸೈನಿಕರನ್ನು ಹಾಗೂ ಓರ್ವ ನಾಗರಿಕನನ್ನು ಸಾಯಿಸಿದ್ದರು. ಆರು ಸೈನಿಕರು ಹಾಗೂ ಆರು ನಾಗರಿಕರು ಗಾಯಗೊಂಡಿದ್ದರು. ಭದ್ರತಾ ಪಡೆಗಳು ನಾಲ್ವರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ.