ಟೋಲ್ ಸಿಬ್ಬಂದಿಗೆ ತಂದೆಯೆದುರೇ ಹಲ್ಲೆ ನಡೆಸಿದ ಬಿಜೆಪಿ ಶಾಸಕನ ಪುತ್ರ
ಸಿಸಿಟಿವಿಯಲ್ಲಿ ದಾಖಲಾದ ಕೃತ್ಯ
ಹೊಸದಿಲ್ಲಿ, ಫೆ.14: ತನ್ನ ಪುತ್ರ ಹಾಗೂ ಬೆಂಬಲಿಗರು ಉತ್ತರ ಪ್ರದೇಶದ ಮಥುರಾದಲ್ಲಿರುವ ಟೋಲ್ ಪ್ಲಾಝಾ ಸಿಬ್ಬಂದಿಗೆ ಹಲ್ಲೆ ನಡೆಸುವುದನ್ನು ಕಾರಿನಲ್ಲಿ ಕುಳಿತು ವೀಕ್ಷಿಸಿದ ಉತ್ತರ ಪ್ರದೇಶದ ಬಲದೇವ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಪೂರಣ್ ಪ್ರಕಾಶ್ ವಿವಾದಕ್ಕೀಡಾಗಿದ್ದಾರೆ. ಘಟನೆ ಮಂಗಳವಾರ ನಡೆದಿದ್ದು ಸಿಸಿಟಿವಿಯಲ್ಲಿ ದಾಖಲಾಗಿದೆ.
ಟೋಲ್ ಪ್ಲಾಝಾದ ವಿಐಪಿ ಪಥವನ್ನು ದಾಟಿ ಮುನ್ನುಗ್ಗಲು ಶಾಸಕರ ಕಾರು ಯತ್ನಿಸಿದಾಗ ಅಲ್ಲಿದ್ದ ತಡೆಯೊಂದು ಕಾರಿನ ಮೇಲೆಯೇ ಬಿದ್ದಿದೆ. ಇದರಿಂದ ಆಕ್ರೋಶಿತರಾದ ಶಾಸಕರ ಪುತ್ರ ಮತ್ತು ಬೆಂಬಲಿಗರು ಕಾರಿನಿಂದಿಳಿದು ಅಲ್ಲಿನ ಸಿಬ್ಬಂದಿಯೊಬ್ಬರಿಗೆ ಹಲ್ಲೆ ನಡೆಸಿದ್ದಾರೆ.
ಟೋಲ್ ಉದ್ಯೋಗಿಗಳ ಪ್ರಕಾರ ಟೋಲ್ ಪ್ಲಾಝಾದ ವಿಐಪಿ ಪಥದಲ್ಲಿ ಒಂದು ಕಾರು ಹಾದುಹೋಗುತ್ತಿದ್ದಂತೆಯೇ ಸಿಬ್ಬಂದಿ ಬ್ಯಾರಿಕೇಡ್ ಇರಿಸಿದಾಗ ಶಾಸಕರ ಕಾರು ಟೋಲ್ ಪಾವತಿಸದೇ ಮುನ್ನುಗ್ಗಲು ಯತ್ನಿಸಿತ್ತು. ಘಟನೆಯ ನಂತರ ಶಾಸಕರ ಬೆಂಬಲಿಗರು ಟೋಲ್ ಬೂತ್ ಮೇಲೆ ಹಿಡಿತ ಸಾಧಿಸಿ ಎಲ್ಲಾ ವಾಹನಗಳನ್ನು ಟೋಲ್ ಪಾವತಿಸದೆಯೇ ಸಾಗಲು ಹಲವು ಗಂಟೆಗಳ ಕಾಲ ಅನುವು ಮಾಡಿಕೊಟ್ಟಿತ್ತು.
ಟೋಲ್ ಉದ್ಯೋಗಿಯ ಮೇಲಿನ ಹಲ್ಲೆ ಸಿಸಿಟಿವಿಯಲ್ಲಿ ದಾಖಲಾಗಿರುವ ಹೊರತಾಗಿಯೂ ದಾಳಿಯನ್ನು ಶಾಸಕರು ಸಮರ್ಥಿಸಿಕೊಂಡಿದ್ದಾರಲ್ಲದೆ ಘಟನೆಗೆ ಟೋಲ್ ಬೂತ್ ಸಿಬ್ಬಂದಿಯನ್ನೇ ದೂಷಿಸಿದ್ದಾರೆ.
‘‘ನಮ್ಮ ಭದ್ರತಾ ವಾಹನಗಳು ಮುಂದೆ ಸಾಗಿದ್ದವು. ಕಾರಿನಲ್ಲಿ ವಿಧಾಯಕ್ (ಶಾಸಕರು) ಎಂದು ಸ್ಪಷ್ಟವಾಗಿ ಬರೆದಿರುವ ಹೊರತಾಗಿಯೂ ನಮಗೆ ತಡೆ ಹೇರಲಾಯಿತು. ಇದು ಹೊಸತೇನಲ್ಲ. ಅವರು ಹೀಗೆ ಆಗಾಗ ಮಾಡುತ್ತಾರೆ’’ ಎಂದು ಶಾಸಕ ಹೇಳಿಕೊಂಡಿದ್ದಾರೆ.