ಮೇಯರ್ ಆಗಮಿಸುವುದಕ್ಕೂ ಮುನ್ನವೇ ಶಿಲಾನ್ಯಾಸ ನೆರವೇರಿಸಿದ ಜನಪ್ರತಿನಿಧಿಗಳು!
ಶಿವಮೊಗ್ಗ, ಫೆ. 15: ನಗರದ ಎಲ್ಎಲ್ಆರ್ ರಸ್ತೆಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ಕೋಟ್ಯಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಹೂ, ಹಣ್ಣು ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಗುರುವಾರ ಗುದ್ದಲಿಪೂಜೆ ಸಮಾರಂಭ ಆಯೋಜಿಸಲಾಗಿತ್ತು. ಆದರೆ ಮೇಯರ್ ಆಗಮಿಸುವ ಮುನ್ನವೇ ಗುದ್ದಲಿಪೂಜೆ ನೆರವೇರಿಸಿ ಹಿಂದಿರುಗಿದ ಘಟನೆ ನಡೆದಿದ್ದು, ಇದು ಪಾಲಿಕೆ ವಲಯದಲ್ಲಿ ವ್ಯಾಪಕ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಕಾರ್ಯಕ್ರಮ ಮುಗಿದಿರುವ ಮಾಹಿತಿಯಿಲ್ಲದ ಮೇಯರ್ ಕೇಬಲ್ ಬಾಬುರವರು ನಿಗದಿತ ಅವಧಿಗೆ ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ ಕಾರ್ಯಕ್ರಮ ಪೂರ್ಣಗೊಂಡು, ಜನಪ್ರತಿನಿಧಿಗಳೆಲ್ಲ ಹಿಂದಿರುಗಿರುವ ಮಾಹಿತಿ ಗೊತ್ತಾಗಿದೆ. ಹೀಗಾಗಿ ಸಂಬಂಧಿಸಿದ ಪಾಲಿಕೆ ಅಧಿಕಾರಿಗಳನ್ನು ಮೇಯರ್ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆಯ ಕುರಿತಂತೆ ಗುರುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮೇಯರ್ ಕೇಬಲ್ ಬಾಬು ಮಾತನಾಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ಧಾರೆ. 'ವಾರ್ಡ್ ಕಾರ್ಪೋರೇಟರ್ ಐಡಿಯಲ್ ಗೋಪಿ ಹಾಗೂ ಅಧಿಕಾರಿಗಳು ಕಾರ್ಯಕ್ರಮದ ಮಾಹಿತಿ ನೀಡಿದ್ದರು. ಅದರಂತೆ ನಮ್ಮ ವಾರ್ಡ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಅವರು ಸೂಚಿಸಿದ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮದ ಸ್ಥಳಕ್ಕೆ ತೆರಳಿದ್ದೇನೆ. ಆದರೆ ಅಷ್ಟರಲ್ಲಾಗಲೇ ಶಾಸಕರು ಶಿಲಾನ್ಯಾಸ ನೆರವೇರಿಸಿ ತೆರಳಿದ್ದ ಮಾಹಿತಿ ನನಗೆ ಗೊತ್ತಾಯಿತು. ಈ ಘಟನೆಯು ನನಗೆ ಅತೀವ ನೋವುಂಟು ಮಾಡುವುದರ ಜೊತೆಗೆ ಬೇಸರಕ್ಕೆ ಕಾರಣವಾಯಿತು. ಕನಿಷ್ಠ ಸೌಜನ್ಯಕ್ಕಾದರೂ ನನ್ನನ್ನು ಸಂಪರ್ಕಿಸಿ ಶಿಲಾನ್ಯಾಸ ನೆರವೇರಿಸುತ್ತಿರುವ ಮಾಹಿತಿ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿರ್ಮಾಣ: ಎಲ್ಎಲ್ಆರ್ ರಸ್ತೆಯ ಗೌರವ ಲಾಡ್ಜ್ ಮುಂಭಾಗದ ಪಾಲಿಕೆಗೆ ಸೇರಿದ ಜಾಗದಲ್ಲಿ ಅತ್ಯಾಧುನಿಕ ವ್ಯವಸ್ಥೆಯನ್ನೊಳಗೊಂಡ ಹೂ, ಹಣ್ಣು, ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಲಾಗುತ್ತಿದೆ. 5.65 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಈ ಕಾಮಗಾರಿಗೆ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ವಾರ್ಡ್ ಕಾರ್ಪೋರೇಟರ್ ಐಡಿಯಲ್ ಗೋಪಿ, ಕಾರ್ಪೋರೇಟರ್ ಎನ್.ಜೆ.ರಾಜಶೇಖರ್ ಸೇರಿದಂತೆ ಮೊದಲಾದವರಿದ್ದರು.
'ಯಾವುದೇ ಲೋಪವಾಗಿಲ್ಲ'
'ನಿಗದಿತ ಸಮಯಕ್ಕಿಂತ ತಡವಾಗಿ ಕಾರ್ಯಕ್ರಮ ನಡೆಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಾಸಕರು ಮೇಯರ್ ಗಾಗಿ ಕಾದಿದ್ದಾರೆ. ಮತ್ತೊಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ತೆರಳಬೇಕಾಗಿದ್ದ ಕಾರಣದಿಂದ ಶಿಲಾನ್ಯಾಸ ನೆರವೇರಿಸಿ ತೆರಳಿದ್ದಾರೆ. ಶಿಲಾನ್ಯಾಸ ನಡೆಯುವ ವೇಳೆ ಮೇಯರ್ ರವರ ಮೊಬೈಲ್ಗೆ ಕರೆ ಮಾಡಿ ಸಂಪರ್ಕಿಸಲು ಯತ್ನಿಸಿದ್ದೇವೆ. ಆದರೆ ಅವರು ಕರೆಯನ್ನು ಸ್ವೀಕರಿಸಲಿಲ್ಲ. ಈ ವಿಷಯದಲ್ಲಿ ನಮ್ಮಿಂದ ಯಾವುದೇ ಲೋಪವಾಗಿಲ್ಲ. ಕಾರ್ಯಕ್ರಮ ಆಯೋಜಿಸಿದ್ದು, ಸಮಯ ನಿಗದಿಪಡಿಸಿದ್ದು ಅಧಿಕಾರಿಗಳಾಗಿದ್ದಾರೆ ಎಂದು ವಾರ್ಡ್ ಕಾರ್ಪೋರೇಟರ್, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರೂ ಆದ ಐಡಿಯಲ್ ಗೋಪಿಯವರು ಮಾಹಿತಿ ನೀಡಿದ್ದಾರೆ.