ಶಿವಮೊಗ್ಗ: ತಾಲೂಕು ಕಚೇರಿಯ ಇಬ್ಬರು ಸಿಬ್ಬಂದಿ ಅಮಾನತು; ಜಿಲ್ಲಾಧಿಕಾರಿ ಆದೇಶ
ಶಿವಮೊಗ್ಗ, ಫೆ. 13: ಕರ್ತವ್ಯ ಲೋಪ ಎಸಗಿದ ಆರೋಪದ ಮೇರೆಗೆ ಜಿಲ್ಲೆಯ ಸೊರಬ ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ಹಾಗೂ ಗ್ರಾಮ ಲೆಕ್ಕಾಧಿಕಾರಿಯನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್ ಆದೇಶಿಸಿದ್ದಾರೆ.
ಪ್ರಥಮ ದರ್ಜೆ ಸಹಾಯಕ ಎಂ.ಡಿ.ಲಿಂಗರಾಜು ಹಾಗೂ ಗ್ರಾಮ ಲೆಕ್ಕಾಧಿಕಾರಿ ಎಂ.ಹೆಚ್.ಮೋಹನ್ ಅಮಾನತುಗೊಂಡ ನೌಕರರೆಂದು ಗುರುತಿಸಲಾಗಿದೆ. ಎಂ.ಡಿ.ಲಿಂಗರಾಜುರವರು ಬಾಕಿ ಉಳಿದ ಕಡತಗಳ ವಿಲೇವಾರಿ ಪೂರ್ಣಗೊಳಿಸಿರಲಿಲ್ಲ. ಹಾಗೂ ಭೂ ಮಂಜೂರಾತಿ ಪಟ್ಟಿ ತಯಾರಿಸದಿರುವ ಆರೋಪದಡಿ ಕರ್ತವ್ಯದಿಂದ ಅಮಾನತುಗೊಂಡಿದ್ದಾರೆ.
ಸಾರ್ವಜನಿಕರ ದೂರಿನ ಆಧಾರದ ಮೇಲೆ ಎಂ.ಹೆಚ್.ಮೋಹನ್ರವರನ್ನು ಕರ್ತವ್ಯ ಸ್ಥಾನದಿಂದ ಬೇರೆಡೆಗೆ ವರ್ಗಾವಣೆ ಮಾಡಲಾಗಿತ್ತು. ಆದಾಗ್ಯೂ ಅವರು ಮೂಲ ಸ್ಥಾನದಿಂದ ಬಿಡುಗಡೆಯಾಗಿರಲಿಲ್ಲ. ಈ ಕುರಿತಂತೆ ಜಿಲ್ಲಾಧಿಕಾರಿಗೆ ಮಾಹಿತಿ ರವಾನಿಸಲಾಗಿದ್ದು, ಇಬ್ಬರನ್ನು ಕರ್ತವ್ಯ ಲೋಪದ ಆಧಾರದ ಮೇಲೆ ಅಮಾನತುಗೊಳಿಸಿ ಆದೇಶಿಸಿದ್ದಾರೆ.
Next Story