5 ವರ್ಷಗಳಲ್ಲಿ ವರದಿಯಾದ ಬ್ಯಾಂಕ್ ವಂಚನೆ ಪ್ರಕರಣಗಳು ಎಷ್ಟು ಗೊತ್ತಾ?
ಆರ್ಟಿಐನಿಂದ ಬಹಿರಂಗವಾಯ್ತು ಆಘಾತಕಾರಿ ಮಾಹಿತಿ
ಹೊಸದಿಲ್ಲಿ, ಫೆ.16: ಆಭರಣ ಉದ್ಯಮಿ ನೀರವ್ ಮೋದಿ ನಡೆಸಿರುವ 11,400 ಕೋಟಿ ರೂ. ಮೊತ್ತದ ಬ್ಯಾಂಕ್ ವಂಚನೆಯಿಂದ ಹೂಡಿಕೆದಾರರ ಸಹಿತ ಇಡೀ ದೇಶವೇ ಆಘಾತಗೊಂಡಿದೆ. ಆದರೆ ಭಾರತೀಯ ರಿಸರ್ವ್ ಬ್ಯಾಂಕ್ ದಾಖಲಿಸಿರುವ ಅಂಕಿಅಂಶಗಳ ಪ್ರಕಾರ ಈ ಸಮಸ್ಯೆಯು ಇನ್ನಷ್ಟು ಆಳ ಮತ್ತು ಅಗಲವಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸುದ್ದಿ ಸಂಸ್ಥೆ ರಾಯ್ಟರ್ಸ್ ನ ವರದಿಗಾರರು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದುಕೊಂಡಿರುವ ಆರ್ಬಿಐ ಅಂಕಿಅಂಶಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಸರಕಾರಿ ಸ್ವಾಮ್ಯದ ಬ್ಯಾಂಕುಗಳು 8,670 ವಂಚನಾ ಪ್ರಕರಣಗಳನ್ನು ವರದಿ ಮಾಡಿವೆ. ಮಾರ್ಚ್ 31, 2017ರ ವರೆಗೆ ಲೆಕ್ಕ ಹಾಕಲಾಗಿರುವ ಈ ಪ್ರಕರಣಗಳ ಒಟ್ಟು ಮೌಲ್ಯ 61,000 ಕೋಟಿ ರೂ. ಆಗಿದೆ.
ಸಾಲಗಾರನು ಉದ್ದೇಶಪೂರ್ವಕವಾಗಿ ಸಾಲ ನೀಡಿದ ಬ್ಯಾಂಕನ್ನು ವಂಚಿಸುವ ದೃಷ್ಟಿಯಿಂದ ಸಾಲ ಮರುಪಾವತಿ ಮಾಡದೆ ಇರುವುದನ್ನು ಭಾರತದಲ್ಲಿ ಸಾಲ ವಂಚನೆ ಪ್ರಕರಣ ಎಂದು ಕರೆಯಲಾಗುತ್ತದೆ. ಅನೇಕ ವರ್ಷಗಳಿಂದ ಕಳಪೆ ಸಾಲ ನೀಡುವಿಕೆ ಕ್ರಮವನ್ನು ಅನುಸರಿಸುತ್ತಿದ್ದು, ಈಗಾಗಲೇ ಒತ್ತಡದಲ್ಲಿರುವ ಬ್ಯಾಂಕಿಂಗ್ ಕ್ಷೇತ್ರದಲ್ಲಿರುವ ಸಮಸ್ಯೆಯ ಆಳವನ್ನು ಈ ಸಂಖ್ಯೆ ಬಯಲು ಮಾಡುತ್ತದೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ.
