ರಾಹುಲ್ಗೆ ಕಪ್ಪು ಬಾವುಟ ಪ್ರದರ್ಶನ: ಪ್ರತಿಭಟನಾಕಾರರ ಬಿಡುಗಡೆಗೆ ಮಾದಿಗ ಮಹಾಸಭಾ ಒತ್ತಾಯ
![ರಾಹುಲ್ಗೆ ಕಪ್ಪು ಬಾವುಟ ಪ್ರದರ್ಶನ: ಪ್ರತಿಭಟನಾಕಾರರ ಬಿಡುಗಡೆಗೆ ಮಾದಿಗ ಮಹಾಸಭಾ ಒತ್ತಾಯ ರಾಹುಲ್ಗೆ ಕಪ್ಪು ಬಾವುಟ ಪ್ರದರ್ಶನ: ಪ್ರತಿಭಟನಾಕಾರರ ಬಿಡುಗಡೆಗೆ ಮಾದಿಗ ಮಹಾಸಭಾ ಒತ್ತಾಯ](/images/placeholder.jpg)
ತುಮಕೂರು,ಫೆ.12: ರಾಜ್ಯ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಅವರಿಗೆ ಒಳಮೀಸಲಾತಿಗೆ ಒತ್ತಾಯಿಸಿ ಕಪ್ಪು ಬಾವುಟ ಪ್ರದರ್ಶಿಸಿದರೆಂಬ ಕಾರಣಕ್ಕೆ ಬಂಧಿಸಿರುವ ದಲಿತ ಮುಖಂಡರನ್ನು ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯ ಜಾರಿಗೆ ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸಬೇಕೆಂದು ಒತ್ತಾಯಿಸಿ ಮಾದಿಗ ಮಹಾಸಭಾ ತುಮಕೂರು ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ದಸಂಸ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಅವರ ನೇತೃತ್ವದಲ್ಲಿ ದಲಿತ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗಳಿಗೆ ಈ ಸಂಬಂಧ ಮನವಿ ಸಲ್ಲಿಸಿದರು. ಪರಿಶಿಷ್ಟರಲ್ಲಿ ಒಳಮೀಸಲಾತಿ ಕಲ್ಪಿಸಬೇಕೆಂಬುದು ಸುಮಾರು 3 ದಶಕಗಳ ಹೋರಾಟವಾಗಿದೆ. ಕರ್ನಾಟಕ ರಾಜ್ಯದಲ್ಲಿ ಕಳೆದ 7 ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಲೇ ಬಂದಿದ್ದರೂ ಇದುವರೆಗೂ ಸರಕಾರವೇ ನೇಮಕ ಮಾಡಿ, ನಿವೃತ್ತ ನ್ಯಾಯಾಧೀಶರೊಬ್ಬರು ತಯಾರಿಸಿದ ವರದಿಯನ್ನು ಕನಿಷ್ಠ ಸದನದಲ್ಲಿ ಮಂಡಿಸಿ ಚರ್ಚಿಸುವ ಕೆಲಸವನ್ನು ಮಾಡಿಲ್ಲ. ಈ ಬಗ್ಗೆ ನಿರಂತರ ಹೋರಾಟ ನಡೆಸುತ್ತಿರುವ ಸಂಘಟನೆಗಳು ಹಲವಾರು ಬಾರಿ ಗಡುವು ನೀಡಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ, ಮತ್ತೊಮ್ಮೆ ಸರಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ರಾಜ್ಯದಲ್ಲಿ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷರಾದ ರಾಹುಲ್ಗಾಂಧಿ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸ ಲಾಗಿದೆ. ಒಳ ಮೀಸಲಾತಿ ನಮ್ಮ ಹಕ್ಕು, ಅದನ್ನು ಪಡೆದೇ ತೀರಬೇಕು ಎಂಬುವುದು ಮಾದಿಗ ಸಮುದಾಯ ಒಕ್ಕೊರಲ ದ್ವನಿಯಾಗಿದೆ. ಈ ಹಿನ್ನೆಲೆಯಲ್ಲಿ ಕಪ್ಪು ಬಾವುಟ ಪ್ರದರ್ಶಿಸಲಾಗಿದೆ. ಬಂಧಿಸಿರುವ ಎಲ್ಲಾ ಹೋರಾಟಗಾರರನ್ನು ಕೂಡಲೇ ಯಾವುದೇ ಷರತ್ತು ಇಲ್ಲದೆ ಬಿಡುಗಡೆ ಮಾಡಬೇಕು. ಅಲ್ಲದೆ ಕಳೆದ 7 ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿರುವ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೂಡಲೇ ಸದನದಲ್ಲಿ ಮಂಡಿಸಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ವೇಳೆ ಪಿ.ಎನ್.ರಾಮಯ್ಯ ಅವರೊಂದಿಗೆ ದಲಿತ ಮುಖಂಡರಾದ ಬಂಡೆಕುಮಾರ್,ಮಧು.ಟಿ.ಎನ್.,ಕೆಂಪರಾಜು.ಡಿ., ಹುಚ್ಚನರಸಯ್ಯ, ರವಿಕುಮಾರ್, ನಾಗರಾಜ್, ಪೂಜಾ ಹನುಮಯ್ಯ, ರಂಜನ್ ಎ. ಮತ್ತಿತರರು ಪಾಲ್ಗೊಂಡಿದ್ದರು