ಅನಕ್ಷರಸ್ಥರಿಗಿಂತ ವಿದ್ಯಾವಂತ ಮೂಢನಂಬಿಕಸ್ಥರೇ ಹೆಚ್ಚು ಅಪಾಯಕಾರಿ: ವ.ನಂ.ಶಿವರಾಮು
5ನೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
![ಅನಕ್ಷರಸ್ಥರಿಗಿಂತ ವಿದ್ಯಾವಂತ ಮೂಢನಂಬಿಕಸ್ಥರೇ ಹೆಚ್ಚು ಅಪಾಯಕಾರಿ: ವ.ನಂ.ಶಿವರಾಮು ಅನಕ್ಷರಸ್ಥರಿಗಿಂತ ವಿದ್ಯಾವಂತ ಮೂಢನಂಬಿಕಸ್ಥರೇ ಹೆಚ್ಚು ಅಪಾಯಕಾರಿ: ವ.ನಂ.ಶಿವರಾಮು](https://www.varthabharati.in/sites/default/files/images/articles/2018/02/21/21NAGA-1.jpg)
ನಾಗಮಂಗಲ, ಫೆ.21: ಅನಕ್ಷರಸ್ಥ ಮೂಢನಂಬಿಕಸ್ಥರಿಗಿಂತ ವಿದ್ಯಾವಂತ ಮೂಢನಂಬಿಕಸ್ಥರೇ ಸಮಾಜಕ್ಕೆ ಹೆಚ್ಚು ಅಪಾಯಕಾರಿಗಳಾಗಿದ್ದು, ಇವುಗಳನ್ನು ಹುಟ್ಟುಹಾಕಿದ ಪುರೋಹಿತ ವರ್ಗದವರೇ ತೊಡೆದುಹಾಕಲು ಮನಸ್ಸು ಮಾಡುವ ಮೂಲಕ ಸ್ವಸ್ಥಸಮಾಜ ಕಟ್ಟಲು ನೆರವಾಗಬೇಕಿದೆ ಎಂದು 5ನೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ, ಜಾನಪದ ವಿದ್ವಾಂಸ ವ.ನಂ.ಶಿವರಾಮು ಕರೆ ನೀಡಿದ್ದಾರೆ.
ಪಟ್ಟಣದ ಸರಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಬುಧವಾರ ನಡೆದ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮೂಢನಂಬಿಕೆಗಳು ಯಾವ ಸಮಾಜ ಸುಧಾರಕರಿಂದಲೂ ಸಾಧ್ಯವಾಗದಂತೆ ಪಾತಾಳಮಟ್ಟಕ್ಕೆ ಬೇರುಬಿಟ್ಟು ಆಕಾಶದೆತ್ತರಕ್ಕೆ ಬೆಳೆದು ನಿಂತಿವೆ ಎಂದರು.
ಕತೆ ಕಟ್ಟಿ, ಪೂಜೆ ಪುನಸ್ಕಾರ, ಶಾಂತಿ, ಹೋಮ ಮಾಡಿ ಅಮಾಯಕರನ್ನು ಶೋಷಣೆ ಮಾಡಿ ಜೀವನ ಮಾಡುವುದರಿಂದ ಯಾವ ಪುಣ್ಯ ದೊರಕೀತು? ದೇವರು, ದೆವ್ವ ಬಂದಿದೆ ಎಂಬುದನ್ನು ಉದಾಸೀನ ಮಾಡಬೇಕಿದೆ ಮತ್ತು ಇವುಗಳನ್ನು ಹುಟ್ಟುಹಾಕಿದ ಪುರೋಹಿತವರ್ಗದವರೇ ತೊಡೆದು ಹಾಕಲು ಮನಸ್ಸು ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಹಿಂದೆಲ್ಲಾ ಜಾತಿ ಹೇಳಿಕೊಳ್ಳಲೂ ಹಿಂಜರಿಯುತ್ತಿದ್ದವರಿಂದ ಈಗ ತಮ್ಮನ್ನ ಎಸ್ಸಿ, ಎಸ್ಟಿ ಜಾತಿಗೆ ಸೇರಿಸಬೇಕು ಎಂಬ ಬೇಡಿಕೆ ಹೆಚ್ಚುತ್ತಿದೆ. ಪ್ರತ್ಯೇಕ ಧರ್ಮಕ್ಕಾಗಿ ಹೋರಾಟವೂ ನಡೆಯುತ್ತಿದೆ. ಇದೆಲ್ಲಾ ಶಿಕ್ಷಣ, ಉದ್ಯೋಗ, ರಾಜಕೀಯ ಮೀಸಲಾತಿಗಾಗಿ ನಡೆಯುತ್ತಿದೆ ಎಂದು ಅವರು ಹೇಳಿದರು.
