ಸಂತ್ರಸ್ತ ನಿರ್ದಿಷ್ಟ ಸಮುದಾಯಕ್ಕೆ ಸೇರಿರುವುದು ಹತ್ಯೆಗೆ ಸಮರ್ಥನೆಯಾಗಲಾರದು: ಸುಪ್ರೀಂ ಕೋಟ್
ಹೊಸದಿಲ್ಲಿ, ಫೆ. 15: ಮೂರು ವರ್ಷಗಳ ಹಿಂದೆ ವ್ಯಕ್ತಿಯೊಬ್ಬರನ್ನು ಥಳಿಸಿ ಹತ್ಯೆಗೈದ ಪ್ರಕರಣದ ಆರೋಪಿಗೆ ಜಾಮೀನು ನೀಡಿದ ಬಾಂಬೆ ಉಚ್ಚ ನ್ಯಾಯಾಲಯದ ನಿರ್ಧಾರವನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದೆ.
ಅಪರಾಧ ವೈಯುಕ್ತಿಕ ದ್ವೇಷ ಪ್ರೇರಿತವಲ್ಲ. ಆದರೆ, ಧರ್ಮದ ಹೆಸರಿನಲ್ಲಿ ಪ್ರಚೋದಿತ ಎಂಬ ಆಧಾರದಲ್ಲಿ ಬಾಂಬೆ ಉಚ್ಚ ನ್ಯಾಯಾಲಯದ ಏಕ ಸದಸ್ಯ ಪೀಠ ಆರೋಪಿಗೆ ಜಾಮೀನು ನೀಡಿತ್ತು.
ಕೊಲೆಯಾದ ವ್ಯಕ್ತಿಯ ತಪ್ಪೆಂದರೆ ಆತ ಇನ್ನೊಂದು ಧರ್ಮದವನಾಗಿದ್ದುದು ಎಂದು ಬಾಂಬೆ ಉಚ್ಚ ನ್ಯಾಯಾಲಯದ ಜಾಮೀನು ಆದೇಶ ತರ್ಕಿಸಿದೆ.
2014 ಜೂನ್ 2ರಂದು ರಾತ್ರಿ ಶೇಖ್ ಮೊಹ್ಸಿನ್ ಮೇಲೆ 23 ವ್ಯಕ್ತಿಗಳಿದ್ದ ಗುಂಪು ಹಾಕಿ ಸ್ಟಿಕ್, ಬ್ಯಾಟ್ ಹಾಗೂ ಕಲ್ಲುಗಳಿಂದ ಹಲ್ಲೆ ನಡೆಸಿತ್ತು. ಮೊಹ್ಸಿನ್ ಉಟ ಮಾಡಲು ತನ್ನ ಮನೆಗೆ ತೆರಳುತ್ತಿದ್ದರು.
ಪ್ರಾಸಿಕ್ಯೂಷನ್ ಪ್ರಕಾರ ಮೊಹ್ಸಿನ್ ಮೇಲೆ ದಾಳಿ ನಡೆಯುವುದಕ್ಕಿಂತ ಗಂಟೆಗೆ ಮುನ್ನ ಹಿಂದೂ ರಾಷ್ಟ್ರ ಸೇನೆಯ ಸಭೆಯಲ್ಲಿ ಇಬ್ಬರು ಅಪ್ರಾಪ್ತರು ಸೇರಿದಂತೆ ದಾಳಿ ನಡೆಸಿದ ಗುಂಪು ಪಾಲ್ಗೊಂಡಿತ್ತು. ಹಸಿರು ಅಂಗಿ ಧರಿಸುವ ಹಾಗೂ ಗಡ್ಡ ಬಿಟ್ಟ ಕಾರಣಕ್ಕೆ ಗುಂಪು ಮೊಹ್ಸಿನ್ ಅನ್ನು ಗುರಿಯಾಗಿರಿಸಿ ದಾಳಿ ನಡೆಸಿತ್ತು. ಸಭೆಯ ಬಳಿಕ ಕೊಲೆ ಆರೋಪಿಗಳು ಅತ್ಯಂತ ಪ್ರಚೋದಿತರಾಗಿದ್ದರು ಎಂದು ಪ್ರಾಸಿಕ್ಯೂಷನ್ ಹೇಳಿತ್ತು.
ಏಕ ಸದಸ್ಯ ಪೀಠದ ಅವಲೋಕನ ಕಠೋರವಾದುದು ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯ, ಮೃತಪಟ್ಟ ವ್ಯಕ್ತಿ (ಮೊಹ್ಸಿನ್) ನಿರ್ದಿಷ್ಟ ಸಮುದಾಯಕ್ಕೆ ಸೇರಿರುವುದು ಹತ್ಯೆಗೆ ಸಮರ್ಥನೆಯಾಗಲಾರದು ಎಂದಿದೆ.