ಬೆಂಗಳೂರು: ಫೆ.16 ರಿಂದ ಬೋನ್ಸಾಯಿ ಗಿಡಗಳ ಪ್ರದರ್ಶನ
ಬೆಂಗಳೂರು, ಫೆ.12: ವೃಕ್ಷ ಬೋನ್ಸಾಯ್ ಸರ್ಕಲ್ ಸಂಸ್ಥೆ ವತಿಯಿಂದ ಬೋನ್ಸಾಯ್ ಮರಗಳ ಪ್ರದರ್ಶನವನ್ನು ಫೆ.16 ರಿಂದ ಮೂರು ದಿನಗಳ ಕಾಲ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷೆ ಎಸ್.ಸುಮಾ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬೋನ್ಸಾಯಿ ಮರಗಳನ್ನು ಬೆಳೆಸಲಾಗುತ್ತದೆ. ಈ ಮರಗಳನ್ನು ಬೆಳೆಸಲು ಬಹಳಷ್ಟು ಕಷ್ಟಕರವಾಗಿದ್ದು, ಸರಿಯಾದ ಸಮಯಕ್ಕೆ ಹಾಗೂ ತಕ್ಕನಾಗಿ ಪೋಷಣೆ ಮಾಡಬೇಕು. ಇಲ್ಲದಿದ್ದರೆ, ಆ ಗಿಡ ನಾಶವಾಗುತ್ತದೆ ಎಂದರು.
ಕಡಿಮೆ ಪ್ರಮಾಣದಲ್ಲಿರುವ ಈ ಗಿಡಗಳನ್ನು ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಪ್ರದರ್ಶನ ಏರ್ಪಡಿಸಿದ್ದು, ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
Next Story