ಚಾಮರಾಜನಗರ: ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ಹಿನ್ನೆಲೆ; ಸಿಹಿ ಹಂಚಿ ಸಂಭ್ರಮಾಚರಣೆ
ಚಾಮರಾಜನಗರ, ಫೆ. 17: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಅಂತಿಮ ತೀರ್ಪು ಕರ್ನಾಟಕಕ್ಕೆ ಹೆಚ್ಚು ಲಾಭದಾಯಕವಾಗಿದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ನಗರದ ಸತ್ತಿ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಮುಂದೆ ಪಕ್ಷದ ಜಿಲ್ಲಾಧ್ಯಕ್ಷ ಪಿ. ಮರಿಸ್ವಾಮಿ ನೇತೃತ್ವದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಕಾಂಗ್ರೆಸ್ ಪರವಾದ ಘೋಷಣೆಗಳನ್ನು ಕೂಗಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿಕೆ ವಿಜಯೋತ್ಸವ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ. ಮರಿಸ್ವಾಮಿ, ಸುಪ್ರೀಂ ಕೋರ್ಟ್ ಉತ್ತಮವಾದ ತೀರ್ಪು ನೀಡಿದ್ದು, ನಾಲ್ಕು ರಾಜ್ಯಗಳ ರೈತರ ಹಿತವನ್ನು ಕಾಪಾಡುವಲ್ಲಿ ಹೆಚ್ಚು ಮಹತ್ವವನ್ನು ನೀಡಿದೆ. ಕರ್ನಾಟಕದ ರೈತರಿಗೆ ಈ ತೀರ್ಪಿನಿಂದ ಹೆಚ್ಚು ಅನುಕೂಲವಾಗುತ್ತಿದ್ದು, ಕಾವೇರಿ ಕೊಳ್ಳದ ರೈತರಿಗೆ ಆಶಾದಾಯಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಟ್ಟಬುದ್ದಿ, ತೋಟೇಶ್, ಗುರುಸ್ವಾಮಿ, ಮಹಮದ್ ಅಸ್ಗರ್, ಕಾಗಲವಾಡಿ ಚಂದ್ರು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ಜಯಣ್ಣ, ಚಿಕ್ಕಮಹದೇವ್, ನಾಗಯ್ಯ, ಶಿವಕುಮಾರ್, ಪ್ರಕಾಶ್ ಮೊದಲಾದವರಿದ್ದರು.