ತಾಲೂಕು ಉದ್ಘಾಟನೆ ಚುನಾವಣಾ ರಾಜಕಾರಣದ ಅಂಗ: ಕೋಟ
ಉಡುಪಿ, ಫೆ.14: ಚುನಾವಣೆಗೆ ಎರಡು ತಿಂಗಳು ಬಾಕಿ ಇರುವಾಗ ಹೊಸ ತಾಲೂಕುಗಳನ್ನು ಉದ್ಘಾಟನೆ ಮಾಡುತ್ತಿರುವುದು ಮುಂದಿನ ಚುನಾವಣಾ ರಾಜಕಾರಣದ ಅಂಗ ಮತ್ತು ಚಟುವಟಿಕೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದ್ದಾರೆ.
ಬ್ರಹ್ಮಾವರ ತಾಲೂಕು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು. ಬೈಂದೂರು ಹಾಗೂ ಬ್ರಹ್ಮಾವರ ತಾಲೂಕನ್ನು ನಾನು ಮಂತ್ರಿಯಾಗಿದ್ದಾಗ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಘೋಷಿಸಿ ಅದಕ್ಕೆ ತಲಾ ಎರಡು ಕೋಟಿ ರೂ. ಮೀಸಲಿರಿಸಿ ದ್ದರು. ನಮ್ಮ ಸರಕಾರ ಘೋಷಣೆ ಮಾಡಿ, ಬಳಿಕ ಐದು ವರ್ಷಗಳ ಕಾಲ ಆಡಳಿತ ನಡೆಸಿದ ಸರಕಾರ ಹೊಸ ತಾಲೂಕನ್ನು ಅಧಿಕೃತವಾಗಿ ಪ್ರಾರಂಭ ಮಾಡಿಲ್ಲ. ಆಗಲೇ ಮುಂದುವರೆಸುತ್ತಿದ್ದರೆ ಇಂದು ಈ ಎರಡು ತಾಲೂಕು ಜನರ ಸೇವೆಗೆ ಲಭ್ಯವಾಗಿರುತ್ತಿತ್ತು. ಬಹಳ ಸುಧೀರ್ಘ ಅವಧಿಯ ಬಳಿಕ ಚುನಾವಣೆಗೆ ಎರಡು ತಿಂಗಳು ಬಾಕಿ ಇರುವಾಗ ಉದ್ಘಾಟನೆ ಮಾಡಿದ್ದಾರೆ ಎಂದರು.
94ಸಿ, 94ಸಿಸಿಗೆ ಜಿಲ್ಲೆಯ 40ಸಾವಿರ ಬಡವರು ಅರ್ಜಿ ಹಾಕಿದ್ದಾರೆ. ಇದರಲ್ಲಿ 30ಸಾವಿರಕ್ಕೂ ಅಧಿಕ ಅರ್ಜಿಗಳು ಇಂದಿಗೂ ಬಾಕಿ ಇವೆ. ರಾಜ್ಯದಲ್ಲಿ 9.5ಲಕ್ಷ ಅರ್ಜಿಗಳಲ್ಲಿ 7.5ಲಕ್ಷ ಅರ್ಜಿ ಬಾಕಿ ಇವೆ. ಇದನ್ನು ಸರಕಾರಕ್ಕೆ ಮನವರಿಕೆ ಮಾಡಿಕೊಡಬೇಕಿತ್ತು. ಆದರೆ ಸಮಾರಂಭದಲ್ಲಿ ಜಿಲ್ಲಾಡಳಿತ ನನಗೆ ಮಾತನಾಡಲು ಅವಕಾಶವೇ ನೀಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತ ಪಡಿಸಿದರು.





