ರಾಷ್ಟ್ರದ್ರೋಹ ಪ್ರಕರಣ ರದ್ದತಿಗೆ ಕೋರಿದ ಹಾರ್ದಿಕ್ ಪಟೇಲ್ ಅರ್ಜಿ ತಿರಸ್ಕೃತ
ಅಹ್ಮದಾಬಾದ್, ಫೆ. 22: ತನ್ನವಿರುದ್ಧ ಹೂಡಲಾದ ದೇಶದ್ರೋಹ ಪ್ರಕರಣವನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಸಲ್ಲಿಸಿದ್ದ ಅರ್ಜಿಯನ್ನು ಅಹ್ಮದಾಬಾದ್ ಸೆಶನ್ಸ್ ಕೋರ್ಟು ತಳ್ಳಿಹಾಕಿದೆ.
2015ರ ಪಟೇಲ್ ಚಳವಳಿಯ ಸಮಯದಲ್ಲಿ ನಡೆದ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಕ್ರೈಂಬ್ರಾಂಚ್ ಅವರ ವಿರುದ್ಧ ದೇಶದ್ರೋಹ ಆರೋಪ ಹೊರಿಸಿತ್ತು. ಪಾಟಿದಾರ್ ಅನಾಮತ್ ಆಂದೋಲನ್ ಸಮಿತಿ(ಪಾಸ್) ಸಂಚಾಲಕರಾದ ಹಾರ್ದಿಕ್ ಪಟೇಲ್ 2016 ಜೂನ್ನಲ್ಲಿ ಹೈಕೋರ್ಟಿನಿಂದ ಜಾಮೀನು ಪಡೆದು ಹೊರಬಂದಿದ್ದರು.
ಹಾರ್ದಿಕ್ ವಿರುದ್ಧ ರಾಷ್ಟ್ರದ್ರೋಹ ಆರೋಪ ಹೊರಿಸಿರುವುದಕ್ಕೆ ಸ್ಪಷ್ಟ ಪುರಾವೆಗಳಿವೆ ಎನ್ನುವ ಪ್ರಾಸಿಕ್ಯೂಶನ್ ವಾದವನ್ನು ಕೋರ್ಟು ಎತ್ತಿಹಿಡಿದಿದೆ. ಭಾಷಣೆ, ಸಂಭಾಷಣೆಗಳ ಫಾರೆನ್ಸಿಕ್ ಪುರಾವೆಗಳನ್ನು ಹಾರ್ದಿಕ್ ಮತ್ತು ಸಹ ಆರೋಪಿ ದಿನೇಶ್ ಬಾಂಬನಿಂiÀi, ಚಿರಾಗ್ ಪಟೇಲ್ ವಿರುದ್ಧ ಕೋರ್ಟು ಅಂಗೀಕರಿಸಿದೆ. ಪ್ರತಿಭಟನೆಕಾರರ ಬೇಡಿಕೆಗಳನ್ನು ಸರಕಾರವು ಒಪ್ಪುವಂತೆ ಮಾಡಲು ಬೆದರಿಕೆ, ಒತ್ತಡ ಹಾಕಿರುವುದು, ಸಂಚು ಹೆಣೆದಿರುವುದು ಕಂಡು ಬಂದಿದೆ. ಪ್ರಕರಣದಲ್ಲಿ ಮಾಫಿ ಸಾಕ್ಷಿಯಾದ ಖೇತನ್ ಪಟೇಲ್ರ ಸಾಕ್ಷ್ಯವನ್ನು ಕೋರ್ಟು ಪರಿಗಣಿಸಿದೆ.
ಈಹಿಂದೆ ಪ್ರಕರಣದ ಎಫ್ಐಆರ್ ರದ್ದುಪಡಿಸಬೇಕೆಂದು ಹಾರ್ದಿಕ್ರ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಹಾರ್ದಿಕ್ ಸುಪ್ರೀಂಕೋರ್ಟಿನ ಮೊರೆ ಹೋಗಿದ್ದಾರೆ. 2015 ಆಗಸ್ಟ್ನಲ್ಲಿ ಹಾರ್ದಿಕ್ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ಹೊರಳಿತ್ತು. ಹದಿಮೂರು ಮಂದಿ ಮೃತಪಟ್ಟಿದ್ದರು.