ಜನತೆಯ ಪ್ರಶ್ನೆಗಳಿಗೆ ಅಮಿತ್ ಶಾ ಉತ್ತರಿಸಲಿ: ಕಾಂಗ್ರೆಸ್ ಐಟಿ ಸೆಲ್

ಉಡುಪಿ, ಫೆ.19: ಉಡುಪಿ ಜಿಲ್ಲೆಗೆ ಆಗಮಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜನತೆಯ ಕೆಲವು ಪ್ರಶ್ನೆಗಳಿಗೆ ಉತ್ತರಿಸಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಐಟಿ ಸೆಲ್ ಒತ್ತಾಯಿಸಿದೆ.
ಅಮಿತ್ ಶಾ ತಮ್ಮ ಪುತ್ರ ಜೈ ಶಾ ಅವರ ಅಕ್ರಮ ಆಸ್ತಿ ಗಳಿಕೆಯ ತನಿಖೆ ಯನ್ನು ಯಾವಾಗ ಮಾಡುವುದು ಮತ್ತು ಲೋಕಸಭಾ ಚುನಾವಣಾ ವೇಳೆ ನೀಡಿದ ಆಶ್ವಾಸನೆಯಂತೆ ಎರಡು ಲಕ್ಷ ಉದ್ಯೋಗ ಸೃಷ್ಠಿ ಎಲ್ಲಿ ಮಾಡಿದ್ದೀರಿ ಎಂಬುದರ ಬಗ್ಗೆ ಉತ್ತರ ನೀಡಲಿ ಎಂದು ಕಾಂಗ್ರೆಸ್ ಐಟಿ ಸೆಲ್ನ ಉಡುಪಿ ಜಿಲ್ಲಾಧ್ಯಕ್ಷ ವಿಶ್ವಾಸ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ನೀರವ್ ಮೋದಿ 11ಸಾವಿರ ಕೋಟಿ ರೂ. ಮತ್ತು ವಿಜಯ ಮಲ್ಯ 9ಸಾವಿರ ಕೋಟಿ ಭ್ರಷ್ಟಾಚಾರ, ಕಪ್ಪು ಹಣದ ಕುರಿತ ನೀಡಿದ ಆಶ್ವಾಸನೆ, ದೇಶದ ಗಡಿ ಹಾಗೂ ಸೈನಿಕರ ಸಮಸ್ಯೆ, ಲೋಕಪಾಲ ಬಿಲ್ ಅನುಷ್ಠಾನದ ಬಗ್ಗೆ ಅಮಿತ್ ಶಾ ಮೌನ ಮುರಿಯಲಿ ಎಂದು ಅವರು ಆಗ್ರಹಿಸಿದರು.
ಉಡುಪಿ-ಆಗುಂಬೆ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಮತ್ತು ಮಂಗಳೂರು -ಬೈಂದೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬದ ಬಗ್ಗೆ ಅವರು ಉತ್ತರಿಸಲಿ ಎಂದ ಅವರು, ಉಡುಪಿ ಸಂಸದರು ತನ್ನ ಕ್ಷೇತ್ರದ ಜನರ ಸಮಸ್ಯೆ ಮತ್ತು ಅಭಿವೃದ್ಧಿಗೆ ಸ್ಪಂದಿಸುತ್ತಿಲ್ಲ. ಜನರಿಗೆ ತಮ್ಮ ಸಮಸ್ಯೆ ಹೇಳಿಕೊಳ್ಳಲು ಸಂಸದರು ಕೈಗೆ ಸಿಗುತ್ತಿಲ್ಲ. ಅಡಿಕೆ ಸುಪಾರಿ ನಿಷೇಧಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿ ದರೂ ಇಲ್ಲಿನ ಸಂಸದರು ಬಾಯಿ ಬಿಡುತ್ತಿಲ್ಲ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಐಟಿ ಸೆಲ್ನ ಕಾಪು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹರೀಶ್ ನಾಯಕ್, ಜಿಲ್ಲಾ ಉಪಾಧ್ಯಕ್ಷ ದಿನೇಶ್ ನಾಯ್ಕ್ ಉಪಸ್ಥಿತರಿದ್ದರು.







