ಉಪಗ್ರಹ ಸೇವೆ ದೇಶದ ಹೆಗ್ಗಳಿಕೆಗಾಗಿ ಅಲ್ಲ, ಏಳಿಗೆಗಾಗಿ: ಕಿರಣ್ಕುಮಾರ್

ಚಿಕ್ಕಬಳ್ಳಾಪುರ,ಫೆ.12: ಕೊಳವೆ ಬಾವಿ ಕೊರೆಸುವ ಮತ್ತು ಅಂತರ್ಜಲ ಪತ್ತೆ ಸೇರಿದಂತೆ ಕೃಷಿಯಲ್ಲಿ ಉಪಗ್ರಹ ಮಾಹಿತಿ ಪಡೆದು ರೈತರು ಅಭಿವೃದ್ಧಿಯತ್ತ ದಾಪುಗಾಲಿಡಬೇಕು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ನಿಕಟಪೂರ್ವ ಅಧ್ಯಕ್ಷ ಪದ್ಮಶ್ರೀ ಡಾ.ಎ.ಎಸ್. ಕಿರಣ್ ಕುಮಾರ್ ಅಭಿಪ್ರಾಯಪಟ್ಟರು.
ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಜಲತಜ್ಞ ಪರಮಶಿವಯ್ಯ ಅವರ 100ನೇ ಜಯಂತಿಯಲ್ಲಿ ಮಾತನಾಡಿದ ಅವರು, ಭೂಮಿಯಿಂದ 600 ರಿಂದ 3 ಸಾವಿರ ಕಿಲೋಮೀಟರ್ ದೂರದಲ್ಲಿ ಕಾರ್ಯನಿರ್ವಹಿಸುವ ಉಪಗ್ರಹ ಸೇವೆ ಭಾರತದಲ್ಲಿ 1963ರಲ್ಲಿ ಆರಂಭವಾಯಿತು. ಇದರಿಂದ ಮಾಹಿತಿಯನ್ನು ಆದಷ್ಟು ಶೀಘ್ರ ತಲುಪಿಸಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.
ವಿಜ್ಙಾನಿಗಳು ತಪ್ಪು ಮಾಡಬೇಕು ಎಂದು ಯಾರೂ ಬಯಸುವುದಿಲ್ಲ, ಆದರೆ ಒಳ್ಳೆಯದನ್ನು ಮಾಡಬೇಕು ಎಂದು ಪ್ರಯತ್ನಿಸಿದರೂ ಕೆಲ ಸಮಯದಲ್ಲಿ ಕೆಟ್ಟದ್ದಾಗುತ್ತದೆ. ಇದರಿಂದ ವಿಜ್ಙಾನವನ್ನು ದೂಷಿಸುವುದು ಸರಿಯಲ್ಲ, ಜೊತೆಗೆ ವಿಜ್ಙಾನ ದಿಂದ ದೇಶದಲ್ಲಿ ಸಂವಹನ ಕ್ರಾಂತಿಯೇ ಆಗಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು. ಅಲ್ಲದೆ ಉಪಗ್ರಹ ಸೇವೆಗಳಿಂದ ದೇಶದ ಗಡಿ ಮಾತ್ರವಲ್ಲದೆ ವಿದೇಶದ ಗಡಿಯಲ್ಲಿ ಏನು ನಡೆಯುತ್ತಿದೆ ಎಂಬುದನ್ನೂ ಅರಿಯಲು ಸಾಧ್ಯ, ಪ್ರಸ್ತುತ ಭಾರತದ 43 ಉಪಗ್ರಹಗಳು ಅಂತರಿಕ್ಷದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಉಪಗ್ರಹ ಉಡಾವಣೆ ಎಂಬುದು ಹೆಗ್ಗಳಿಕೆಗಾಗಿ ಮಾಡುವ ಕೆಲಸವಲ್ಲ, ಬದಲಿಗೆ ದೇಶದ ಏಳಿಗೆಗಾಗಿ ಮಾಡುವ ಕೆಲಸವಾಗಿದೆ ಎಂದರು.
