‘ಸ್ಪರ್ಶ್ ಕುಷ್ಠರೋಗ’ ಅರಿವು ಆಂದೋಲನ
ಉಡುಪಿ, ಫೆ.19: ಕುಷ್ಠರೋಗ ಮುಕ್ತ ಭಾರತಕ್ಕೆ ಸ್ತ್ರೀಯರು ಕೈಜೋಡಿಸಿದರೆ ರೋಗದ ನಿಯಂತ್ರಣ ಸುಲಭವಾಗುವುದೆಂದು ಕುಕ್ಕುಂದೂರು ಮಹಿಳಾ ಮಂಡಲದ ಅಧ್ಯಕ್ಷೆ ಜ್ಯೋತಿ ಪೈ ತಿಳಿಸಿದ್ದಾರೆ.
ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಕಚೇರಿ, ಸ್ತ್ರೀಶಕ್ತಿ ಒಕ್ಕೂಟ ಕಾರ್ಕಳ ತಾಲೂಕು, ಮಹಿಳಾ ಮಂಡಳ ಕುಕ್ಕುಂದೂರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕುಕ್ಕುಂದೂರು ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಕಾರ್ಕಳ ತಾಪಂ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ‘ಸ್ಪರ್ಶ್ ಕುಷ್ಠರೋಗ’ ಅರಿವು ಆಂದೋಲನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಕೃಷ್ಣಾನಂದ ಶೆಟ್ಟಿ ಮಾತನಾಡಿ, ಕುಷ್ಠ ರೋಗ ಯಾವುದೇ ಶಾಪದಿಂದ, ಪಾಪಗಳಿಂದ ಬರುವುದಿಲ್ಲ. ಈ ರೋಗದ ಬಗ್ಗೆ ಮೂಢನಂಬಿಕೆ ಇದ್ದು, ರೋಗದ ಬಗ್ಗೆ ಇರುವ ತಪ್ಪುಕಲ್ಪನೆ ಹೋಗಲಾಡಿಸಿ ನೈಜ ಸಂಗತಿಯನ್ನು ಮಾಹಿತಿಗಳ ಮೂಲಕ ಜನತೆಗೆ ತಿಳಿಸಬೇಕಾಗಿದೆ ಎಂದರು.
ಹಿರಿಯ ವೈದ್ಯೇತರ ಮೇಲ್ವಿಚಾರಕರ ವಿ.ಸುರೇಶ್ ಶೆಟ್ಟಿ ಕುಷ್ಠರೋಗದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕಿನ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಶೋಭಾ ಕಲ್ಕೂರ ಉಪಸ್ಥಿತರಿದ್ದರು. ಶಶಿಕಲಾ ಜಿ.ಪೂಜಾರಿ ಸ್ವಾಗತಿಸಿ, ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಹೆಚ್. ವಂದಿಸಿದರು.