ತುಮಕೂರು: ಸುವರ್ಣ ಗ್ರಾಮ ಯೋಜನೆಯ ಕಾಮಗಾರಿಗಳು ಸಂಪೂರ್ಣ; ಸುರೇಶ್ಗೌಡ
![ತುಮಕೂರು: ಸುವರ್ಣ ಗ್ರಾಮ ಯೋಜನೆಯ ಕಾಮಗಾರಿಗಳು ಸಂಪೂರ್ಣ; ಸುರೇಶ್ಗೌಡ ತುಮಕೂರು: ಸುವರ್ಣ ಗ್ರಾಮ ಯೋಜನೆಯ ಕಾಮಗಾರಿಗಳು ಸಂಪೂರ್ಣ; ಸುರೇಶ್ಗೌಡ](https://www.varthabharati.in/sites/default/files/images/articles/2018/02/18/IMG-20180217-WA0069.jpg)
ತುಮಕೂರು,ಫೆ.18: ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ 3 ಹಂತದ ಸುವರ್ಣ ಗ್ರಾಮ ಯೋಜನೆಯಡಿ ಮೂಂಜೂರಾಗಿದ್ದ ಎಲ್ಲಾ ಗ್ರಾಮಗಳಲ್ಲಿ ನಿಗದಿತ ಕಾಲಮಿತಿಗೂ ಮುನ್ನ ಕಾಮಗಾರಿಗಳನ್ನು ಪೂರ್ಣಗೊಳಿಸಿ ನಾಗರಿಕರಿಗೆ ಅನಕೂಲವಾಗುವಂತೆ ಲೋಕಾರ್ಪಣೆ ಮಾಡಲಾಗಿದೆ ಎಂದು ಶಾಸಕ ಬಿ ಸುರೇಶ್ಗೌಡ ತಿಳಿಸಿದ್ದಾರೆ.
ತುಮಕೂರು ತಾಲೂಕು ತಿಮ್ಮರಾಜನಹಳ್ಳಿ ಗ್ರಾ,ಪಂ ವ್ಯಾಪ್ತಿಯ ತಿಮ್ಮರಾಜನಹಳ್ಳಿ ಗ್ರಾಮದಲ್ಲಿ ರೂ 1 ಕೋಟಿ ಮೊತ್ತದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತಿದ್ದ ಅವರು, ಅಭಿವೃಧ್ದಿ ವಿಷಯದಲ್ಲಿ ರಾಜ್ಯದಲ್ಲೇ ನಂ 1 ಸ್ಥಾನದಲ್ಲಿರುವ ತುಮಕೂರು ಗ್ರಾಮಾಂತರ ಕ್ಷೇತ್ರ, ಅಭಿವೃಧ್ದಿಯ ಎಲ್ಲ ರಂಗಗಳಲ್ಲಿ ಮೊದಲ ಸ್ಥಾನದಲ್ಲಿದೆ. ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಲ್ಲೂ ಕೂಡಾ ಈಗಾಗಲೇ ಗ್ರಾಮಗಳನ್ನು ಆಯ್ಕೆ ಮಾಡಿ ಮಾದರಿ ಗ್ರಾಮಗಳನ್ನಾಗಿ ಮಾಡಲು ಗ್ರಾಮಸಭೆ ನಡೆಸಿ, ಕಾಮಗಾರಿಗಳನ್ನು ಗುರುತಿಸಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಚುನಾವಣೆಗೆ ಮುನ್ನವೇ ಇದರ ಕಾಮಗಾರಿ ಕೂಡಾ ಪೂರ್ಣಗೊಳಿಸಲಾಗುವುದು ಎಂದರು.
