ಬಾಗೇಪಲ್ಲಿ: ವೈದ್ಯಾಧಿಕಾರಿಯ ವರ್ಗಾವಣೆ ರದ್ದುಪಡಿಸಲು ಒತ್ತಾಯಿಸಿ ಧರಣಿ
![ಬಾಗೇಪಲ್ಲಿ: ವೈದ್ಯಾಧಿಕಾರಿಯ ವರ್ಗಾವಣೆ ರದ್ದುಪಡಿಸಲು ಒತ್ತಾಯಿಸಿ ಧರಣಿ ಬಾಗೇಪಲ್ಲಿ: ವೈದ್ಯಾಧಿಕಾರಿಯ ವರ್ಗಾವಣೆ ರದ್ದುಪಡಿಸಲು ಒತ್ತಾಯಿಸಿ ಧರಣಿ](https://www.varthabharati.in/sites/default/files/images/articles/2018/02/12/bgpphoto-1.jpg)
ಬಾಗೇಪಲ್ಲಿ,ಫೆ.12: ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗಿರುವ ಡಾ.ಗ್ಯಾನ್ಕುಮಾರ್ ರವರ ವರ್ಗಾವಣೆ ರದ್ದುಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ) ಕಾರ್ಯಕರ್ತರು ಸರ್ಕಾರಿ ಆಸ್ಪತ್ರೆ ಮುಂದೆ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ಕೆ.ಎನ್.ಹರೀಶ್ ಮಾತನಾಡಿ, ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಡಾ.ಗ್ಯಾನ್ಕುಮಾರ್ ವೈದ್ಯಾಧಿಕಾರಿಗಳಾದ ನಂತರ ಆಸ್ಪತ್ರೆಯ ಆಡಳಿತ ಸಾಕಷ್ಟು ಪ್ರಗತಿ ಹೊಂದಿದೆ. ಸಾರ್ವಜನಿಕರಿಗೆ ಚಿಕಿತ್ಸೆ ನೀಡಿ, ಜನ ಮೆಚ್ಚುಗೆ ಗಳಿಸಿದ್ದಾರೆ. ಇವರು ಅಧಿಕಾರ ವಹಿಸಿಕೊಂಡ ನಂತರ ವೈದ್ಯರು, ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿದ್ದರು. ಎಲ್ಲಾ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ದಕ್ಷತೆಯಿಂದ ಕೆಲಸ ನಿರ್ವಹಿಸುತ್ತಿದ್ದರು. ಆಸ್ಪತ್ರೆಯಲ್ಲಿನ ಮೂಲಭೂತ ಸೌಲಭ್ಯಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದರು. ಇವರ ಅವಧಿಯಲ್ಲೇ ಸಿಸಿ ಕ್ಯಾಮರಾ, ಐಸಿಯು, ಸೇರಿದಂತೆ ಇನ್ನೂ ಅನೇಕ ಪರಿಣಾಮಕಾರಿ ಕಾಮಗಾರಿಗಳನ್ನು ಮಾಡಿದ್ದಾರೆ. ಇಷ್ಟೆಲ್ಲಾ ಕೆಲಸಗಳನ್ನು ಮಾಡಿರುವ ದಲಿತ ವೈಧ್ಯಾದಿಕಾರಿಗಳನ್ನು ಯಾವ ಆಧಾರದ ಮೇಲೆ ವರ್ಗಾವಣೆ ಮಾಡಿದರು ಎಂದು ಅಧಿಕಾರಿಗಳ ವಿರುದ್ದ ಅಕ್ರೋಶ ವ್ಯಕ್ತಪಡಿಸಿದರು.
