ಉತ್ತರ ಪ್ರದೇಶದಲ್ಲಿ ರಸ್ತೆ ಅಪಘಾತ; ಬಿಜೆಪಿ ಶಾಸಕರೊಬ್ಬರು ಸೇರಿದಂತೆ ನಾಲ್ವರು ಸಾವು
ಲಕ್ನೋ, ಫೆ.21: ಉತ್ತರ ಪ್ರದೇಶದ ಸೀತಾಪುರ್ ನಲ್ಲಿ ಕಾರು ಮತ್ತು ಟ್ರಕ್ ಪರಸ್ಪರ ಡಿಕ್ಕಿ ಹೊಡೆದು ಸಂಭವಿಸಿದ ರಸ್ತೆ ಅಪಘಾತದಿಂದ ಬಿಜೆಪಿ ಶಾಸಕ , ಅವರ ಕಾರು ಚಾಲಕ ಮತ್ತು ಇಬ್ಬರು ಪೊಲೀಸ್ ಗನ್ ಮ್ಯಾನ್ ಗಳು ಮೃತಪಟ್ಟ ಘಟನೆ ಬುಧವಾರ ನಡೆದಿದೆ.
ಬಿಜ್ನೂರ್ ನ ಬಿಜೆಪಿ ಶಾಸಕ ಲೋಕೇಂದ್ರ ಸಿಂಗ್ (45) , ಅವರ ಕಾರು ಚಾಲಕ ,ಕಾರ್ ನಲ್ಲಿದ್ದ ಪೊಲೀಸ್ ಗನ್ ಮ್ಯಾನ್ ಗಳಾದ ಬ್ರಿಜೇಶ್ ಮಿಶ್ರಾ(28) ಮತ್ತು ದೀಪಕ್ ಕುಮಾರ್ (30) ಮೃತಪಟ್ಟಿದ್ದಾರೆ. ಆದರೆ ಕಾರು ಚಾಲಕನ ಹೆಸರು ಗೊತ್ತಾಗಿಲ್ಲ.
ಲಕ್ನೋದಲ್ಲಿ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಲು ಲೋಕೆಂದ್ರ ಸಿಂಗ್ ಕಾರ್ ನಲ್ಲಿ ತೆರಳುತ್ತಿದ್ದಾಗ, ಅವರ ಕಾರ್ ಫಾರ್ಚೂನರ್ ಸುವ್ ಎದುರಿನಿಂದ ಬರುತ್ತಿದ್ದ ಟ್ರಕ್ ಗೆ ಡಿಕ್ಕಿ ಹೊಡೆಯಿತೆನ್ನಲಾಗಿದೆ.
ಈ ಭೀಕರ ಅಪಘಾತದಿಂದಾಗಿ ಶಾಸಕ ಲೋಕೇಂದ್ರ ಸಿಂಗ್ ಮತ್ತು ಅವರ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟರು.
ಕಾರ್ ನಲ್ಲಿದ್ದ ಪೊಲೀಸ್ ಗನ್ ಮ್ಯಾನ್ ಗಳಾದ ಬ್ರಿಜೇಶ್ ಮಿಶ್ರಾಮತ್ತು ದೀಪಕ್ ಕುಮಾರ್ ಗಂಭೀರ ಗಾಯಗೊಂಡರು. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಲ್ಲಿ ಅವರು ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.