ಮುಂಬೈ ಆಸ್ಪತ್ರೆಗೆ ದಾಖಲಾದ ಗೋವಾ ಸಿಎಂ
ಪಣಜಿ, ಫೆ.18: ಮೇದೋಜೀರಕ ಗ್ರಂಥಿಯ ಉರಿಯೂತದಿಂದ ಬಳಲುತ್ತಿರುವ ಗೋವಾ ಸಿಎಂ ಮನೋಹರ್ ಪಾರಿಕ್ಕರ್ ರನ್ನು ಮುಂಬೈಯ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಾರಿಕ್ಕರ್ ರನ್ನು ಪರೀಕ್ಷಿಸಿರುವ ವೈದ್ಯರು ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ ಎಂದಿದ್ದಾರೆ ಎನ್ನಲಾಗಿದೆ. ಈ ಆರೋಗ್ಯ ಸಮಸ್ಯೆಯಿಂದ ಚೇತರಿಕೆಯಾಗಲು ಪಾರಿಕ್ಕರ್ ಅವರಿಗೆ ಸಂಪೂರ್ಣ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ರವಿವಾರ ರಾತ್ರಿ ಅಥವಾ ಸೋಮವಾರ ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ.
ಬುಧವಾರ ಪಾರಿಕ್ಕರ್ ಅವರಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಮುಂಬೈ ಆಸ್ಪತ್ರೆಗೆ ದಾಖಲಾಗುವಂತೆ ಗೋವಾ ಮೆಡಿಕಲ್ ಕಾಲೇಜಿ ಆಸ್ಪತ್ರೆಯ ವೈದ್ಯರು ಸಲಹೆ ನೀಡಿದ್ದರು.
ಪಾರಿಕ್ಕರ್ ಅವರು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ನಿಂದ ಬಳಲುತ್ತಿರುವುದಾಗಿಯೂ ಕೆಲ ಮಾಧ್ಯಮಗಳು ವರದಿ ಮಾಡಿದೆ. ಆದರೆ ಈ ವರದಿಗಳನ್ನು ಆಸ್ಪತ್ರೆಯ ವೈದ್ಯರು ದೃಢಪಡಿಸಿಲ್ಲ.
Next Story