ತಿಮ್ಮರಾಜನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹೊಸಪಾಳ್ಯ,ಮಷಣಾಪುರ, ಚನ್ನೇನಹಳ್ಳಿ ಗೊಲ್ಲರಹಟ್ಟಿ, ಅಜ್ಜಗೊಂಡನಹಳ್ಳಿ ಗ್ರಾಮಗಳಲ್ಲಿ ಸಿಮೆಂಟ್ ರಸ್ತೆ ಸಿಮೆಂ1ಟ್ ಚರಂಡಿ ನಿರ್ಮಾಣಮಾಡಲಾಗಿದೆ.ಈ ಪಂಚಾಯತ್ ನ ಎಲ್ಲ ಗ್ರಾಮಗಳಿಗೆ, ಎಲ್ಲ ಮನೆ ಮನೆಗೆ ಕುಡಿಯುವ ನೀರಿನ ನಲ್ಲಿ ಸಂಪರ್ಕ ಕೊಡಿಸಲಾಗಿದೆ. ಮನೆ ಮನೆಗೆ ಕುಡಿಯುವ ನೀರು ಸರಬರಾಜು ಮಾಡಲು ಓವರ್ಹೆಡ್ ಟ್ಯಾಂಕ್ಗಳ ನಿರ್ಮಾಣ ಮಾಡಲಾಗಿದೆ ಎಂದು ತಿಮ್ಮರಾಜನಹಳ್ಳಿ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟನೆ ಮಾಡಿ ಶಾಸಕರು ಮಾಹಿತಿ ನೀಡಿದರು,.
ತುಮಕೂರು ಗ್ರಾಮಾಂತರ ಕ್ಷೇತ್ರವನ್ನು ಸಮಸ್ಯೆ ಮುಕ್ತ ಕ್ಷೇತ್ರವನ್ನಾಗಿ ಮಾಡಲು ದಿನ ನಿತ್ಯ ಅಭಿವೃದ್ದಿಯ ಮಂತ್ರ ಬಿಟ್ಟರೆ ಬೇರೆ ಏನನ್ನು ಮಾತನಾಡುತ್ತಿಲ್ಲ. ಅಭಿವೃಧ್ದಿ ಚಿಂತನೆ ಮಾಡುವ ನಾನು ಕ್ಷೇತ್ರದ ಮತದಾರರಿಗೆ ಎಲ್ಲ ರೀತಿಯಲ್ಲಿ ಸ್ಪಂದಿಸಿದ್ದೇನೆ. ಕ್ಷೇತ್ರದ ಜನತೆಯ ಸೇವೆಗೆ ಸದಾ ಸಿದ್ದನಿದ್ದೇನೆ. ಬೆಳ್ಳಾವಿ ಹೋಬಳಿಯು ಹೇಮಾವತಿ ನೀರಿನಿಂದ ವಂಚಿತವಾಗಿದ್ದನ್ನು ಗುರುತಿಸಿ ಏತ ನೀರಾವರಿ ಮೂಲಕ ಬೆಳ್ಳಾವಿ ಹೋಬಳಿಯ 6 ಕೆರೆಗಳಿಗೆ ಹೇಮಾವತಿ ನೀರು ಹರಿಸಲು ಯೋಜನೆ ರೂಪಿಸಿ ನೀರು ತರಲಾಗಿದೆ. 2 ನೇ ಹಂತದ ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಬೆಳ್ಳಾವಿ ಹೋಬಳಿಯ ಬಗರಹುಕುಂ ಸಾಗುವಳಿ ಜಮೀನು ಭೂಸ್ವಾದೀನ ಆಗಿದ್ದನ್ನು ಸಕ್ರಮ ಮಾಡಿ, ರೈತರಿಗೆ ಪ್ರತಿ ಎಕರೆಗೆ 30 ರಿಂದ 40 ಲಕ್ಷ ರೂ ಪರಿಹಾರ ಬರುವಂತೆ ಮಾಡಿದ್ದೇನೆ ಎಂದು ಶಾಸಕ ಬಿ.ಸುರೇಶಗೌಡ ತಿಳಿಸಿದರು,
ಈ ವೇಳೆ ಜಿ.ಪಂ ಸದಸ್ಯರಾದ ಶಿವಮ್ಮ ಡಾ ನಾಗರಾಜು, ತಾ,ಪಂ ಸದಸ್ಯರಾದ ಶಿವಣ್ಣ,ಕವಿತ ರಮೇಶ, ಗ್ರಾ,ಪಂ ಅಧ್ಯಕ್ಷ ಶಿವಕುಮಾರ್,ಮಾಜಿ ಅಧ್ಯಕ್ಷ ಜಯರಾಮಯ್ಯ,ಮುಖಂಡರಾದ ಶಿವರಾಜು,ದಯಾನಂದ, ಕುರಿಕೆಂಪನಹಳ್ಳಿ ರಾಜಣ್ಣ,ಬಾಳೇ ಎಲೆ ಮೂರ್ತಿ, ಮೋಹನ, ಗಂಗಾಧರ, ಚಂದ್ರಣ್ಣ ಮತ್ತಿತರರು ಉಪಸ್ಥಿತರಿದ್ದರು.