ಮೈಸೂರು: ಮಹಾಶಿವರಾತ್ರಿ ಪ್ರಯುಕ್ತ ತ್ರಿನೇಶ್ವರ ದೇವಾಲಯಕ್ಕೆ ಚಿನ್ನದ ಕೊಳಗ ಹಸ್ತಾಂತರ
![ಮೈಸೂರು: ಮಹಾಶಿವರಾತ್ರಿ ಪ್ರಯುಕ್ತ ತ್ರಿನೇಶ್ವರ ದೇವಾಲಯಕ್ಕೆ ಚಿನ್ನದ ಕೊಳಗ ಹಸ್ತಾಂತರ ಮೈಸೂರು: ಮಹಾಶಿವರಾತ್ರಿ ಪ್ರಯುಕ್ತ ತ್ರಿನೇಶ್ವರ ದೇವಾಲಯಕ್ಕೆ ಚಿನ್ನದ ಕೊಳಗ ಹಸ್ತಾಂತರ](https://www.varthabharati.in/sites/default/files/images/articles/2018/02/12/God Shiva Photos.jpg)
ಮೈಸೂರು,ಫೆ.12: ಮಹಾಶಿವರಾತ್ರಿ ಪ್ರಯುಕ್ತ ಅರಮನೆ ಆವರಣದಲ್ಲಿರುವ ತ್ರಿನೇಶ್ವರ ದೇವಾಲಯಕ್ಕೆ ಚಿನ್ನದ ಕೊಳಗ ಹಸ್ತಾಂತರಿಸಲಾಯಿತು.
ಮೈಸೂರು ಜಿಲ್ಲಾಡಳಿತದ ಖಜಾನೆಯಲ್ಲಿದ್ದ 11 ಕೆಜಿ ತೂಕದ ಚಿನ್ನದ ಶಿವನ ಮುಖವಾಡವನ್ನು ಮೈಸೂರು ಜಿಲ್ಲಾಡಳಿತ ದೇವಳದ ಅರ್ಚಕರಿಗೆ ನೀಡಿದೆ. ಮಂಗಳವಾರ ಮಹಾಶಿವರಾತ್ರಿ ನಡೆಯಲಿದ್ದು, ಈ ಪ್ರಯುಕ್ತ ತ್ರಿನೇಶ್ವರ ದೇವಸ್ಥಾನದಲ್ಲಿ ಭರದ ಸಿದ್ಧತೆಗಳು ನಡೆದಿವೆ. ಶಿವಲಿಂಗಕ್ಕೆ ವರ್ಷಕ್ಕೆ ಒಂದೇ ಬಾರಿ ಚಿನ್ನದ ಲೇಪಿತ ಕೊಳಗವನ್ನು ತೊಡಿಸಲಾಗುತ್ತಿದ್ದು, ಸೋಮವಾರ ಜಿಲ್ಲಾಡಳಿತ ತ್ರೀನೇಶ್ವರ ದೇವಸ್ಥಾನದ ಅರ್ಚಕರಿಗೆ ಚಿನ್ನದ ಲೇಪಿತ ಕೊಳಗವನ್ನು ನೀಡಿದೆ. ಮಂಗಳವಾರ ಬೆಳಿಗ್ಗೆ 5ಗಂಟೆಗೆ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದ್ದು, ಜಿಲ್ಲಾಡಳಿತ ದೇವಾಲಯಕ್ಕೆ ಭೇಟಿ ನೀಡಿ ದೇವರ ಕೊಳಗವನ್ನು ದೇವಾಲಯದ ಅರ್ಚಕರಿಗೆ ಹಸ್ತಾಂತರಿಸಿದೆ.
ಶಿವನ ಮುಖವಾಡವನ್ನು ಜಯಚಾಮರಾಜೇಂದ್ರ ಒಡೆಯರ್ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹುಟ್ಟಿದ ಸಂದರ್ಭದಲ್ಲಿ ದೇವಾಲಯಕ್ಕೆ ಚಿನ್ನದ ಕೊಳಗ ಉಡುಗೊರೆಯಾಗಿ ನೀಡಿದ್ದರು. ನಾಳೆ ಮುಂಜಾನೆ ವಿಶೇಷ ಪೂಜೆ ನೆರವೇರಿಸಿ ದೇವಾಲಯದ ಶಿವಲಿಂಗಕ್ಕೆ ಇದನ್ನು ಧಾರಣೆ ಮಾಡಲಾಗುತ್ತದೆ. ಇಡೀ ರಾತ್ರಿ ಸಾರ್ವಜನಿಕರ ದರ್ಶನಕ್ಕೆ ಮೈಸೂರು ಜಿಲ್ಲಾಡಳಿತ ಅವಕಾಶ ಕಲ್ಪಿಸಲಿದೆ.
ಇದೇ ರೀತಿ ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಜಿಲ್ಲೆಯ ನಂಜನಗೂಡಿನ ಶ್ರೀಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲೂ ಬೆಳಿಗ್ಗೆಯಿಂದಲೇ ಶಿವನಿಗೆ ವಿಶೇಷ ಪೂಜೆ ಪುನಸ್ಕಾರಗಳು ಜರುಗಲಿವೆ. ಅರಮನೆ ಮಂಡಳಿ, ಮುಜರಾಯಿ ಇಲಾಖೆ, ಪೊಲೀಸ್ ಇಲಾಖೆ ಸಮ್ಮುಖದಲ್ಲಿ ದೇವಾಲಯಕ್ಕೆ ಕೊಳಗ ಹಸ್ತಾಂತರಿಸಲಾಗಿದೆ.