ವಿದೇಶಗಳಿಗೆ ಪರಾರಿಯಾಗುತ್ತಿರುವ ಸಾಲಗಾರರಿಗೆ ಮೋದಿ ಬೆಂಬಲವಾಗಿ ನಿಂತಿದ್ದಾರೆ: ಸೈಯದ್ ಮುಜೀಬ್

ತುಮಕೂರು,ಫೆ.24: ಒಂದೆಡೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದ ಜನಸಾಮಾನ್ಯರು ಕಂಗಾಲಾಗಿದ್ದರೆ, ಇನ್ನೊಂದೆಡೆ ಜನಸಾಮಾನ್ಯರ ಹಣವನ್ನು ಸಾಲವಾಗಿ ಪಡೆದು ವಿದೇಶಗಳಿಗೆ ಪರಾರಿಯಾಗುತ್ತಿರುವ ಬಂಡವಾಳಗಾರರಿಗೆ ಬೆಂಬಲವಾಗಿ ನಿಂತಿರುವ ಪ್ರಧಾನಿ ಮೋದಿಯಿಂದ ದೇಶದ ಅಭಿವೃದ್ದಿ ಸಾಧ್ಯವಿಲ್ಲ ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ ಸೈಯದ್ ಮುಜೀಬ್ ತಿಳಿಸಿದ್ದಾರೆ.
ನಗರದ ಬಿಎಸ್.ಎನ್ಎಲ್ ಕಛೇರಿ ಎದುರು ಸಿಪಿಐ(ಎಂ) ಪಕ್ಷ, ಸಿಐಟಿಯು ಸಂಘಟನೆ, ಬ್ಯಾಂಕುಗಳಿಗೆ ಪಂಗನಾಮ ಹಾಕಿ ಊರು ಬಿಟ್ಟಿರುವ ಬಂಡವಾಳಶಾಹಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು, ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ಆಡಳಿತದಲ್ಲಿ ದೇಶದ ಬೆನ್ನೆಲುಬಾಗಿರುವ ರೈತರು ಸಂಕಷ್ಠದಲ್ಲಿದ್ದಾರೆ. ರೈತರ ಸಾಲ ಮನ್ನಾ ಮಾಡಲು ಹಣವಿಲ್ಲ ಎನ್ನುವ ಕೇಂದ್ರ ಬಿಜೆಪಿ ಸರಕಾರ ದೊಡ್ಡ ದೊಡ್ಡ ಬಂಡವಾಳಿಗರಾದ ಅಂಬಾನಿ, ಅದಾನಿಗೆ ಬ್ಯಾಂಕ್ಗಳಲ್ಲಿ 72 ಸಾವಿರ ಕೋಟಿಗೂ ಹೆಚ್ಚು ಸಾಲಗಳನ್ನು ನೀಡುತ್ತದೆ. ಮೋದಿ ಅಧಿಕಾರಕ್ಕೆ ಬಂದ ಮೇಲೆ ಸಾಲಗಳು 2.58 ಸಾವಿರ ಕೋಟಿಯಿಂದ 6.50 ಸಾವಿರ ಕೋಟಿಗೆ ಹೆಚ್ಚಳವಾಗಿದೆ. ಆದರೆ ರೈತರ ಸಾಲ ಮನ್ನಾ ಮಾಡಲು ಸರಕಾರದ ಬಳಿ ಹಣವಿಲ್ಲ. ಇದು ಮೋದಿಯವರ ಆಡಳಿತದ ವೈಖರಿ ಎಂದು ಟೀಕಿಸಿದರು.
ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಬಿ. ಉಮೇಶ್ ಮಾತನಾಡಿ, ಕಾರ್ಪೋರೇಟ್ ಕಂಪೆನಿಗಳು, ಬಂಡವಳಗಾರರು ಮತ್ತು ಶ್ರೀಮಂತ ಉದ್ದಿಮೆದಾರರ ಸಹಕಾರದಿಂದ ಗೆದ್ದು ಬಂದ ನರೆಂದ್ರಮೋದಿ ಬಡವರಿಗೆ ಏನನ್ನು ಮಾಡಿಲ್ಲ. ದೇಶ ಕೊಳ್ಳೆ ಹೊಡೆದು ವಿದೇಶಕ್ಕೆ ಹೊಗುತ್ತಿರುವ ಖದೀಮರ ವಿರುದ್ದ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರೈತರು, ಬಡವರು, ಕಾರ್ಮಿಕರು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಕೆಂದ್ರ ಸರಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಕಾರ್ಮಿಕರ ಭವಿಷ್ಯ ನಿಧಿ ಬಡ್ಡಿ ದರವನ್ನು ಕಡಿತ ಮಾಡುವುದರೊಂದಿಗೆ ಜನವಿರೋಧಿ, ಕಾರ್ಮಿಕ ವಿರೊಧಿ, ರೈತ ವಿರೋಧಿ ಸರಕಾರವಾಗಿದೆ ಎಂದರು.
ಸಿಐಟಿಯು ಜಿಲ್ಲಾ ಖಜಾಂಚಿ ಎ.ಲೋಕೆಶ್ ಮಾತನಾಡಿ, ಜನಸಾಮಾನ್ಯರು ಬಳಸುವ ಪ್ರತಿನಿತ್ಯದ ಅಡುಗೆ ಅನಿಲದ ದರಗಳನ್ನು ನಿರಂತರವಾಗಿ ಹೆಚ್ಚಳ ಮಾಡುತ್ತಿದೆ. ಬೆಲೆ ಏರಿಕೆಗೆ ಕಡಿವಾಣ ಹಾಕಲು ಇದುವರೆಗೂ ಸಾಧ್ಯವಾಗಿಲ್ಲ ಎಂದರು
ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಮಾತನಾಡಿ, ಆರ್.ಬಿ.ಐ ಮಾಜಿ ಗವರ್ನರ್ ಈ ಹಿಂದೆಯೇ ಬ್ಯಾಂಕುಗಳು ಸಾಲ ತೆಗೆದುಕೊಂಡಿರುವವರ ಹೆಸರುಗಳನ್ನು ಘೊಷಿಸಬೇಕು ಎಂದು ಆದೇಶ ಹೊರಡಿಸಿದ್ದರು. ಆದರೆ ಬ್ಯಾಂಕುಗಳಿಗೆ ಮೊಸ ಮಾಡಿದ ಕಾರ್ಪೋರೇಟ್ ಕಂಪನಿಗಳು ಮತ್ತು ಉದ್ದಿಮೆದಾರರ ಹೆಸರುಗಳನ್ನು ಬ್ಯಾಂಕ್ಗಳು ಬಹಿರಂಗಪಡಿಸಲೇ ಇಲ್ಲ. ಈಗಲಾದರೂ ಸಾಲ ಪಡೆದಿರುವವರ ಪಟ್ಟಿಯನ್ನು ಬಿಡುಗಡೆ ಮಾಡಬೇಕು. ಸಾರ್ವಜನಿಕರ ಹಣವನ್ನು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಶ್ರೀಧರ್,ರಾಮಚಂದ್ರ,ಜಗದಿಶ್ ತುರುವೇಕೆರೆ, ತಿಮ್ಮೇಗೌಡ,ಟಿ.ಹೆಚ್.ರಾಮು,ಎಸ್.ರಾಘವೇಂದ್ರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.