ದೇಶದ ಕರಾವಳಿ ಪ್ರದೇಶದಲ್ಲಿ ಚಂಡಮಾರುತದಿಂದ ಆಗುತ್ತಿದ್ದ ಅನಾಹುತಗಳನ್ನು ತಪ್ಪಿಸಲು ಮತ್ತು ಅಪಾರ ಪ್ರಮಾಣದಲ್ಲಿ ಆಗುತ್ತಿದ್ದ ಜೀವನಾಶ ತಡೆಯುವಲ್ಲಿ ಉಪಗ್ರಹ ಸೇವೆ ಅನನ್ಯವಾಗಿದೆ. ಅಲ್ಲದೆ ಸುನಾಮಿಯಂತಹ ಭೀಕರ ದುರಂತಗಳ ಮುನ್ಸೂಚನೆ ಸಿಗುವ ಕಾರಣ ಅನಾಹುತಗಳಿಂದ ಪಾರಾಗಲು ಸಾಧ್ಯವಾಗಿದೆ ಎಂದು ಹೇಳಿದರು. ಅಲ್ಲದೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಉಡಾವಣೆ ಮಾಡಿರುವ ಉಪಗ್ರಹಳ ಮಾಹಿತಿ ಆಧರಿಸಿ ಅಂತರ್ಜಲ ಪತ್ತೆಯೂ ಮಾಡಬಹುದಾಗಿದೆ. ಇದರಿಂದ ಕೊಳವೆ ಬಾವಿ ಕೊರೆದು ನೀರು ಸಿಗದೆ ತೀವ್ರ ನಷ್ಟ ಅನುಭವಿಸುತ್ತಿದ್ದ ರೈತರಿಗೆ ಇದರಿಂದ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ಅನುಕೂಲಗಳ ಕುರಿತು ಮಾಹಿತಿ ನೀಡುವುದಷ್ಟೇ ಇಸ್ರೋ ವಿಜ್ಙಾನಿಗಳ ಕೆಲಸವಾಗಿದ್ದು, ಇಸ್ರೋ ಸೂಚಿಸಿದ ಮಾಹಿತಿ ಆಧರಿಸಿ ಯೋಜನೆಗಳ ಅನುಷ್ಠಾನ ಮಾಡುವುದು ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತಗಳ ಕೆಲಸವಾಗಿದೆ. ಅಲ್ಲದೆ ಎಲ್ಲವೂ ಸರ್ಕಾರವೇ ಮಾಡಬೇಕು ಎಂಬ ಭಾವನೆ ತೊರೆದು ಸಾರ್ವಜನಿಕರ ಸಹಭಾಗಿತ್ವವೂ ಪ್ರಮುಖ ಪಾತ್ರವಹಿಸಲಿದೆ ಎಂದರು.
ಸಂಸ್ಥೆಯ ಸಾಧನೆಗಳು ಅಗಾಧವಾಗಿವೆ, ಅವು ಕಾರ್ಯರೂಪಕ್ಕೆ ಬರಲು ಅಷ್ಟೇ ಅಡಚಣೆಗಳೂ ಇದ್ದು, ಇಚ್ಛಾಶಕ್ತಿಯಿಂದ ಮುಂದುವರಿದಲ್ಲಿ ಎಲ್ಲವೂ ಸಾಧ್ಯ ಎಂಬುದನ್ನು ಮರೆಯಬಾರದು ಎಂದು ಹೇಳಿದರು. ಅಲ್ಲದೆ ಭವಿಷ್ಯದ ದೃಷ್ಟಿಯಲ್ಲಿ ನೀರಿಗಾಗಿ ಧ್ವನಿ ಎತ್ತಿರುವ ಜಿಲ್ಲೆಯ ಜನತೆಯ ಜಿಲ್ಲೆಯ ಜನತೆಯ ಆಶಯ ಶ್ಲಾಘನೀಯ, ಇದಕ್ಕೆ ಜಿಲ್ಲೆಯ ಪ್ರತಿಯೊಬ್ಬರ ಸಹಕಾರ ಮುಖ್ಯ. ಭವಿಷ್ಯದಲ್ಲಿ ನೀರಿನ ತೊಂದರೆ ಅತಿಯಾಗಲಿದ್ದು, ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ತೀವ್ರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬುದನ್ನು ಅರಿತು ನೀರಿನ ಮಿತಬಳಕೆ ಕುರಿತು ಎಚ್ಚರವಹಿಸುವಂತೆ ಅವರು ಸಲಹೆ ನೀಡಿದರು.
ದೇಹದಾನ ಮಾಡಿದ ಕಾಮ್ರೇಡ್ ಲಕ್ಷ್ಮಯ್ಯ: ಜಲತಜ್ಞ ಪರಮಶಿವಯ್ಯ ಅವರ 100ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹೋರಾಟಗಾರ ಕಾಂ. ಲಕ್ಷ್ಮಯ್ಯ ದೇವರಾಜ ಅರಸು ವೈದ್ಯಕೀಯ ಕಾಲೇಜಿಗೆ ದೇಹದಾನ ಮಾಡುವ ಪತ್ರಕ್ಕೆ ಸಹಿ ಹಾಕುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದರು.
ಪ್ರಸ್ತಾವಿಕವಾಗಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪರಮಶಿವಯ್ಯ ಅವರ ಪುತ್ರ ಜಿ.ಎಸ್. ಜ್ಞಾನೇಶ್ವರ್ ಪರಮಶಿವಯ್ಯ, ಮಳ್ಳೂರು ಹರೀಶ್, ಸುಷ್ಮಾ ಶ್ರೀನಿವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







