ಉಡುಪಿ : ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ; ಮುಖ್ಯ ಶಿಕ್ಷಕನಿಗೆ 7 ವರ್ಷ ಜೈಲು ಶಿಕ್ಷೆ
ಉಡುಪಿ, ಫೆ.19: ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತ್ರಾಸಿ ಶಾಲೆಯೊಂದರ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ ಅದೇ ಶಾಲೆಯ ಮುಖ್ಯ ಶಿಕ್ಷಕನಿಗೆ ಉಡುಪಿ ಜಿಲ್ಲಾ ವಿಶೇಷ ಪೋಕ್ಸೊ ನ್ಯಾಯಾಲಯವು ಏಳು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಇಂದು ಆದೇಶ ನೀಡಿದೆ.
ಕುಂದಾಪುರ ಹೇರಿಕುದ್ರುವಿನ ಕೀರ್ತಿ ಕುಮಾರ್ ಶೆಟ್ಟಿ(47) ಶಿಕ್ಷೆಗೆ ಗುರಿ ಯಾದ ಮುಖ್ಯಶಿಕ್ಷಕ. ಈತ 2013-14ನೆ ಶೈಕ್ಷಣಿಕ ವರ್ಷದ ಪ್ರಾರಂಭ ದಿಂದಲೂ ತನ್ನ ಶಾಲೆಯ ಏಳನೆ ತರಗತಿಯ 14 ವರ್ಷ ಪ್ರಾಯದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಅಲ್ಲದೆ ಆಕೆಯನ್ನು ತನ್ನ ಕಚೇರಿಗೆ ಕರೆಸಿ ಅಸಭ್ಯವಾಗಿ ವರ್ತಿಸುತ್ತಿದ್ದನು. ವಿದ್ಯಾರ್ಥಿನಿ ಇದನ್ನೆಲ್ಲ ಕಲಿಕೆಯ ಕಾರಣದಿಂದ ಸಹಿಸಿಕೊಳ್ಳುತ್ತಿದ್ದಳು. ಆದರೂ ಕೀರ್ತಿ ಶೆಟ್ಟಿ ತನ್ನ ಚಾಳಿಯನ್ನು ಮುಂದುವರೆಸಿದ್ದನು.
2014ರ ಜ.24ರಂದು ಮಧ್ಯಾಹ್ನ 2ಗಂಟೆಗೆ ಕೀರ್ತಿ ಶೆಟ್ಟಿ ತನ್ನ ಕಚೇರಿಗೆ ನೊಂದ ವಿದ್ಯಾರ್ಥಿನಿಯನ್ನು ಬರ ಹೇಳಿ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದನು. ಬಳಿಕ ವಿದ್ಯಾರ್ಥಿನಿ ಈ ವಿಚಾರವನ್ನು ತನ್ನ ತಾಯಿಯ ಬಳಿ ತಿಳಿಸಿದ್ದಳು. 2014ರ ಫೆ.2ರಂದು ಮುಖ್ಯಶಿಕ್ಷಕನ ವಿರುದ್ಧ ವಿದ್ಯಾರ್ಥಿನಿ ಗಂಗೊಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಪೊಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಮುಖ್ಯ ಶಿಕ್ಷಕ ಕೀರ್ತಿ ಶೆಟ್ಟಿಯನ್ನು ಅದೇ ದಿನ ಬಂಧಿಸಿದ್ದರು.
ಪ್ರಕರಣದ ತನಿಖೆ ನಡೆಸಿದ ಅಂದಿನ ಕುಂದಾಪುರ ವೃತ್ತ ನಿರೀಕ್ಷಕ ಪಿ.ಎಂ. ದಿವಾಕರ್ ಆರೋಪಿ ವಿರುದ್ಧ ಆರೋಪಪಟ್ಟಿಯನ್ನು 2014ರ ಮಾ.5ರಂದು ಜಿಲ್ಲಾ ವಿಶೇಷ ಪೊಕ್ಸೋ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ನ್ಯಾಯಾಲಯ 16 ಸಾಕ್ಷಿಗಳ ವಿಚಾರಣೆ ಹಾಗೂ 11 ದಾಖಲೆಗಳನ್ನು ನಿಶಾನಿಕರೀಸಿತು.
ಆರೋಪಿ ಮೇಲಿನ ಆರೋಪ ಸಾಬೀತಾಗಿರುವುದಾಗಿ ಅಭಿಪ್ರಾಯ ಪಟ್ಟ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವೆಂಕಟೇಶ್ ಟಿ.ನಾಯ್ಕಾ, ಆರೋಪಿಗೆ ಭಾರತೀಯ ದಂಡ ಸಂಹಿತೆ 354ರ ಪ್ರಕಾರ ಒಂದು ವರ್ಷ ಜೈಲು ಶಿಕ್ಷೆ ಮತ್ತು 500ರೂ. ದಂಡ(ದಂಡ ಪಾವತಿಸದಿದ್ದರೆ 2 ತಿಂಗಳು ಹೆಚ್ಚುವರಿ ಜೈಲುಶಿಕ್ಷೆ), ಪೊಕ್ಸೋ ಕಾಯಿದೆಯ ಕಲಂ 10ರ ಅಡಿಯಲ್ಲಿ 5 ವರ್ಷ ಜೈಲು ಶಿಕ್ಷೆ ಮತ್ತು 5000ರೂ. ದಂಡ(ದಂಡ ಪಾವತಿಸದಿದ್ದರೆ 3 ತಿಂಗಳು ಹೆಚ್ಚುವರಿ ಜೈಲುಶಿಕ್ಷೆ), ಪೊಕ್ಸೊ ಕಾಯಿದೆ ಕಲಂ 12ರ ಅಡಿಯಲ್ಲಿ 1ವರ್ಷ ಜೈಲು ಶಿಕ್ಷೆ ಮತ್ತು ಒಂದು ಸಾವಿರ ರೂ. ದಂಡ(ದಂಡ ಪಾವತಿಸದಿದ್ದರೆ 2 ತಿಂಗಳು ಹೆಚ್ಚುವರಿ ಜೈಲುಶಿಕ್ಷೆ) ವಿಧಿಸಿ ಮತ್ತು ನೊಂದ ಬಾಲಕಿಗೆ 25ಸಾವಿರ ರೂ. ಪರಿಹಾರ ನೀಡುವಂತೆ ಆದೇಶ ನೀಡಿದರು.
ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆರೋಪಿ ಕೀರ್ತಿ ಶೆಟ್ಟಿಯನ್ನು ನ್ಯಾಯಾಲಯ ಆದೇಶ ನೀಡುತ್ತಿದ್ದಂತೆ ಪೊಲೀಸರು ಕಸ್ಟಡಿಗೆ ತೆಗೆದುಕೊಂಡು ಕಾರವಾರ ಕಾರಾಗೃಹಕ್ಕೆ ಕರೆದುಕೊಂಡು ಹೋಗಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕನಾಗಿ ಶಾಲೆಗೆ ಸೇರಿಕೊಂಡ ಕೀರ್ತಿ ಶೆಟ್ಟಿ 2011ರಲ್ಲಿ ಮುಖ್ಯೋಪಾಧ್ಯಾಯನಾಗಿ ಮುಂಬಡ್ತಿ ಹೊಂದಿದ್ದನು. ಸರಕಾರದ ಪರವಾಗಿ ಜಿಲ್ಲಾ ವಿಶೇಷ ಸರಕಾರಿ ಅಭಿಯೋಜಕ ವಿಜಯ ವಾಸು ಪೂಜಾರಿ ವಾದಿಸಿದ್ದರು.