ಎಲ್ಲರನ್ನೂ ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಸರಕಾರ ಬೇಕಿದೆ: ಪಿ.ಜಿ.ಆರ್.ಸಿಂಧ್ಯಾ
![ಎಲ್ಲರನ್ನೂ ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಸರಕಾರ ಬೇಕಿದೆ: ಪಿ.ಜಿ.ಆರ್.ಸಿಂಧ್ಯಾ ಎಲ್ಲರನ್ನೂ ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಸರಕಾರ ಬೇಕಿದೆ: ಪಿ.ಜಿ.ಆರ್.ಸಿಂಧ್ಯಾ](https://www.varthabharati.in/sites/default/files/images/articles/2018/02/24/sindhya.jpg)
ಮೈಸೂರು,ಫೆ.24: ಕೇವಲ ನಮ್ಮದು ಭ್ರಷ್ಟಾಚಾರ ಮುಕ್ತ ಸರ್ಕಾರ ಎಂದರೆ ಸಾಲದು. ಎಲ್ಲರನ್ನೂ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಸರ್ಕಾರ ಬೇಕಾಗಿದೆ ಎಂದು ಜೆಡಿಎಸ್ ಹಿರಿಯ ಮುಖಂಡ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.
ವಸ್ತು ಪ್ರದರ್ಶನದ ಆವರಣದಲ್ಲಿ ಶನಿವಾರ ಮೈಸೂರು ನಗರ(ಜಿಲ್ಲಾ)ಜಾತ್ಯಾತೀತ ಜನತಾದಳ ಹಿಂದುಳಿದ ವರ್ಗಗಳ ಮುಖಂಡರ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಜೆಡಿಎಸ್ ಪಕ್ಷ, ಪಕ್ಷದ ಉನ್ನತ ಸ್ಥಾನದಲ್ಲಿ ಹಿಂದುಳಿದ ವರ್ಗದ ಜನರಿಗೆ ಪ್ರಾತಿನಿಧ್ಯ ನೀಡಿದೆ. ನಮ್ಮ ಪಕ್ಷ ಆಡಳಿತದಲ್ಲಿ ಇದ್ದಾಗಲೂ ಮೊದಲು ಈ ವರ್ಗಕ್ಕೆ ಉದ್ಯೋಗದಲ್ಲಿ ಹೆಚ್ಚು ಪ್ರಾಶಸ್ತ್ಯ ಕೊಟ್ಟಿದ್ದೇವೆ. ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಸಮಾನತೆ ತರಲು ಇತರ ಪಕ್ಷಗಳಿಗಿಂತಲೂ ಹೆಚ್ಚು ಜೆಡಿಎಸ್ ಬದ್ಧವಾಗಿದೆ. ಒಂದು ವರ್ಗದ ಜನರಿಗೆ ತುಪ್ಪ ತೋರಿಸುವುದರಿಂದ ಆ ವರ್ಗ ಅಭಿವೃದ್ಧಿ ಹೊಂದಲ್ಲ. ಕೇವಲ ನಮ್ಮದು ಭ್ರಷ್ಟಾಚಾರ ಮುಕ್ತ ಸರ್ಕಾರ ಎಂದರೆ ಸಾಲದು. ಎಲ್ಲರನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಸರ್ಕಾರ ಬೇಕಾಗಿದೆ ಎಂದು ತಿಳಿಸಿದರು. ಹಿಂದೆ ದಿ.ದೇವರಾಜ ಅರಸು ಅವರ ಸರ್ಕಾರದಲ್ಲಿ ದೇವನೂರು ವರದಿಯ ಮುಖಾಂತರ ಹಿಂದುಳಿದ ವರ್ಗದ ಯುವಕರಿಗೆ ಉದ್ಯೋಗ ನೀಡುವ ಕೆಲಸವಾಗಿತ್ತು. ಜೆಡಿಎಸ್ ಕೂಡ ಹಿಂದುಳಿದ ವರ್ಗದವದರಿಗೆ ಉದ್ಯೋಗ ನೀಡುವಲ್ಲಿಯೂ ಶ್ರಮಿಸಿದೆ ಎಂದರು. ಪಾಲಿಕೆಯಲ್ಲಿ ಸದಸ್ಯ, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿಯನ್ನು ದೊರಕಿಸಿಕೊಡುವ ಕೆಲಸವನ್ನು ಜೆಡಿಎಸ್ ಪಕ್ಷ ಮಾಡಿದೆ ಎಂದು ತಿಳಿಸಿದರು.
ಪರಿಷತ್ ಸದಸ್ಯ ಜೆಡಿಎಸ್ ವಕ್ತಾರ ರಮೇಶ್ ಬಾಬು ಮಾತನಾಡಿ, ರಾಜ್ಯವನ್ನು ಸಿದ್ದರಾಮಯ್ಯ ದಿವಾಳಿಯ ಅಂಚಿಗೆ ತಂದಿದ್ದಾರೆ ಎಂದು ಆರೋಪಿಸಿದರು. 2 ಲಕ್ಷ ಕೋಟಿ ಸಾಲದ ಬಗ್ಗೆ ನಾನು ಎತ್ತಿದ ಪ್ರಶ್ನೆಗೆ ಮುಖ್ಯಮಂತ್ರಿ ಸೇರಿದಂತೆ ಯಾರೊಬ್ಬರೂ ಉತ್ತರ ನೀಡಿಲ್ಲ. 6 ನೇ ವೇತನ ಆಯೋಗ ಯಥಾವತ್ತಾಗಿ ಜಾರಿ ಮಾಡಲು ಅವರಿಂದ ಸಾಧ್ಯವಾಗುತ್ತಿಲ್ಲ. ಆ ಮೂಲಕ ರಾಜ್ಯ ಸರ್ಕಾರ ದಿವಾಳಿಯತ್ತ ತೆರಳುತ್ತಿರುವುದು ಗೊತ್ತಾಗಿದೆ. ಹಿಂದುವಳಿದ ವರ್ಗದ ನಾಯಕರನ್ನು ಮೆಟ್ಟಿಲುಗಳಾಗಿ ಬಳಸಿಕೊಂಡು ಸಿಎಂ ಬೆಳೆದಿದ್ದಾರೆ. ಯಾವುದೇ ಹಿಂದುಳಿದ ವರ್ಗಕ್ಕೆ ನ್ಯಾಯ ಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಹೆಚ್.ವಿಶ್ವನಾಥ್, ಸೋಮಸುಂದರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.