ದಲಿತರ ಹಣ ಬೇರೆ ಇಲಾಖೆಗೆ ವರ್ಗಾಹಿಸಿದ್ದು ಖಂಡನೀಯ: ಗೋಪಾಲಕೃಷ್ಣ ಹರಳಹಳ್ಳಿ
ಬೆಂಗಳೂರು, ಫೆ.23: ದಲಿತ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಬೇರೆ ಇಲಾಖೆಗಳಿಗೆ ವರ್ಗಾಹಿಸಿ ಖರ್ಚು ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಕ್ರಮ ಸರಿಯಲ್ಲವೆಂದು ದಲಿತ ಹಕ್ಕುಗಳ ಸಮಿತಿಯ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ ಖಂಡಿಸಿದ್ದಾರೆ.
ದಲಿತರಿಗೆ ಮೀಸಲಿಟ್ಟ ಹಣದಲ್ಲಿ ಸುಮಾರು 929.41ಕೋಟಿ ರೂ. ವಂಚನೆ ಮಾಡಲಾಗಿದೆ. ದಲಿತ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಕೊಡಿಸುವುದಾಗಿ ಪಟ್ಟಿ ಮಾಡಿ, ಹಣ ನೀಡದೆ ಅನ್ಯಾಯ ಮಾಡಲಾಗಿದೆ. 2015-16ರಲ್ಲಿ 751ಕೋಟಿ ರೂ. ಬಾಕಿ ಉಳಿಸಿರುವ ವಿವಿಧ ಇಲಾಖೆಗಳ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರಕಾರ ವಿಫಲವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಎಸ್ಸಿಪಿ/ಟಿಎಸ್ಪಿ ಹಣದಲ್ಲಿ ದಲಿತರಿಗೆ 5 ಎಕರೆ ಭೂಮಿ ಹಾಗೂ ವಸತಿ ಕಲ್ಪಿಸಿಕೊಡಬೇಕೆಂದು ಬೇಡಿಕೆ ಸಲ್ಲಿಸಿದರೆ, ಅದಕ್ಕೆ ವಿರೋಧ ವ್ಯಕ್ತಪಡಿಸುವ ಸರಕಾರ ಸ್ಪಂದಿಸಲಿಲ್ಲ. ಆದರೆ, ದಲಿತರ ಹಣ ಅನ್ಯ ಸಮುದಾಯಕ್ಕೆ ಧಾರಾಳವಾಗಿ ಖರ್ಚು ಮಾಡಲು ಸರಕಾರ ಮುಂದಾಗಿರುವುದು ದಲಿತ ವಿರೋದಿತನಕ್ಕೆ ಸಾಕ್ಷಿಯಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.