ರೈತ ಸಮಾವೇಶ ನಡೆಸುವ ನೈತಿಕತೆ ಬಿಜೆಪಿಗಿಲ್ಲ: ಡಿ. ಬಸವರಾಜ್
![ರೈತ ಸಮಾವೇಶ ನಡೆಸುವ ನೈತಿಕತೆ ಬಿಜೆಪಿಗಿಲ್ಲ: ಡಿ. ಬಸವರಾಜ್ ರೈತ ಸಮಾವೇಶ ನಡೆಸುವ ನೈತಿಕತೆ ಬಿಜೆಪಿಗಿಲ್ಲ: ಡಿ. ಬಸವರಾಜ್](https://www.varthabharati.in/sites/default/files/images/articles/2018/02/24/6.jpg)
ದಾವಣಗೆರೆ,ಫೆ.24: ರಾಷ್ಟ್ರೀಯ ಬ್ಯಾಂಕ್ಗಳಲ್ಲಿನ ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿರುವ ಬಿಜೆಪಿಗೆ ರೈತ ಸಮಾವೇಶ ನಡೆಸುವ ನೈತಿಕತೆ ಇಲ್ಲ ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್ ಟೀಕಿಸಿದರು.
ಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಸತತ ಬರಗಾಲದಿಂದ ರಾಜ್ಯದಲ್ಲಿ ಸಾಲು ಸಾಲಾಗಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇವರ ಸಂಕಷ್ಟ ಪರಿಹರಿಸಲು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿನ ರೈತರ ಸಾಲ ಮನ್ನಾ ಮಾಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಮನವಿ ಮಾಡಿದರೂ ಇದುವರೆಗೆ ಸ್ಪಂದಿಸಿಲ್ಲ. ಅದರೆ, ಈಗ ರೈತರ ಹೆಸರಲ್ಲಿ ಸಮಾವೇಶಕ್ಕೆ ಆಗಮಿಸುತ್ತಿರುವುದು ನಾಚೀಕೆಗೇಡಿನ ಸಂಗತಿ ಎಂದರು.
ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ವಿವಿಧ ಸಹಕಾರ ಸಂಘಗಳ ಸಾಲ ಮನ್ನಾ ಮಾಡಿದ್ದಾರೆ. ಅಲ್ಲದೇ ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲವನ್ನು ಮನ್ನಾ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಮಾಡಿದರೂ ಸ್ಪಂದಿಸದ ಪ್ರಧಾನಿ ನರೇಂದ್ರ ಮೋದಿ ಅವರು ಓಟಿಗಾಗಿ ರೈತ ಸಮಾವೇಶ ಮಾಡುತ್ತಿರುವುದು ಖಂಡನೀಯ ಎಂದರು.
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಬಿತ್ತನೆ ಬೀಜ ಮತ್ತು ಗೊಬ್ಬರಕ್ಕೆ ಒತ್ತಾಯಿಸಿದ ರೈತರ ಮೇಲೆ ಗುಂಡು ಹಾರಿಸಿ ಇಬ್ಬರು ರೈತರ ಬಲಿ ಪಡೆದ ಘಟನೆ ಪಕ್ಕದ ಹಾವೇರಿಯಲ್ಲಿ ಇಂದಿಗೂ ಹಸಿರಾಗಿದೆ. ರೈತ ಪರವಾದ ಕೆಲಸ ಮಾಡದ ಯಡಿಯೂರಪ್ಪ ಅವರಿಗೆ ಜನ್ಮದಿನ ಸಂದರ್ಭದಲ್ಲಿ ರೈತ ಬಂಧು ಎನ್ನುವ ಬಿರುದು ನೀಡುವಮೂಲಕ ನೇಗಿಲು ಉಡುಗೊರೆಯಾಗಿ ನೀಡುತ್ತಿರುವುದು ಹಾಸ್ಯಸ್ಪದವಾಗಿದೆ ಎಂದು ಟೀಕಿಸಿದರು.
ಕಳೆದ 3 ವರ್ಷದಿಂದ ಮಹದಾಯಿ ನೀರಿಗಾಗಿ ರೈತರು ಹೋರಾಟ ನಡೆಸುತ್ತಿದ್ದಾರೆ. ಅದರೆ, ಈ ವಿಷಯದಲ್ಲಿ ಮೋದಿ ಅವರು ಮೌನಿಯಾಗಿರುವುದು ರೈತರಿಗೆ ಬಗೆದ ದ್ರೋಹವಾಗಿದೆ. ಕಾಲ ಕಾಲಕ್ಕೆ ರೈತರಿಗೆ ಬೆಂಬಲ ಬೆಲೆ ಘೋಷಣೆ ಮಾಡದೆ 24 ಗಂಟೆಗಳ ಕಾಲ ಉದ್ಯಮಿಗಳ ಹಿತ ಕಾಪಾಡುತ್ತಿದ್ದಾರೆ. ಮೋದಿ ಆಡಳಿತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಸರ್ವನಾಶವಾಗಿದೆ ಎಂದು ಹೇಳಿದರು.
ರಫೆಲ್ ಯುದ್ದ ವಿಮಾನ ಖರೀದಿಯಲ್ಲಿ ಭಾರಿ ಭ್ರಷ್ಟಚಾರವನ್ನ ಮೋದಿ ಸರಕಾರ ನಡೆಸಿದ್ದು ಇದರಲ್ಲಿ ಖುದ್ದು ಪ್ರಧಾನಮಂತ್ರಿ ಆಸಕ್ತಿ ವಹಿಸಿ ಒಂದಕ್ಕೆ ಎರಡರಷ್ಟು ಬೆಲೆ ನೀಡಿ ತಮ್ಮ ಆಪ್ತ ಉದ್ಯಮಿ ಅಂಬಾನಿ ಕುಟುಂಬಕ್ಕೆ ಸಹಾಯ ಮಾಡಲು ಹೊರಟಿರುವುದು ಜಗತ್ತಿಗೆ ಗೊತ್ತಾಗಿದೆ. ಪ್ರಾಮಾಣಿಕತೆಯ ಮುಖವಾಡ ಧರಿಸಿರುವ ಮೋದಿಯವರ ಮುಖವಾಡವನ್ನು ಜನರು ಕಳಚಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಅಲ್ಲಾವುಲ್ಲಿ ಘಾಜಿಖಾನ್, ಅಶ್ರಫ್ ಆಲಿ,ಲಿಯಾಖತ್,ರಹಮತ್, ಡಿ. ಶಿವಕುಮಾರ್, ಈಶ್ವರ್ ಇದ್ದರು.