ಅಧಿಕಾರಕ್ಕೆ ಬಂದರೆ 100 ಕೋಟಿ ರೂ.ವಿಪ್ರ ನಿಧಿ ಘೋಷಣೆ: ಕುಮಾರಸ್ವಾಮಿ
![ಅಧಿಕಾರಕ್ಕೆ ಬಂದರೆ 100 ಕೋಟಿ ರೂ.ವಿಪ್ರ ನಿಧಿ ಘೋಷಣೆ: ಕುಮಾರಸ್ವಾಮಿ ಅಧಿಕಾರಕ್ಕೆ ಬಂದರೆ 100 ಕೋಟಿ ರೂ.ವಿಪ್ರ ನಿಧಿ ಘೋಷಣೆ: ಕುಮಾರಸ್ವಾಮಿ](/images/placeholder.jpg)
ಬೆಂಗಳೂರು, ಫೆ.24: ಜೆಡಿಎಸ್ ಅಧಿಕಾರಕ್ಕೆ ಬಂದರೆ ಬ್ರಾಹ್ಮಣ ಸಮಾಜದ ಅಭಿವೃದ್ದಿಗೆ ನೂರು ಕೋಟಿ ರೂ.ಗಳ ವಿಪ್ರ ನಿಧಿ ಘೋಷಿಸುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಭರವಸೆ ನೀಡಿದರು.
ಶನಿವಾರ ನಗರದ ನ್ಯಾಷನಲ್ ಕಾಲೇಜು ಆವರಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಬೆಂಗಳೂರು ಮಹಾನಗರ ಸಂಘಟನೆಯ ವತಿಯಿಂದ ಆಯೋಜಿಸಲಾಗಿರುವ ಎರಡು ದಿನಗಳ ಬೆಂಗಳೂರು ಮಹಾನಗರ ವಿಪ್ರ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದ ಅಭಿವೃದ್ದಿಗೆ ಯಾವುದೆ ಸರಕಾರಗಳು ನೀಡಿರುವ ಕೊಡುಗೆಗಳಿಗಿಂತಲೂ ಬ್ರಾಹ್ಮಣ ಸುಮುದಾಯ ನೀಡಿರುವ ಕೊಡುಗೆ ಅಪಾರ. ಇದುವರೆಗೂ ಸಾವಿರಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಆದರೆ ಈ ಕಾರ್ಯಕ್ರಮದಿಂದ ದೊರೆತ ಖುಷಿ ಎಲ್ಲೂ ಸಿಕ್ಕಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ನಿಗಮವನ್ನು ರಚಿಸುವುದು ವಿಪ್ರ ಸಮುದಾಯದ ಪ್ರಮುಖ ಬೇಡಿಕೆಯಾಗಿದೆ. ಕೆಲವು ತಿಂಗಳುಗಳ ಹಿಂದೆ ಕಾಂಗ್ರೆಸ್ ಸರಕಾರ ಈ ಬಗ್ಗೆ ಚರ್ಚೆ ಪ್ರಾರಂಭಿಸಿತ್ತು. ಆದರೆ, ಕೊನೆಗೆ ಈ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳಿತು. ಹಿರಿಯರ ಆಶೀರ್ವಾದದೊಂದಿಗೆ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದಲ್ಲಿ ಇನ್ನೊಮ್ಮೆ ನೀವು ಅರ್ಜಿ ಸಲ್ಲಿಸುವ ಅವಶ್ಯಕತೆಯೇ ಇಲ್ಲ ಎಂದು ತಿಳಿಸಿದ ಅವರು, ಇದಕ್ಕೆ ಸ್ಥಳದಲ್ಲೆ ನೂರು ಕೋಟಿ ರೂ. ವಿಪ್ರ ನಿಧಿ ಕಾರ್ಯಕ್ರಮದ ಘೋಷಣೆ ಮಾಡುವುದಾಗಿ ಭರವಸೆ ನೀಡಿದರು. 20 ತಿಂಗಳ ಕಾಲ ಮುಖ್ಯಮಂತ್ರಿ ಸ್ಥಾನದಲ್ಲಿದ್ದಾಗ ನನಗೆ ಯಾವುದೇ ಅನುಭವವಿರಲಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಲ್ಲಿ ಅಧಿಕಾರಿಗಳನ್ನು ಹೊರತುಪಡಿಸಿದ ಆಡಳಿತ ನೀಡುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದರು.
ಇಂದಿನಿಂದ ಚುನಾವಣಾ ಪ್ರವಾಸ ಕೈಗೊಳ್ಳುತ್ತಿದ್ದು, ಒಂದು ತಿಂಗಳುಗಳ ಕಾಲ ಉತ್ತರ ಕರ್ನಾಟಕದಲ್ಲಿ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಸರಕಾರ ಜಾಹೀರಾತುಗಳನ್ನು ನೀಡುವ ಬದಲು ಅದೇ ಹಣದಲ್ಲಿ ರಾಜ್ಯದ ಜನತೆಗೆ ಹಲವಾರು ಅಭಿವೃದ್ದಿಗಳನ್ನು ಕೈಗೊಳ್ಳಬಹುದಿತ್ತು ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ರಾಘವೇಂದ್ರಸ್ವಾಮಿ ಮಠದ ಸುಭುದೇಂದ್ರತೀರ್ಥ ಶ್ರೀಪಾದಂ, ಕಣ್ವಮಠ ಮೂಲ ಮಹಾಸಂಸ್ಥಾನದ 1008 ಶ್ರೀ ವಿದ್ಯಾವಾರಿಧಿತೀರ್ಥ ಶ್ರೀಪಾದಂ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ, ಶಾಸಕ ಆರ್.ವಿ.ದೇವರಾಜ್, ಕೆ.ಗೋಪಾಲಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.