2012-13ರಲ್ಲಿ 63.57 ಬಿಲಿಯನ್ ರೂ. ಆಗಿದ್ದ ಬ್ಯಾಂಕ್ ವಂಚನೆಯ ಮೊತ್ತ ಪ್ರಸಕ್ತ ವಿತ್ತೀಯ ವರ್ಷದಲ್ಲಿ 176.34 ಬಿಲಿಯನ್ ರೂ.ಗೆ ಏರಿದೆ. ಇದರಲ್ಲಿ ಪಂಜಾಬ್ ನ್ಯಾಶನಲ್ ಬ್ಯಾಂಕ್ ವಂಚನೆಯನ್ನು ಸೇರಿಸಲಾಗಿಲ್ಲ. ದೇಶದ ಎರಡನೇ ಅತೀದೊಡ್ಡ ಸರಕಾರಿ ಸ್ವಾಮ್ಯದ ಸಾಲ ನೀಡುವ ಬ್ಯಾಂಕ್ ಆಗಿರುವ ಪಿಎನ್ಬಿ, ಬುಧವಾರದಂದು ನೀಡಿರುವ ಹೇಳಿಕೆಯಲ್ಲಿ ಬ್ಯಾಂಕ್ನ ಒಂದೇ ಶಾಖೆಯ ಇಬ್ಬರು ಕಿರಿಯ ಅಧಿಕಾರಿಗಳು ಮೋಸದ ಸಾಲದ ರೂಪದಲ್ಲಿ ಸಂಸ್ಥೆಗಳಿಗೆ 1.77 ಬಿಲಿಯನ್ ಡಾಲರ್ಅನ್ನು ವರ್ಗಾಯಿಸಿದ್ದಾರೆ. ಈ ಸಂಸ್ಥೆಗಳಲ್ಲಿ ಹೆಚ್ಚಿನವುಗಳನ್ನು ನೀರವ್ ಮೋದಿ ನಿಯಂತ್ರಿಸುತ್ತಿದ್ದರು ಎಂದು ತಿಳಿಸಿದೆ.
ಇದು ವಂಚನೆಯ ಕೇವಲ ಸಣ್ಣ ಭಾಗವಾಗಿದ್ದು, ಇದರ ಮೂಲವು ಮತ್ತಷ್ಟು ಆಳವಾಗಿರಬಹುದು. ಅದೇ ಚಿಂತೆಯ ವಿಷಯವಾಗಿದೆ ಎಂದು ದಿವಾಳಿತನ ಪ್ರಕರಣಗಳಲ್ಲಿ ಸಲಹೆ ನೀಡುವ ನಿತೀಶ್ ದೇಸಾಯಿ ಅಸೋಸಿಯೇಟ್ಸ್ ಎಂಬ ಕಾನೂನು ಸಂಸ್ಥೆಯ ಜೊತೆಗಾರರಾದ ಪ್ರತಿಭಾ ಜೈನ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಆರ್ಬಿಐ ತಕ್ಷಣ ಪ್ರತಿಕ್ರಿಯೆ ನೀಡಿಲ್ಲವಾದರೂ, 2017ರಲ್ಲಿ ಬಿಡುಗಡೆ ಮಾಡಿರುವ ಆರ್ಥಿಕ ಸ್ಥಿರತೆ ವರದಿಯಲ್ಲಿ, ಬ್ಯಾಂಕ್ಗಳು ಮತ್ತು ಆರ್ಥಿಕ ಸಂಸ್ಥೆಗಳಲ್ಲಿ ನಡೆಯುವ ವಂಚನೆಗಳು ವಿತೀಯ ಕ್ಷೇತ್ರದಲ್ಲಿ ತಲೆಯೆತ್ತುತ್ತಿರುವ ಹೊಸ ಅಪಾಯಗಳಾಗಿವೆ ಎಂದು ತಿಳಿಸಿತ್ತು.
ಭಾರತೀಯ ಬ್ಯಾಂಕ್ಗಳು ತಮ್ಮಲ್ಲಿರುವ ಕೆಟ್ಟ ಸಾಲಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸುವಂತೆ, ಅವುಗಳ ವಸೂಲಾತಿ ಪ್ರಕ್ರಿಯೆಯನ್ನು ವೇಗಗೊಳಿಸುವಂತೆ, ಮತ್ತು ವಂಚನೆ ಪ್ರಕರಣಗಳನ್ನು ನಿರ್ವಹಿಸಲ್ಪಡದ ಆಸ್ತಿ ಎಂದು ಮುಚ್ಚುವುದನ್ನು ತಡೆಯುವಂತೆ ಒತ್ತಡ ಹೇರಿದ ಆರ್ಬಿಐಯ ಕಾರ್ಯವೈಖರಿ ಶ್ಲಾಘನೆಗೆ ಒಳಗಾಗಿತ್ತು.
