ಶಿವಮೊಗ್ಗ: ಲಕ್ಷಾಂತರ ರೂ. ಮೌಲ್ಯದ ಅಡಕೆ ಕಳ್ಳತನ
ಶಿವಮೊಗ್ಗ, ಫೆ.12: ಗೋಡೌನ್ ಹೊರಭಾಗದಲ್ಲಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಅಡಕೆ ಚೀಲಗಳನ್ನು ಕಳ್ಳರು ಹೊತ್ತೊಯ್ದಿರುವ ಘಟನೆ ಜಿಲ್ಲೆಯ ಸಾಗರ ಪಟ್ಟಣದ ಬಿ.ಹೆಚ್.ರಸ್ತೆಯ ನೆಹರೂ ನಗರ 9 ನೇ ಕ್ರಾಸ್ನಲ್ಲಿ ನಡೆದಿದೆ.
ಅನ್ನಪೂರ್ಣೇಶ್ವರಿ ಟ್ರೇಡರ್ಸ್ ಮಾಲೀಕ ಖಲಂದರ್ ಎಂಬವರಿಗೆ ಈ ಅಡಕೆ ಚೀಲಗಳು ಸೇರಿದೆ ಎನ್ನಲಾಗಿದೆ. ಇವರು ಸೊರಬ ತಾಲೂಕಿನ ಆನವಟ್ಟಿ ಸಮೀಪದ ಮಾಸೂರು ಗ್ರಾಮದಿಂದ 5 ಚೀಲ ಅಡಕೆ ಖರೀದಿ ಮಾಡಿಕೊಂಡು ಟಾಟಾ ಏಸ್ ವಾಹನದಲ್ಲಿ ಅಂಗಡಿಗೆ ತಂದಿದ್ದರು. ಅಡಕೆ ಚೀಲಗಳನ್ನು ಗೋಡೌನ್ ಒಳಗಿಡಲು ಹಮಾಲಿಗಳು ಲಭ್ಯವಾಗದ ಕಾರಣದಿಂದ ಹೊರಭಾಗದಲ್ಲಿಯೇ ಇರಿಸಿ ಮನೆಗೆ ತೆರಳಿದ್ದರು.
ಇದನ್ನು ಗಮನಿಸಿದ ಕಳ್ಳರು ಚೀಲಗಳನ್ನು ಹೊತ್ತೊಯ್ದಿದ್ದಾರೆ. ಕಳುವಾದ ಅಡಕೆ ಚೀಲಗಳ ಮೌಲ್ಯ 1.50 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ಈ ಸಂಬಂಧ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Next Story





