ಚಾಮರಾಜನಗರ: ಜಿಲ್ಲಾ ಯುವ ಕಾಂಗ್ರೆಸ್, ವಿದ್ಯಾರ್ಥಿ ಕಾಂಗ್ರೆಸ್ ವತಿಯಿಂದ ಪಕೋಡ ತಯಾರಿಸಿ ಪ್ರತಿಭಟನೆ
![ಚಾಮರಾಜನಗರ: ಜಿಲ್ಲಾ ಯುವ ಕಾಂಗ್ರೆಸ್, ವಿದ್ಯಾರ್ಥಿ ಕಾಂಗ್ರೆಸ್ ವತಿಯಿಂದ ಪಕೋಡ ತಯಾರಿಸಿ ಪ್ರತಿಭಟನೆ ಚಾಮರಾಜನಗರ: ಜಿಲ್ಲಾ ಯುವ ಕಾಂಗ್ರೆಸ್, ವಿದ್ಯಾರ್ಥಿ ಕಾಂಗ್ರೆಸ್ ವತಿಯಿಂದ ಪಕೋಡ ತಯಾರಿಸಿ ಪ್ರತಿಭಟನೆ](https://www.varthabharati.in/sites/default/files/images/articles/2018/02/12/12CHN01- CON.jpg)
ಚಾಮರಾಜನಗರ, ಫೆ. 12: ಒಂದು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತಿದ್ದೇವೆ ಎಂದು ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಇದುವರೆಗೆ ಯುವಕರಿಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿದ್ದು, ಪದವಿ ಪಡೆದವರು ಬೀದಿಪಾಲಾಗಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಯುವ ಕಾಂಗ್ರೆಸ್ ಹಾಗೂ ವಿದ್ಯಾರ್ಥಿ ಕಾಂಗ್ರೆಸ್ ಜಂಟಿಯಾಗಿ ಭುವನೇಶ್ವರಿ ವೃತ್ತದಲ್ಲಿ ಶನಿವಾರ ಪಕೋಡ ತಯಾರಿಸಿ ಹಂಚುವ ಮೂಲಕ ಪ್ರತಿಭಟನೆ ನಡೆಸಿತು.
ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನ ಮುಂಭಾಗದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ದೊರೈರಾಜ್ ನೇತೃತ್ವದಲ್ಲಿ ಜಮಾಯಿಸಿದ ಯುವ ಕಾಂಗ್ರೆಸ್ ಪದಾಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತಾ ಶಾ, ಪಕೋಡ ಅಂಗಡಿ ಇಟ್ಟು ಮಾರಾಟ ಮಾಡುತ್ತಿರುವ ಭಿತ್ತ ಪತ್ರವನ್ನು ಪ್ರದರ್ಶನ ಮಾಡಿ, ಕೇಂದ್ರ ಸರ್ಕಾರ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಭುನವೇಶ್ವರಿ ವೃತ್ತ ತಲುಪಿದರು. ಬಳಿಕ ಮೆರವಣಿಗೆಯಲ್ಲಿ ಬಿಜೆಪಿ ಕಚೇರಿಗೆ ತೆರಳಿ ಮಾರಾಟ ಮಾಡಲು ಯತ್ನಿಸಿದ ವೇಳೆ ಪೊಲೀಸರು ಮಾರ್ಗಮಧ್ಯೆ ನಗರದ ಪಟ್ಟಣ ಠಾಣೆಯ ಬಳಿ ತಡೆದು ಎಲ್ಲರನ್ನು ಬಂಧಿಸಿ, ಬಳಿಕ ಬಿಡುಗಡೆ ಮಾಡಿದರು.
ಇದಕ್ಕೂ ಮುನ್ನಾ ಮಾತನಾಡಿದ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ದೊರೆರಾಜ್, ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾಗುತ್ತಿದ್ದು, ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಯುವ ಜನಾಂಗಕ್ಕೆ ಉದ್ಯೋಗ ಕಲ್ಪಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಕೇವಲ ಜನರನ್ನು ಮರಳು ಮಾಡುವ ಕಲೆಯನ್ನು ನರೇಂದ್ರ ಮೋದಿ ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆ. ಈಗಾಗಲೇ ಉದ್ಯೋಗ ದೊರೆಯದೆ ಪದವಿ ಪಡೆದುಕೊಂಡಿರುವ ಲಕ್ಷಾಂತರ ಮಂದಿ ಯುವಕರು ಬೀದಿಗೆ ಬಿದ್ದಿದ್ದಾರೆ. ಪುಟ್ಪಾತ್ನಲ್ಲಿ ಪಕೋಡ ಮಾರುವ ಪರಿಸ್ಥಿತಿಗೆ ತಂದು ನಿಲ್ಲಿಸಿದೆ ಎಂದು ದೂರಿದರು.
ಇದೇ ರೀತಿ ಕೇಂದ್ರ ಸರ್ಕಾರ ಯುವ ಜನಾಂಗಕ್ಕೆ ಉದ್ಯೋಗ ಕಲ್ಪಿಸಲು ವಿಫಲರಾದರೆ ನಿರುದ್ಯೊಗ ಸಮಸ್ಯೆ ಹೆಚ್ಚಾಗಿ ಜನರು ಬದುಕುವುದೇ ಕಷ್ಟವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಈಗಾಲಾದರೂ ಎಚ್ಚೆತ್ತುಕೊಂಡು ಉದ್ಯೋಗ ಸೃಷ್ಟಿ ಮಾಡಲು ಮುಂದಾಗಬೇಕು. ಮಾತು ಕಡಿಮೆ ಮಾಡಿ ಕೆಲಸದ ಕಡೆ ಹೆಚ್ಚು ನಿಗಾ ವಹಿಸಬೇಕು ಎಂಬುವುದು ಯುವ ಕಾಂಗ್ರೆಸ್ ಒತ್ತಾಯವಾಗಿದೆ. ಯುವಶಕ್ತಿ ಸಂಘಟನೆಯಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರಸ್ ಮುಕ್ತ ಭಾರತ ಮಾಡುವುದಿರಲಿ, ತಾವೇ ಮುಂದಿನ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟವಾಗುತ್ತದೆ ಎಂದು ಚೇತನ್ ದೊರೆರಾಜ್ ತಿಳಿಸಿದರು.
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಶಿವಶಂಕರ್, ಜಿಲ್ಲಾ ಉಪಾಧ್ಯಕ್ಷ ಗರನಹಳ್ಳಿ ಮಧುಸೂಧನ್, ಮುಸೀಬ್, ವಿದಾನಸಭಾ ಕ್ಷೇತ್ರಗಳ ಅಧ್ಯಕ್ಷರಾದ ಚಾ.ನಗರ ಶ್ರೀಕಾಂತ್, ಕೊಳ್ಳೇಗಾಲ ಅಬ್ದುಲ್, ಹನೂರು ಅಮೀನ್, ವಿದ್ಯಾರ್ಥಿ ಕಾಂಗ್ರೆಸ್ ಅಧ್ಯಕ್ಷ ಆಶೋಕ್, ಗಿರೀಶ್, ಮನು, ಮಾಧೇಶ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ಜಯಣ್ಣ, ಪ್ರಧಾನ ಕಾರ್ಯಧರ್ಶಿ ಮಲ್ಲಾಜಮ್ಮ, ಕಾವೇರಿ ಶಿವಕುಮಾರ್, ನಾಗರತ್ನ ಮೊದಲಾದವರಿದ್ದರು.