ಸಚಿವ ಸಂಪುಟದಿಂದ ರಾಮಲಿಂಗಾರೆಡ್ಡಿಯನ್ನು ಕೈಬಿಡಲು ಆಪ್ ಆಗ್ರಹ
ಬೆಂಗಳೂರು, ಫೆ.21: ರಾಜ್ಯದ ಕಾನೂನು ಸುವ್ಯವಸ್ಥೆ ನಿಯಂತ್ರಿಸುವಲ್ಲಿ ವಿಫಲವಾಗಿರುವ ಗೃಹಸಚಿವ ರಾಮಲಿಂಗಾರೆಡ್ಡಿಯನ್ನು ಈ ಕೂಡಲೆ ಸಚಿವ ಸಂಪುಟದಿಂದ ಕೈಬಿಡಬೇಕೆಂದು ‘ಆಪ್’ ಪಕ್ಷ ಆಗ್ರಹಿಸಿದೆ.
ಬುಧವಾರ ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಪ್ನ ರಾಜ್ಯ ಸಹ ಸಂಚಾಲಕ ಶಿವಕುಮಾರ್ ಚೆಂಗಲರಾಯ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ‘ಸಿಲಿಕಾನ್ ಸಿಟಿ’ ಎಂದು ಖ್ಯಾತಿ ಪಡೆದಿರುವ ಬೆಂಗಳೂರು ಗೂಂಡಾರಾಜ್ಯವಾಗಿ ಮಾರ್ಪಾಡಾಗುತ್ತಿದೆ. ಗೃಹಸಚಿವ ರಾಮಲಿಂಗಾರೆಡ್ಡಿ ತನ್ನ ತಾಯಿ ಹಾಗೂ ಮಗಳ ಹೆಸರಿನಲ್ಲಿ ಅಕ್ರಮವಾಗಿ ಭೂಗಳ್ಳತನದ ದಂಧೆಯಲ್ಲಿ ತೊಡಗಿದ್ದಾರೆಂದು ವರದಿಯಾಗಿದೆ. ಹೀಗಾಗಿ ಅವರನ್ನು ತಕ್ಷಣ ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ನಲಪಾಡ್ ಮುಹಮ್ಮದ್ ಹಾಗೂ ಆತನ ಬೆಂಬಲಿಗರು ವಿದ್ವತ್ ಮೇಲೆ ನಡೆಸಿದ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಆತನ ವಿರುದ್ಧ ಮೊಕದ್ದಮೆ ದಾಖಲಿಸುವಲ್ಲಿ ಪೊಲೀಸರು ಹಿಂದೇಟು ಹಾಕಿದರು. ನಂತರ ನಮ್ಮ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ನಂತರ ಮೊಕದ್ದಮೆ ದಾಖಲಿಸಲಾಯಿತು.
ಇದೇ ರೀತಿ ಕೆ.ಆರ್.ಪುರಂನ ಕಾಂಗ್ರೆಸ್ ಮುಖಂಡ ನಾರಾಯಣಸ್ವಾಮಿ ಬಿಬಿಎಂಪಿ ಕಚೇರಿಯ ಕಡತಗಳಿಗೆ ಪೆಟ್ರೋಲ್ ಎರಚಿ ಸುಟ್ಟು ಹಾಕಲು ಪ್ರಯತ್ನಿಸಿದ ಪ್ರಕರಣದಲ್ಲೂ ಸಹ ಪೊಲೀಸರು ದೂರುದಾಖಲಿಸಿ ಆರೋಪಿಯನ್ನು ಬಂಧಿಸಲು ಮುಂದಾಗಿಲ್ಲ. ಕಳೆದ ಹತ್ತು ವರ್ಷಗಳಿಂದ ಕೆ .ಆರ್.ಪುರಂ ಹಾಗೂ ಮಹದೇವಪುರ ಕ್ಷೇತ್ರದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಡರೈತರ ಹಾಗೂ ಸರಕಾರಿ ಜಮೀನುಗಳನ್ನು ಕಬಳಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಎಂದು ದೂರಿದರು.
ಕೆಲ ವರ್ಷಗಳ ಹಿಂದೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಹಲವು ಸಾವಿರ ಕೋಟಿ ರೂಪಾಯಿಗಳ ನಕಲಿ ಬಿಲ್ ಕಡತಗಳನ್ನು ರಾತ್ರೋರಾತ್ರಿ ಸುಟ್ಟು ಹಾಕಿದ ಪ್ರಕರಣದ ಸಂಬಂಧ ಪೊಲೀಸರು ಯಾರನ್ನೂ ವಿಚಾರಣೆಗೊಳಪಡಿಸಲಿಲ್ಲ. ರಾಜಕೀಯ ಒತ್ತಡಕ್ಕೆ ಮಣಿದು ಜನಸಾಮಾನ್ಯನ ಸಾವಿರಾರು ಕೋಟಿ ರೂ.ಗಳ ತೆರಿಗೆ ಹಣವನ್ನು ಕೊಳ್ಳೆ ಹೊಡೆದ ಪ್ರಭಾವಿಗಳ ಪರವಾಗಿ ಪ್ರಕರಣವನ್ನು ಹಳ್ಳ ಹಿಡಿಸಿದ್ದಾರೆ. ಇದೆ ಮಾದರಿಯಲ್ಲಿ ನಾರಾಯಣಸ್ವಾಮಿ ಕೆ.ಆರ್.ಪುರಂನ ಬಿಬಿಎಂಪಿ ಕಚೇರಿಯಲ್ಲಿ ಪ್ರಭಾವಿಗಳ ಅಕ್ರಮ ಭೂ ಚಟುವಟಿಕೆಗಳು ಹಾಗೂ ನಕಲಿ ಬಿಲ್ ಗಳ ಕಡತಗಳನ್ನು ಸುಟ್ಟು ಹಾಕಲು ಈ ದುಷ್ಕೃತ್ಯವನ್ನು ಎಸಗಿದ್ದಾನೆ ಎಂದು ಸಂಶಯ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಲೋಕಾಯುಕ್ತ, ಎಸಿಬಿ ನಿಷ್ಕ್ರಿಯವಾಗಿವೆ. ಪೊಲೀಸ್ ಇಲಾಖೆ ಹಾಗೂ ರಾಜ್ಯದ ಸರಕಾರಿ ಕಚೇರಿಗಳು ಕಾಂಗ್ರೆಸ್ ಕಚೇರಿಗಳಾಗಿ ಮಾರ್ಪಟ್ಟಿವೆ ಎಂದ ಅವರು, ನಲಪಾಡ್, ನಾರಾಯಣ ಸ್ವಾಮಿ ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಸಬೇಕು. ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಶಾಸಕ ಹಾರಿಸ್ ಅನುಯಾಯಿಗಳ ಮೇಲೆ ಮೊಕದ್ದಮೆ ದಾಖಲಿಸಿ ಆರೋಪಿಗಳನ್ನು ಬಂಧಿಸಬೇಕು ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.