ಆದರೆ ಕೆಲವು ಟೀಕಾಕಾರರ ಪ್ರಕಾರ, ಸಾಲ ಮರುಪಾವತಿ ಮಾಡದವರ ಮತ್ತು ವಂಚನಾ ಸಾಲಗಳ ಬಗ್ಗೆ ಮಾಹಿತಿಯನ್ನು ಹಂಚುವಲ್ಲಿ ಆರ್ಬಿಐ ಮುಚ್ಚುಮರೆ ಮಾಡಿದೆ. ವೈಯಕ್ತಿಕ ಪ್ರಕರಣಗಳಲ್ಲಿ ಮಾಹಿತಿ ನೀಡಲು ಇರುವ ತಡೆಗಳು ಮತ್ತು ಭಾದಿತ ಬ್ಯಾಂಕ್ಗಳ ಮೇಲೆ ಹೂಡಿಕೆದಾರರು ಒತ್ತಡ ಹೇರುವ ಪರಿಣಾಮವಾಗಿ ಸಾಲವನ್ನು ವಸೂಲಿ ಮಾಡುವುದು ಮತ್ತಷ್ಟು ಕಷ್ಟವಾಗಬಹುದು ಎಂಬ ಆತಂಕದಿಂದ ಆರ್ಬಿಐ ಹೀಗೆ ಮಾಡಿರಬಹುದು ಎಂದು ತಜ್ಞರು ತಿಳಿಸುತ್ತಾರೆ.
ಸದ್ಯ ಆರ್ಬಿಐಗೆ ವರದಿ ಮಾಡಲಾಗಿರುವ ಪ್ರಕರಣಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡಿರುವ ಕಾರಣ ವಾಸ್ತವದಲ್ಲಿ, ಭಾರತದಾದ್ಯಂತ ನಡೆದಿರುವ ಬ್ಯಾಂಕ್ ವಂಚನಾ ಪ್ರಕರಣಗಳು ಬಹಳ ಹೆಚ್ಚಾಗಿರಬಹುದು.
ಭಾರತದ 21 ಸರಕಾರಿ ಸ್ವಾಮ್ಯದ ಬ್ಯಾಂಕ್ಗಳ ಪೈಕಿ 20 ಬ್ಯಾಂಕ್ಗಳ ಅಂಕಿಅಂಶವನ್ನು ನೀಡುವಂತೆ ರಾಯ್ಟರ್ಸ್ ವರದಿಗಾರರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಹಾಕಿದ್ದರು. ಅದಕ್ಕೆ ಪ್ರತಿಯಾಗಿ ಅವರು ಹದಿನೈದು ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದ್ದಾರೆ.
ಕಳೆದ ಐದು ವಿತ್ತೀಯ ವರ್ಷಗಳಲ್ಲಿ 389 ವಂಚನಾ ಪ್ರಕರಣಗಳಲ್ಲಿ 6,562 ಕೋಟಿ ರೂ. ಕಳೆದುಕೊಳ್ಳುವ ಮೂಲಕ ಪಿಎನ್ಬಿ ಈ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಕಳೆದ ಐದು ವಿತ್ತೀಯ ವರ್ಷಗಳಲ್ಲಿ ಬ್ಯಾಂಕ್ಗಳು ಆರ್ಬಿಐಗೆ ನೀಡಿರುವ ವರದಿಗಳಲ್ಲಿ ತಿಳಿಸಲಾಗಿರುವ ಬ್ಯಾಂಕ್ ವಂಚನೆಯ ಸ್ವಭಾವ ಮತ್ತು ವಿಧಾನಗಳ ವಿಸ್ತಾರವಾದ ಮಾಹಿತಿಯನ್ನು ಪಡೆಯಲು ವರದಿಗಾರರಿಗೆ ಸಾಧ್ಯವಾಗಿಲ್ಲ.
ಪಿಎನ್ಬಿ ನಂತರ 389 ಪ್ರಕರಣಗಳಲ್ಲಿ 4,473 ಕೋಟಿ ರೂ. ನೊಂದಿಗೆ ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಅತೀ ಹೆಚ್ಚಿನ ಸಾಲ ವಂಚನೆಯನ್ನು ದಾಖಲಿಸಿದೆ. ಈ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಬ್ಯಾಂಕ್ ಆಫ್ ಇಂಡಿಯಾ ಪಡೆದುಕೊಂಡಿದ್ದು 231 ಪ್ರಕರಣಗಳಲ್ಲಿ 4,050 ಕೋಟಿ ರೂ. ವಂಚನೆಯನ್ನು ದಾಖಲಿಸಿದೆ.
