ವಿದ್ಯಾರ್ಥಿಗಳಿಗೆ ಉಚಿತ ಬಿಎಂಟಿಸಿ ಪಾಸ್: ಎಚ್.ಎಂ.ರೇವಣ್ಣ
ಬೆಂಗಳೂರು, ಫೆ.14: ಬಿಎಂಟಿಸಿಯಲ್ಲಿ ಸಂಚರಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ಪಾಸ್ ನೀಡುವ ಯೋಜನೆಯನ್ನು ಬಜೆಟ್ನಲ್ಲಿ ಘೋಷಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಉಚಿತ ಬಸ್ಪಾಸ್ ಜತೆಗೆ ಬಡವರು, ಮಹಿಳೆಯರಿಗಾಗಿ ಇಂದಿರಾ ಪಾಸ್, ಇಂದಿರಾ ಬಸ್ಗಳನ್ನು ಘೋಷಿಸುವಂತೆಯೂ ಮನವಿ ಮಾಡಲಾಗಿದೆ ಎಂದರು.
ಹೆಗಡೆ ಹೇಳಿಕೆಗೆ ಖಂಡನೆ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಕ್ತ ಪರೀಕ್ಷೆ ಮಾಡಿಸಬೇಕೆಂದು ಕೇಂದ್ರ ಸಚಿವ ಅನಂತ್ಕುಮಾರ್ ಹೆಗಡೆ ನೀಡಿರುವ ಹೇಳಿಕೆ ಖಂಡನಾರ್ಹ ಎಂದು ರೇವಣ್ಣ ತಿಳಿಸಿದರು.
ಅನಂತ್ಕುಮಾರ್ ಹೆಗಡೆ ಸಚಿವರಾಗುವ ಮೊದಲು ಏನಾಗಿದ್ದರೆಂದು ಗೊತ್ತಿದೆ. ನಾವು ಅಧಿಕಾರಕ್ಕೆ ಬಂದಿರೋದೇ ಸಂವಿಧಾನವನ್ನು ಬದಲಾಯಿಸಲು ಎನ್ನುತ್ತಾರೆ. ಸಾಹಿತಿಗಳು ಮನುಷ್ಯರಾ, ಹೊಟ್ಟೆಪಾಡಿಗಾಗಿ ಬರೆಯುತ್ತಾರೆಂದು ನೀಡುವ ಹೇಳಿಕೆಗಳು ಕೇಂದ್ರ ಸಚಿವರಾದವರಿಗೆ ಶೋಭೆ ತರುವುದಿಲ್ಲ. ಪ್ರಧಾನಿ ಮೋದಿ ಇವರ ಹೇಳಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ರೇವಣ್ಣ ಆಗ್ರಹಿಸಿದರು.







