ಬಿಗಿಭದ್ರತೆಯ ಮೆಟ್ರೊ ಸುರಂಗದಲ್ಲಿ ಕೊಳೆತ ಮೃತದೇಹ ಪತ್ತೆ !
ಹೊಸದಿಲ್ಲಿ, ಫೆ. 23: ಬಿಗಿಭದ್ರತೆಯ ದೆಹಲಿ ಮೆಟ್ರೋದ ವಿಮಾನ ನಿಲ್ದಾಣ ಲೇನ್ನಲ್ಲಿ ಹೊಸದಿಲ್ಲಿ ಮತ್ತು ಶಿವಾಜಿ ಸ್ಟೇಡಿಯಂ ನಿಲ್ದಾಣಗಳ ನಡುವೆ ಸುರಂಗಮಾರ್ಗದಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಗಂಭೀರ ಭದ್ರತಾ ಲೋಪವನ್ನು ಬಹಿರಂಗಪಡಿಸಿದೆ.
ಕೊಳೆತ ಮೃತದೇಹ ಕನಿಷ್ಠ ನಾಲ್ಕು- ಐದು ತಿಂಗಳಿನಿಂದ ಇದ್ದಿರುವ ಸಾಧ್ಯತೆ ಇದೆ. ದೇಹದಲ್ಲಿ ಅಸ್ತಿಪಂಜರ ಮತ್ತು ಎಲುಬುಗಳು ಮಾತ್ರ ಉಳಿದಿವೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಆದರೆ ಮೃತದೇಹ ಇಲ್ಲಿ ಹೇಗೆ ಬಂತು ಅಥವಾ ಸಾವಿಗೆ ಕಾರಣ ಏನಿರಬಹುದು ಎಂಬ ಬಗ್ಗೆ ಯಾವುದೇ ಸುಳಿವು ಇಲ್ಲ ಎಂದು ಸ್ಪಷ್ಟಪಡಿಸಿವೆ.
ದೆಹಲಿ ಮೆಟ್ರೊ ರೈಲು ನಿಗಮದ ಸಿಬ್ಬಂದಿ ಫೆಬ್ರವರಿ 9ರಂದು ಮುಂಜಾನೆ ಮೃತದೇಹವನ್ನು ಪತ್ತೆ ಮಾಡಿದ್ದಾರೆ. ರೈಲು ಕಾರ್ಯಾಚರಣೆ ಮುಗಿದು ಮಾಮೂಲಿ ಹಳಿ ತಪಾಸಣೆ ವೇಳೆ ಇದು ಪತ್ತೆಯಾಗಿದೆ. ಎರಡು ಹಳಿಗಳ ನಡುವಿನ ಪ್ಯಾಸೇಜ್ನಲ್ಲಿ ಅಧಿಕಾರಿಗಳಿಗೆ ದುರ್ವಾಸನೆ ಬಂದಿದೆ. ಇದನ್ನು ಖಚಿತಪಡಿಸಿಕೊಳ್ಳಲು ನೆಲಮಟ್ಟದ ವರೆಗೆ ತೆರೆದಾಗ ಕೊಳೆತ ಮೃತದೇಹ ಪತ್ತೆಯಾಗಿದೆ ಎಂದು ಅವರು ವಿವರಿಸಿದ್ದಾರೆ.
"ಹೊಸದಿಲ್ಲಿ ಮೆಟ್ರೊ ರೈಲು ನಿಲ್ದಾಣ ನಿಯಂತ್ರಕರು ಸುರಂಗದ ಒಳಗೆ ಮಾಮೂಲಿ ನಿರ್ವಹಣೆಗಾಗಿ ಫೆಬ್ರವರಿ 9ರಂದು ಮಧ್ಯರಾತ್ರಿ ಬಳಿಕ ಮುಂಜಾನೆ 1.30ರ ವೇಳೆಗೆ ಹೋದಾಗ ನಿಲ್ದಾಣದ ಪ್ಲಾಟ್ಫಾರಂನಿಂದ 300 ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ನಿಯತವಾಗಿ ಹಳಿಯ ತಪಾಸಣೆ ನಡೆಸುತ್ತಿದ್ದರೂ, ಹಲವು ತಿಂಗಳ ಕಾಲ ಇದು ಏಕೆ ಗಮನಕ್ಕೆ ಬಂದಿಲ್ಲ ಎನ್ನುವುದು ನಿಗೂಢವಾಗಿದೆ" ಎಂದು ಸಿಐಎಸ್ಎಫ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮೆಟ್ರೊ ರೈಲು ನಿಲ್ದಾಣದ ಭದ್ರತೆಯ ಹೊಣೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯದ್ದು. ಯಾರಾದರೂ ಕೊಲೆ ಮಾಡಿ ಮೃತದೇಹವನ್ನು ಸುರಂಗದೊಳಕ್ಕೆ ಎಸೆದಿರುವ ಸಾಧ್ಯತೆ ಇದೆ ಅಥವಾ ಕಳ್ಳತನಕ್ಕಾಗಿ ತುರ್ತು ಸಂದರ್ಭಕ್ಕಾಗಿ ಇರುವ ಕಡಿದಾರ ಮಾರ್ಗದಲ್ಲಿ ಹೋಗಿ ಸಿಕ್ಕಿಹಾಕಿಕೊಂಡು ಮೃತಪಟ್ಟಿರುವ ಸಾಧ್ಯತೆಯೂ ಇದೆ ಅಥವಾ ಸಿಬ್ಬಂದಿ ಇದರಲ್ಲಿ ಷಾಮೀಲಾಗಿ ವ್ಯಕ್ತಿಯನ್ನು ಹತ್ಯೆ ಮಾಡಿ ಶವವನ್ನು ಎಸೆದಿರುವ ಸಾಧ್ಯತೆಯನ್ನೂ ಪೊಲೀಸರು ಶಂಕಿಸಿದ್ದಾರೆ.