ಅಧಿಕೃತ ಬಂಗಲೆಯನ್ನು ತೊರೆದ ಲಾಲೂ ಪುತ್ರ
ಇದಕ್ಕವರು ನೀಡಿದ ಕಾರಣ ಕೇಳಿದರೆ ನೀವು ಬೆಚ್ಚಿಬೀಳಬಹುದು!
ಪಾಟ್ನಾ, ಫೆ.22: ಸಚಿವ ಹುದ್ದೆ ತೊರೆದು ಆರು ತಿಂಗಳಾದ ನಂತರ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ತಮ್ಮ ಅಧಿಕೃತ ಬಂಗಲೆಯನ್ನು ಕಳೆದ ವಾರ ತೊರೆದಿದ್ದಾರೆ. ಅದಕ್ಕೆ ಅವರು ನೀಡಿದ ಕಾರಣ ಕೂಡ ಕುತೂಹಲಕಾರಿ. ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಬಂಗಲೆಯೊಳಗೆ ಭೂತಗಳನ್ನು ತಂದು ಬಿಟ್ಟಿದ್ದಾರೆಂಬ ಆರೋಪವನ್ನೀಗ ತೇಜ್ ಪ್ರತಾಪ್ ಮಾಡಿದ್ದಾರೆ.
"ಮುಖ್ಯಮಂತ್ರಿ ನಿತೀಶ್ ಹಾಗೂ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ತಮ್ಮ ಬಂಗಲೆಯೊಳಗೆ ಭೂತಗಳನ್ನು ಬಿಟ್ಟಿದ್ದರಿಂದ ನಾನು ಅದನ್ನು ತೊರೆಯಬೇಕಾಯಿತು. ಆ ಭೂತಗಳು ನನಗೆ ತೊಂದರೆಯುಂಟು ಮಾಡುತ್ತಿದ್ದವು'' ಎಂದು ತೇಜ್ ಪ್ರತಾಪ್ ಹೇಳಿದ್ದಾರೆ.
2015ರಲ್ಲಿ ನಡೆದ ವಿಧಾನಸಭಾ ಚುನಾವಣೆಯ ನಂತರ ನಿತೀಶ್ ಕುಮಾರ್ ನೇತೃತ್ವದ ಮಹಾಮೈತ್ರಿ ಸರಕಾರದಲ್ಲಿ ತೇಜ್ ಪ್ರತಾಪ್ ಆರೋಗ್ಯ ಸಚಿವರಾದಾಗ 3, ದೇಶರತ್ನ ಮಾರ್ಗ್ ನಲ್ಲಿರುವ ಈ ಬಂಗಲೆ ಅವರಿಗೆ ನೀಡಲಾಗಿತ್ತು.
ಆದರೆ 20 ತಿಂಗಳುಗಳಾಗುತ್ತಲೇ ನಿತೀಶ್ ಬಿಜೆಪಿ ಜತೆ ಸೇರಿದ ನಂತರ ಮಾಜಿ ಆರ್ಜೆಡಿ ಹಾಗೂ ಕಾಂಗ್ರೆಸ್ ಪಕ್ಷದ ಸಚಿವರೆಲ್ಲರಿಗೂ ತಮ್ಮ ಅಧಿಕೃತ ಬಂಗಲೆಗಳನ್ನು ತೊರೆಯುವಂತೆ ಕಳೆದ ವರ್ಷದ ಜುಲೈ ತಿಂಗಳಲ್ಲಿ ಸೂಚಿಸಲಾಗಿತ್ತು. ಆದರೆ ಆರು ತಿಂಗಳುಗಳ ತನಕ ಬಂಗಲೆ ತೊರೆಯದೇ ಇದ್ದ ತೇಜ್ ಪ್ರತಾಪ್ ಇದೀಗ ಭೂತದ ಕಾರಣ ನೀಡಿದ ತೊರೆದಿದ್ದಾರೆ.
ತೇಜ್ ಪ್ರತಾಪ್ ಗೆ ಅಂಧ ಶ್ರದ್ಧೆಗಳ ಮೇಲೆ ಬಹಳಷ್ಟು ನಂಬಿಕೆಯಿದೆಯೆನ್ನಲಾಗಿದ್ದು, ತನ್ನ ಕುಟುಂಬದ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳನ್ನು ಕೇಂದ್ರ ತನಿಖಾ ಏಜನ್ಸಿಗಳು ತನಿಖೆ ನಡೆಸುತ್ತಿದ್ದಾಗ ಅವರು ತಮ್ಮ ಇದೇ ಬಂಗಲೆಯಲ್ಲಿ ದುಷ್ಮನ್ ಮಾರನ್ ಜಪ್ ನಡೆಸಿದ್ದರೆಂದು ಅವರಿಗೆ ಹತ್ತಿರದ ಮೂಲಗಳು ತಿಳಿಸಿವೆ. ಬಂಗಲೆಯ ದಕ್ಷಿಣಾಭಿಮುಖ ಗೇಟನ್ನು ವಾಸ್ತು ತಜ್ಞರ ಸಲಹೆಯಂತೆ ಅವರು ಮುಚ್ಚಿದ್ದರು.
ಇದೀಗ ತಿಳಿದು ಬಂದ ಮಾಹಿತಿಯಂತೆ ಬಂಗಲೆ ತೆರವುಗೊಳಿಸುವಂತೆ ನೀಡಲಾದ ಎರಡನೇ ನೊಟಿಸ್ ನಂತರ ತೇಜ್ ಪ್ರತಾಪ್ ಬಂಗಲೆ ತೊರೆದಿದ್ದಾರೆ. ಬಂಗಲೆ ತೊರೆಯದೇ ಇದ್ದರೆ ಅನಧಿಕೃತ ವಾಸಕ್ಕಾಗಿ ಬಾಡಿಗೆಯ 15 ಪಟ್ಟು ಅಧಿಕ ಮೊತ್ತ ದಂಡವಾಗಿ ಪಾವತಿಸಬೇಕೆಂಬ ಎಚ್ಚರಿಕೆಯನ್ನೂ ಅವರಿಗೆ ನೀಡಲಾಗಿತ್ತೆನ್ನಲಾಗಿದೆ.