ಹಳ್ಳಿಗಳೆಲ್ಲಾ ವೃದ್ಧಾಶ್ರಮಗಳಾಗಿವೆ. ಅನ್ನಭಾಗ್ಯದ ಅಕ್ಕಿ, ಬೇಳೆ ಬೆಂಗಳೂರಿಗೆ ಹೋಗುತ್ತಿವೆ. ದುಡಿಯುವವರಿಗೆ ನೂರಾರು ಅವಕಾಶಗಳಿವೆ. 60 ಮೀರಿದವರಿಗೆ ಮಾಸಾಸನ, ಸರ್ವರಿಗೂ ಸಮಾನ ಶಿಕ್ಷಣ, ಆಸ್ಪತ್ರೆ ಸೌಲಭ್ಯ, ಅಗತ್ಯ ಆದ್ಯತೆಯ ಉದ್ಯೋಗ ಲಭಿಸುವಂತೆ ಮಾಡಿದರೆ ಇತರೆ ಯಾವ ಭಾಗ್ಯಗಳೂ ಬೇಕಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಆಂಟಿ, ಅಂಕಲ್ಗಳು ಅವ್ವ, ಅಮ್ಮ, ಅಪ್ಪ ಮತ್ತು ಬಾವ, ಭಾಮೈದ, ಷಡ್ಡಕ ಪದಗಳನ್ನು ನುಂಗಿಹಾಕಿದ್ದು, ಮಕ್ಕಳಿಗೆ ಇವುಗಳ ಅರ್ಥವೇ ತಿಳಿಯದೆ ಹತ್ತಿರದ ಸಂಬಂಧದಲ್ಲೂ ಅತ್ಯಾಚಾರಗಳಿಗೆ ಕಾರಣವಾಗುತ್ತಿವೆ ಎಂದು ಅವರು ಆತಂಕ ಆತಂಕ ವ್ಯಕ್ತಪಡಿಸಿದರು.
ಭಾಷೆ ಎಂಬುದು ಒಂದು ದಿನದ ಬೆಳೆಯಲ್ಲ, ಅದು ಸಹಸ್ರಾರು ವರ್ಷಗಳಿಂದ ಬೆಳೆದು ನಿಂತ ವೃಕ್ಷವಾಗಿದೆ. ಕನ್ನಡದ ಒಂದು ಪದ ಕಳೆದುಕೊಂಡರೂ ನಷ್ಟವೇ, ಹಾಗಂತ ಇತರೆ ಭಾಷೆ ಬೇಡವೆಂದಲ್ಲ. ಆದರೆ, ನಮ್ಮ ತಾಯಿ ನುಡಿ ಕನ್ನಡ ಬೆಳವಣಿಗೆಗೆ ಎಲ್ಲರೂ ತೊಡಗಿಸಿಕೊಳ್ಳಿ ಎಂದು ಶಿವರಾಮು ಸಲಹೆ ನೀಡಿದರು.
ಕನ್ನಡ ಪ್ರಾಚೀನ ಭಾಷೆ
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಖ್ಯಾತ ಕವಿ ಡಾ.ಕೆ.ಎಸ್.ನಿಸಾರ್ ಅಹಮ್ಮದ್, ತಮಿಳಿಗಿಂತಲೂ ಕನ್ನಡ ಹಿರಿಯ ಭಾಷೆಯಾಗಿದೆ. ಕನ್ನಡಕ್ಕೆ ದೊಡ್ಡ ಪರಂಪರೆ ಇದೆ. ಜಗತ್ತಿನ 6 ಸಾವಿರ ಭಾಷೆಗಳಲ್ಲಿ 25 ಪ್ರಾಚೀನ ಭಾಷೆಗಳಿದ್ದು ಕನ್ನಡ 18ನೆ ಸ್ಥಾನದಲ್ಲಿದೆ ಎಂದರು.
ಜನರು ರೈಲೆಸ್ಟೇಷನ್, ಬಸ್ಸ್ಟ್ಯಾಂಡ್, ಮಾರ್ಕೇಟ್ ಬೀದಿಗಳಲ್ಲಿ ಮಾತನಾಡುವ ಆಡು ಭಾಷೆಯಿಂದಲೇ ಕನ್ನಡ ಉಳಿಯಲು ಸಾಧ್ಯವಾಗಿದ್ದು, ನಾವೆಲ್ಲರೂ ಭಾಷೆ ಬೆಳೆಸಲು ತೊಡೆಗಿಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ ಸಾನಿಧ್ಯವಹಿಸಿದ್ದರು. ಶಾಸಕ ಚಲುವರಾಯಸ್ವಾಮಿ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್, ನಿಕಟಪೂರ್ವ ಸಮ್ಮೇಳನ ಅಧ್ಯಕ್ಷ ಬಿಂಡಿಗನವಿಲೆ ನಾರಾಯಣಸ್ವಾಮಿ, ನಾಡೋಜ ಮಹೇಶ್ಜೋಷಿ, ಕಸಾಪ ಜಿಲ್ಲಾಧ್ಯಕ್ಷ ಚಾಮಲಾಪುರ ರವಿಕುಮಾರ್, ತಾಲೂಕು ಅಧ್ಯಕ್ಷ ಖರಡ್ಯ ಬಸವೇಗೌಡ, ಕಾರ್ಯಾಧ್ಯಕ್ಷ ಹನುಮಂತು, ತಾಪಂ ಅಧ್ಯಕ್ಷ ದಾಸೇಗೌಡ, ಇತರ ಗಣ್ಯರು ಉಪಸ್ಥಿತರಿದ್ದರು.
ಪಟ್ಟಣದ ಮುಖ್ಯ ರಸ್ತೆಯಲ್ಲಿ ನೂರಾರು ಶಾಲಾ ಮಕ್ಕಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಜಾನಪದ ಕಲಾವಿದರು ಸಮ್ಮೇಳನದ ವೇದಿಕೆವರೆಗೆ ಮೆರವಣಿಗೆ ನಡೆಸಿದರು.