ಜೈಲಿನೊಳಗಿಂದಲೇ ವಿಡಿಯೋ ಮೂಲಕ ದ್ವೇಷಕಾರಿದ ಶಂಭುಲಾಲ್!
ರಾಜ್ಸಾಮಂಡ್ ಸಜೀವದಹನ ಪ್ರಕರಣದ ಆರೋಪಿಯ ಮತ್ತೊಂದು ದುಷ್ಕೃತ್ಯ
ಜೋಧಪುರ್, ಫೆ.19: ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ರಾಜ್ಸಾಮಂಡ್ ಎಂಬಲ್ಲಿ ಪಶ್ಚಿಮ ಬಂಗಾಳದ ಮುಸ್ಲಿಂ ಕಾರ್ಮಿಕನೊಬ್ಬನ ಮೇಲೆ ಬರ್ಬರ ಹಲ್ಲೆ ನಡೆಸಿ ಜೀವವಿದ್ದಂತೆಯೇ ಬೆಂಕಿ ಹಚ್ಚಿದ್ದ 36 ವರ್ಷದ ಆರೋಪಿ ಶಂಭುಲಾಲ್ ರೇಗರ್, ತಾನಿರುವ ಜೋಧಪುರ್ ಕೇಂದ್ರ ಕಾರಾಗೃಹದಲ್ಲಿ ಸೆಲ್ ಫೋನ್ ಮೂಲಕ ಚಿತ್ರೀಕರಿಸಿದ್ದಾನೆಂದು ಹೇಳಲಾಗಿರುವ 2 ವೀಡಿಯೋಗಳು ಅಂತರ್ಜಾಲದಲ್ಲಿ ಹರಿದಾಡುತ್ತಿದೆ.
ವೀಡಿಯೋದಲ್ಲಿ ಶಂಭುಲಾಲ್ ತಲೆಯನ್ನು ಮುಚ್ಚುವಂತಹ ಜಾಕೆಟ್ (ಹೂಡಿ) ಧರಿಸಿದ್ದು, ದ್ವೇಷದ ಮಾತುಗಳನ್ನಾಡಿದ್ದಾನೆ ಎನ್ನಲಾಗಿದೆ. ಕೈಯ್ಯಲ್ಲಿರುವ ಕಾಗದದ ಹಾಳೆಯೊಂದರಲ್ಲಿ ಬರೆದಿದ್ದನ್ನು ಆತ ಓದುತ್ತಿರುವಂತೆ ಕಾಣಿಸುತ್ತಿದ್ದು, ಹಿಂದೂಗಳು ಜಿಹಾದಿಗಳ ವಿರುದ್ಧ ಒಗ್ಗೂಡಬೇಕೆಂದು ಕರೆ ನೀಡಿದ್ದಾನೆ. ಇನ್ನೊಂದು ವೀಡಿಯೋದಲ್ಲಿ ತನ್ನ ಜೀವಕ್ಕೆ ಅಪಾಯವಿರುವ ಬಗ್ಗೆಯೂ ಆತ ಹೇಳಿಕೊಂಡಿದ್ದಾನೆ.
ಆದರೆ ಭಾರೀ ಸುರಕ್ಷಾ ವ್ಯವಸ್ಥೆಯಿರುವ ಕೇಂದ್ರ ಕಾರಾಗೃಹವೊಂದರಲ್ಲಿ ಆತ ಹೇಗೆ ಸೆಲ್ ಫೋನ್ ಬಳಸಿ ಈ ವೀಡಿಯೋ ತೆಗೆದಿದ್ದಾನೆನ್ನುವುದಕ್ಕೆ ಇಲ್ಲಿಯ ತನಕ ಅಧಿಕಾರಿಗಳಿಂದ ಉತ್ತರ ಸಿಕ್ಕಿಲ್ಲ. ಆದರೆ ಜೈಲಿನಲ್ಲಿ ತಮಗೆ ಯಾವುದೇ ಸೆಲ್ ಫೋನ್ ದೊರೆತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಫೋನ್ ತನಗೆ ಸೇರಿದ್ದಲ್ಲ ಎಂದು ಶಂಭುಲಾಲ್ ಪೊಲೀಸರಿಗೆ ಹೇಳಿದ್ದಾನಾದರೂ ಅದು ಯಾರ ಫೋನ್ ಎಂಬುದನ್ನು ಆತ ಬಹಿರಂಗ ಪಡಿಸಿಲ್ಲ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ರಾಜಸ್ಥಾನದ ಗೃಹ ಸಚಿವ ಗುಲಾಬ್ ಚಂದ್ ಕಟಾರಿಯಾ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ಅತ್ಯಾಚಾರ ಆರೋಪಿ ಅಸಾರಾಂ ಬಾಪು ಕೂಡ ಇರುವ ಈ ಜೈಲಿನಲ್ಲಿ ಕೇವಲ 2ಜಿ ಜಾಮರ್ ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಲಾಗುತ್ತಿದೆ.
ವೀಡಿಯೋವೊಂದರಲ್ಲಿ ಆರೋಪಿ ಶಂಭುಲಾಲ್ ಹೀಗೆ ಹೇಳಿದ್ದಾನೆ- "ನನಗೆ ಹಿಂದೂ ಮಹಿಳೆಯರು ಎದುರಿಸುತ್ತಿರುವ ಬೆದರಿಕೆಗಳನ್ನು ಸಹಿಸಲಾಗುತ್ತಿಲ್ಲ. ನಾನು ನನ್ನ ಜೀವನವನ್ನು ಹಾಳುಗೈದಿದ್ದೇನೆ. ಅದರ ಬಗ್ಗೆ ನನಗೆ ಚಿಂತೆಯಿಲ್ಲ. ಆದರೆ ನನ್ನ ಹಾಗೂ ಆಕೆಯ ಮಧ್ಯೆ ಅಕ್ರಮ ಸಂಬಂಧವಿತ್ತೆಂದು ಕಾನೂನು ಮತ್ತು ಮಾಧ್ಯಮ ಹೇಳಿರುವುದು ದುಃಖ ತಂದಿದೆ''. ಅಪ್ರಾಪ್ತೆಯೊಂದಿಗೆ ಆತನ ವಿಫಲ ಪ್ರೇಮವೇ ಆತ ಕಾರ್ಮಿಕನೊಬ್ಬನನ್ನು ಭಯಾನಕವಾಗಿ ಕೊಲ್ಲಲು ಕಾರಣವೆಂದು ಮಾಧ್ಯಮಗಳು ವರದಿ ಮಾಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
ಇನ್ನೊಂದು ವೀಡಿಯೋದಲ್ಲಿ ಇದು ತನ್ನ ಕೊನೆಯ ವೀಡಿಯೋ ಎಂದು ಹೇಳಿರುವ ಆತ ತನ್ನನ್ನು ಅತ್ಯಂತ ಹೆಚ್ಚು ಸುರಕ್ಷತೆಯಿರುವ ಸೆಲ್ ನಲ್ಲಿರಿಸಲಾಗಿದ್ದರೂ ಪಶ್ಚಿಮ ಬಂಗಾಳದ ಒಬ್ಬ ಕೈದಿ ತನ್ನನ್ನು ಕೊಲ್ಲಲು ಸಂಚು ಹೂಡಿದ್ದಾನೆ ಎಂದು ಹೇಳಿಕೊಂಡಿದ್ದಾನೆ.