ಕಾವಳಪಡೂರು: ನೌಕರನಿಂದ ಬ್ಯಾಂಕ್ಗೆ ವಂಚನೆ; ಪ್ರಕರಣ ದಾಖಲು

ಬಂಟ್ವಾಳ, ಫೆ. 12: ಸಿಂಡಿಕೇಟ್ ಬ್ಯಾಂಕ್ನ ಕಾವಳಪಡೂರು ಶಾಖೆಯ ಶಾಖಾ ವ್ಯವಸ್ಥಾಪಕನೋರ್ವ ಗ್ರಾಹಕರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಠಿಸಿ ಲಕ್ಷಾಂತರ ರೂ. ಸಾಲ ಪಡೆದು ಬ್ಯಾಂಕಿಗೆ ವಂಚಿಸಿದ್ದಲ್ಲದೆ, ಹಣ ದುರುಪಯೋಗ ಪಡಿಸಿದ ಆರೋಪದಡಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
2014ರ ಜೂನ್ 26ರಿಂದ 2016ರ ಮಾರ್ಚ್ 19ರವರೆಗೆ ಕಾವಳಪಡೂರು ಸಿಂಡಿಕೇಟ್ ಬ್ಯಾಂಕ್ ಶಾಖೆಯ ಶಾಖಾ ವ್ಯವಸ್ಥಾಪಕನಾಗಿದ್ದ ಟಿ. ದೊರೈ ಎಂಬಾತ ಬ್ಯಾಂಕ್ನ ಹಲವು ಗ್ರಾಹಕರ ಹೆಸರಿನಲ್ಲಿ ನಕಲಿ ದಾಖಲೆ ಪತ್ರಗಳನ್ನು ಸೃಷ್ಠಿಸಿ ಸುಮಾರು 83.98 ಲಕ್ಷ ರೂ. ಸಾಲ ಪಡೆದು ಬ್ಯಾಂಕ್ ವಂಚಿಸಿದ್ದಾನೆಂದು ಆರೋಪಿಸಲಾಗಿದೆ.
ಕೃಷಿ ಮತ್ತು ಜುವೆಲ್ಲರಿ ಹೆಸರಿನಲ್ಲಿ ವಂಚಿಸಿದ ಆರೋಪಿ ದೊರೈ ಸದ್ಯ ತಲೆ ಮರೆಸಿಕೊಂಡಿದ್ದಾನೆ. ಈ ಬಗ್ಗೆ ಬ್ಯಾಂಕ್ನ ಹಾಲಿ ಶಾಖಾ ವ್ಯವಸ್ಥಾಪಕರ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ, ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಆರೋಪಿ ಟಿ. ದೊರೈಯನ್ನು ಬ್ಯಾಂಕ್ ಹುದ್ದೆಯಿಂದ ವಜಾಗೊಳಿಸಲಾಗಿದೆಯೆಂದು ತಿಳಿದು ಬಂದಿದೆ.





