'ಬಿಡಿಎ ನಷ್ಟಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ’
ಬೆಂಗಳೂರು, ಫೆ. 23: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಮ್ಯೂಚುಯಲ್ ಫಂಡ್ಗಳಲ್ಲಿ ಹೂಡಿದ್ದ ಹೂಡಿಕೆಯಿಂದ ಪ್ರಾಧಿಕಾರಕ್ಕೆ ನಷ್ಟವಾಗಿದ್ದು, ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಬೇಕೆಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಶಿಫಾರಸು ಮಾಡಿದೆ.
ಶುಕ್ರವಾರ ವಿಧಾನಸಭೆಯಲ್ಲಿ ಸಮಿತಿ ಅಧ್ಯಕ್ಷ ಆರ್.ಅಶೋಕ್ ನಗರಾಭಿವೃದ್ಧಿ ಇಲಾಖೆಗೆ ಸಂಬಂಧ ವರದಿ ಮಂಡನೆ ಮಾಡಿದರು. ವರದಿಯಲ್ಲಿ ನಷ್ಟಕ್ಕೆ ಕಾರಣರಾದ ಅಧಿಕಾರಿಗಳಿಂದಲೇ ಹಣ ವಸೂಲಿ ಮಾಡಬೇಕು. ಅಲ್ಲದೆ, ಅವರ ಆಸ್ತಿಗಳನ್ನು ಜಪ್ತಿ ಮಾಡಬೇಕು ಎಂದು ಶಿಫಾರಸು ಮಾಡಲಾಗಿದೆ.
ಮಹಾಲೆಕ್ಕಪಾಲಕರ ವಿಶೇಷ ಲೆಕ್ಕ ಪರಿಶೋಧನೆ(ಸಿಎಜಿ)ಯ ನಂತರ ತಿಳಿದು ಬಂದ ಕಾಲಾವಧಿ ಠೇವಣಿಗಳಲ್ಲದೆ ಬೇರೆ ಯಾವುದೇ ನಕಲಿ ಠೇವಣಿಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಕಾಲಾವಧಿ ಠೇವಣಿಗಳ ಹೂಡಿಕೆ ಜಾಡನ್ನು ಪತ್ತೆ ಮಾಡಬೇಕು ಎಂದು ಸೂಚಿಸಲಾಗಿದೆ.
ಬಿಡಿಎ ಅತಿ ಅವಶ್ಯವಿರುವ ಖಾತೆಗಳನ್ನು ಮಾತ್ರ ಉಳಿಸಿಕೊಂಡು ಆಯುಕ್ತರ ಅನುಮತಿಯಿಲ್ಲದೆ ತೆರೆಯಲಾದ ಅನಧಿಕೃತ ಬ್ಯಾಂಕ್ ಖಾತೆಗಳನ್ನು ಮುಕ್ತಾಯ ಗೊಳಿಸಬೇಕು. ಪ್ರಾಧಿಕಾರವು ತನ್ನ ಚಟುವಟಿಕೆಗಳ ವಿಷಯದಲ್ಲಿ ವಿಶೇಷವಾಗಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಉಂಟಾಗಬಹುದು ಅಪಾಯಗಳನ್ನು ಗುರುತಿಸಬೇಕು. ಪ್ರಾಧಿಕಾರದ ಆಯುಕ್ತರು ಹಣಕಾಸು ನಿರ್ವಹಣೆ, ಮೇಲ್ವಿಚಾರಣೆ ನಡೆಸಲು ಕಾರ್ಯೋನ್ಮುಖರಾಗಬೇಕು. ಸ್ವತಂತ್ರ ಆಂತರಿಕ ಲೆಕ್ಕ ಪರಿಶೋಧನಾ ವಿಭಾಗವನ್ನು ಸ್ಥಾಪಿಸಬೇಕು. ಯಾವುದೇ ವ್ಯಕ್ತಿಯು ಎಲ್ಲ ಪ್ರಮುಖ ವಹಿವಾಟುಗಳನ್ನು ನಿಯಂತ್ರಿಸದ ಹಾಗೆ ಸಂಸ್ಥೆಯ ನೌಕರರು ಮತ್ತು ಉಪಘಟಕಗಳ ಕಾರ್ಯ ಮತ್ತು ಹೊಣೆಗಾರಿಕೆ ಪ್ರಾಧಿಕಾರವು ವಿಂಗಡಿಸಬೇಕೆಂದು ಶಿಫಾರಸು ಮಾಡಲಾಗಿದೆ.