ದೇಶದ ಅತೀದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 1,069 ಸಾಲ ವಂಚನೆ ಪ್ರಕರಣಗಳನ್ನು ದಾಖಲಿಸಿದ್ದರೂ ಕಳೆದುಕೊಂಡಿರುವ ಮೊತ್ತವನ್ನು ಬಹಿರಂಂಗಪಡಿಸಿಲ್ಲ. ಭಾರತದಲ್ಲಿ ಹೆಚ್ಚಾಗುತ್ತಿರುವ ಕೆಟ್ಟ ಸಾಲಗಳ ಪರಿಣಾಮವಾಗಿ ಕಳೆದ ವರ್ಷ ಸರಕಾರವು, ಪ್ರಸಕ್ತ ವಿತ್ತೀಯ ವರ್ಷ ಮತ್ತು ಮುಂದಿನ ವರ್ಷದಲ್ಲಿ 32 ಬಿಲಿಯನ್ ಡಾಲರ್ ಮೊತ್ತವನ್ನು ಬ್ಯಾಂಕ್ಗಳಿಗೆ ನೀಡಲು ನಿರ್ಧರಿಸಿತು. ಆದರೆ ಭಾರತೀಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಟ್ಟ ಸಾಲದ ಸಮಸ್ಯೆಯನ್ನು ನಿವಾರಿಸಲು ಇಂಥ ಸಾಲಗಳು ಹೆಚ್ಚಾಗಲು ಕಾರಣವಾಗಿರುವ ಸಾಲ ಪಾವತಿ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರುವ ಅಗತ್ಯತೆಯೂ ಇದೆ ಎಂದು ವಿಶ್ಲೇಷಕರು ಮತ್ತು ಕ್ರೆಡಿಟ್ ರೇಟಿಂಗ್ ಸಂಸ್ಥೆಗಳು ಹಿಂದಿನಿಂದಲೂ ಎಚ್ಚರಿಸುತ್ತಲೇ ಬಂದಿದೆ.
ವಿಜಯ ಮಲ್ಯರಂಥ ರಾಜಕೀಯ ಸಂಪರ್ಕವನ್ನು ಹೊಂದಿರುವ ಉದ್ಯಮಪತಿಗಳಿಗೆ ಯಾವುದೇ ಕಾರ್ಯತತ್ಪರತೆ ತೋರದೆ ಸಾಲವನ್ನು ಬಿಡಗಡೆ ಮಾಡುವ ಅಥವಾ ಸರಕಾರಿ ಅಧಿಕಾರಿಗಳು ತಾವು ಪ್ರೋತ್ಸಾಹ ನೀಡಲು ಬಯಸುವ ಕ್ಷೇತ್ರಗಳಿಗೆ ನಿಧಿ ಬಿಡುಗಡೆ ಮಾಡಲು ಒತ್ತಡ ಹೇರಿದ ಪರಿಣಾಮವಾಗಿ ಸಾಲವನ್ನು ನೀಡುವ ಬ್ಯಾಂಕ್ಗಳ ವರ್ತನೆಯನ್ನೂ ತಜ್ಞರು ಟೀಕಿಸಲಾಗಿದೆ. ಬ್ಯಾಂಕ್ಗಳಿಗೆ ಮರುಪಾವತಿಸದಿರುವ ಉದ್ದೇಶದಿಂದಲೇ ತನ್ನ ಮಾಲಕತ್ವದ ಕಿಂಗ್ಫಿಶರ್ ಏರ್ಲೈನ್ಸ್ ಸಂಸ್ಥೆಯ ಹೆಸರಿನಲ್ಲಿ ಸಾಲ ಪಡೆದು ನಂತರ ಸಂಸ್ಥೆ ಅನುಭವಿಸಿದ ನಷ್ಟವನ್ನು ಬ್ಯಾಂಕ್ಗಳ ಮೇಲೆ ಹಾಕಿದ ಆರೋಪವನ್ನು ಮಲ್ಯಾ ಎದುರಿಸುತ್ತಿದ್ದಾರೆ. ಆದರೆ ಈ ಆರೋಪವನ್ನು ಅವರು ತಳ್ಳಿಹಾಕುತ್ತಾರೆ.