ಖಾಸಗಿ ನರ್ಸಿಂಗ್ ಹೋಂ ಅನ್ನು ನಡೆಸುತ್ತಿರುವ ತಾಲೂಕು ಆರೋಗ್ಯ ಅಧಿಕಾರಿಗಳಾದ ಸಿ.ಎನ್,ಸತ್ಯನಾರಾಯಣರೆಡ್ಡಿ ಯವರಿಗೆ ಎರಡು ಪ್ರಮುಖ ಹುದ್ದೆಗಳು ಹೇಗೆ ಕೊಟ್ಟರು ಎಂದು ಪ್ರಶ್ನಿಸಿದ ಅವರು, ಈ ಹಿಂದೆ ಇದ್ದ ಯಾವುದೇ ಅಧಿಕಾರಿಗಳು ಇಷ್ಟೊಂದು ಪ್ರಗತಿ ಸಾದಿಸಿಲ್ಲ. ಯಾವುದೋ ಅನಾಮಿಕ ಪತ್ರದ ಆಧಾರದ ಮೇಲೆ ಏಕಾಏಕಿ ವರ್ಗಾವಣೆ ಮಾಡಿರುವುದು ಖಂಡನೀಯವಾಗಿದೆ. ಕೆಲಸ ಮಾಡದ ಕೆಲ ಸಿಬ್ಬಂದಿಯನ್ನು ಕೆಲಸ ಮಾಡಿಸಿರುವುದು ತಪ್ಪಾ ಎಂದು ಪ್ರಶ್ನಿಸಿದರು. ಕೂಡಲೇ ವೈದ್ಯ ಡಾ.ಗ್ಯಾನ್ಕುಮಾರ್ ರವರ ವರ್ಗಾವಣೆ ರದ್ದುಗೊಳಿಸಬೇಕು. ಇಲ್ಲವಾದಲ್ಲಿ ಸರ್ಕಾರಿ ಆಸ್ಪತ್ರೆಯ ಮುಂದೆ ಅನಿರ್ಧಿಷ್ಟಕಾಲ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿಗಳಾದ ಡಾ.ಬಿ.ಎಂ.ರವಿಶಂಕರ್ ಪ್ರತಿಕ್ರಿಯಿಸಿ ಮಾತನಾಡಿ, ಡಾ.ಗ್ಯಾನ್ ಕುಮಾರ್ ಅವರು ಒಳ್ಳೆಯ ಆಡಳಿತಗಾರರು. ಅವರು ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಬಂದ ಮೇಲೆ ಅಭಿವೃದ್ದಿ ಕಾರ್ಯಗಳು ಸಾಕಷ್ಟು ಪ್ರಗತಿ ಸಾದಿಸಿವೆ. ಆದರೆ ಅವರಿಗೆ ಕೆಲಸದ ಒತ್ತಡದಿಂದ ಹಲ್ಲುಗಳಿಗೆ ಸಂಬಂದಪಟ್ಟ ರೋಗಿಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಗೂಳೂರು ಸಮುದಾಯ ಆಸ್ಪತ್ರೆಗೆ ತಾತ್ಕಾಲಿಕವಾಗಿ ವರ್ಗಾವಣೆ ಮಾಡಲಾಗಿದೆ. 2 ತಿಂಗಳ ನಂತರ ಮತ್ತೆ ಸಾರ್ವಜನಿಕ ಆಸ್ಪತ್ರಗೆ ಕರೆಸಿಕೊಳ್ಳಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷ ರಾಮಿರೆಡ್ಡಿ, ಶೇಖರಾಚಾರಿ, ಪ್ರಭಾಕರ್, ರಿಯಾಜುಲ್ಲಾ, ತಾಲುಕು ಅಧ್ಯಕ್ಷೆ ಶಾಂತಮ್ಮ, ವಿದ್ಯಾರ್ಥಿ ಘಟಕ ಅಧ್ಯಕ್ಷ ಅನಿಲ್, ಬಾಬಾ, ವೆಂಕಟೇಶಪ್ಪ, ವಿಜಯಕುಮಾರಿ, ಕಮಲಮ್ಮ, ಶಾಹಿನಾ, ಬಾಬಾ, ಶ್ರೀನಿವಾಸ್, ನಾರಾಯಣಸ್ವಾಮಿ, ಅತಾವುಲ್ಲಾ ಮತ್ತಿತರರು ಹಾಜರಿದ್ದರು.