ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ: ಅಪರಾಧಿಗೆ ಹತ್ತು ವರ್ಷ ಜೈಲು ಶಿಕ್ಷೆ
![ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ: ಅಪರಾಧಿಗೆ ಹತ್ತು ವರ್ಷ ಜೈಲು ಶಿಕ್ಷೆ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ: ಅಪರಾಧಿಗೆ ಹತ್ತು ವರ್ಷ ಜೈಲು ಶಿಕ್ಷೆ](https://www.varthabharati.in/sites/default/files/images/articles/2018/02/24/jail.jpeg)
ಮೈಸೂರು,ಫೆ.24: ಯುವತಿಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಡಿಎನ್ಎ ಪರೀಕ್ಷೆ ನಡೆಸಿ ಅತ್ಯಾಚಾರ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 35 ಸಾವಿರ ದಂಡ ವಿಧಿಸಿ ನಗರದ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ನೀಡಿದೆ.
ವಿವಾಹಿತ ಸ್ವಾಮಿ ನಾಯಕ ಶಿಕ್ಷೆಗೊಳಪಟ್ಟ ಅಪರಾಧಿ. ಬಡ ಕುಟುಂಬದ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ ಮಗುವಾದ ಬಳಿಕ ಆಕೆಗೆ ವಂಚಿಸಲು ಯತ್ನಿಸಿದ್ದ ಎನ್ನಲಾಗಿದೆ.
ಹೆಚ್.ಡಿ. ಕೋಟೆ ತಾಲೂಕಿನ ಹತ್ವಾಳು ಗ್ರಾಮದ ಸ್ವಾಮಿ ನಾಯಕನಿಗೆ ಮದುವೆಯಾಗಿದ್ದರೂ ಮಕ್ಕಳಾಗಿರಲಿಲ್ಲದ ಕಾರಣ ಮತ್ತೊಂದು ಮದುವೆಯಾಗಲು ಸಿದ್ಧತೆ ನಡೆಸುತ್ತಿದ್ದ. ಈ ನಡುವೆ 27 ವರ್ಷದ ಬಡ ಕುಟುಂಬದ ಯುವತಿ ಇವರ ಮನೆಗೆ ಆಗಾಗ ಬಂದು ಹೋಗುತ್ತಿದ್ದ ವೇಳೆ ಮದುವೆಯಾಗುವುದಾಗಿ ಆಕೆಗೆ ನಂಬಿಸಿ ಅತ್ಯಾಚಾರ ನಡೆಸಿದ್ದ. ಪರಿಣಾಮ ಯುವತಿ ಗರ್ಭಿಣಿಯಾಗಿದ್ದಳು, ಈ ವಿಚಾರ ಯುವತಿ ಪೋಷಕರಿಗೆ ತಿಳಿದು ಸಂಧಾನದ ಪ್ರಯತ್ನ ನಡೆದಿತ್ತು ಎನ್ನಲಾಗಿದೆ.
ಆದರೆ, ಆರೋಪಿ ಅತ್ಯಾಚಾರ ಎಸಗಿದ್ದನ್ನು ಒಪ್ಪಿಕೊಂಡಿರಲಿಲ್ಲ. ಇದರಿಂದ ನೊಂದ ಯುವತಿ ಹಾಗೂ ಕುಟುಂಬ ನಗರದ ಹೆಬ್ಬಾಳದ ಸಾಂತ್ವನ ಕೇಂದ್ರದ ಮೆಟ್ಟಿಲೇರಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸೂಚನೆ ಮೇರೆಗೆ ಪ್ರಕರಣದ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಗೆ ಬಂದಾಗ ಸಂತ್ರಸ್ತೆಯ ಮಗುವಿಗೆ ಮೂರು ವರ್ಷವಾಗಿತ್ತು. ಆದರೆ ಅಪರಾಧಿ ಮಾತ್ರ ತಾನು ಯಾವುದೇ ತಪ್ಪು ಮಾಡಿಲ್ಲವೆಂದು ಹೇಳುತ್ತಿದ್ದ. ಈ ಹಿನ್ನೆಲೆಯಲ್ಲಿ ಮಗು ಹಾಗೂ ಆರೋಪಿಯ ರಕ್ತ ಪರೀಕ್ಷೆಗೆ ನ್ಯಾಯಾಲಯ ಆದೇಶಿಸಿತ್ತು.
ವಿಧಿ ವಿಜ್ಞಾನದ ಪ್ರಯೋಗಾಲಯದ ಡಿಎನ್ಎ ಪರೀಕ್ಷೆಯಲ್ಲಿ ಮಗು ಆರೋಪಿಗೆ ಜನಿಸಿದ್ದು ಎನ್ನುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಸ್ವಾಮಿನಾಯಕ ತಪ್ಪಿತಸ್ಥನೆಂದು ನಗರದ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಪರಿಗಣಿಸಿದೆ. ಅಪರಾಧಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ಸಂತ್ರಸ್ತೆಗೆ 35 ಸಾವಿರ ರೂ. ಪರಿಹಾರ ನೀಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.