ಮತ್ತೊಂದು ವಿವಾದದಲ್ಲಿ ಕೆನಡ ಪ್ರಧಾನಿ
ಹೊಸದಿಲ್ಲಿ, ಫೆ. 24: ಭಾರತ ಭೇಟಿಗೆ ಆಗಮಿಸಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಹೊಸದಿಲ್ಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಟ್ರುಡೊ ಹಾಗೂ ಅವರ ಪತ್ನಿ ಪಾಲ್ಗೊಂಡಿದ್ದು, ಅಲ್ಲಿ ಹಾಕಲಾದ ಭಾರತದ ಭೂಪಟದಲ್ಲಿ ಜಮ್ಮು ಹಾಗೂ ಕಾಶ್ಮೀರವನ್ನು ತಪ್ಪಾಗಿ ಚಿತ್ರಿಸಲಾಗಿದೆ. ಟ್ರುಡೊ ಹಾಗೂ ಅವರ ಪತ್ನಿ ಪಾಲ್ಗೊಂಡ ಹೊಸದಿಲ್ಲಿಯ ಕಾರ್ಯಕ್ರಮದ ವೇದಿಕೆಯಲ್ಲಿ ಗಿಲ್ಗಿಟ್ ಹಾಗೂ ಬಾಲ್ಟಿಸ್ಥಾನ್ ಸೇರಿದಂತೆ ಸಂಪೂರ್ಣ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶ ಹೊಂದಿರದ ವಿರೂಪಗೊಂಡ ಜಮ್ಮು ಹಾಗೂ ಕಾಶ್ಮೀರದ ನಕ್ಷೆ ಹಾಕಲಾಗಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ತನ್ನ ಒಂದು ಭಾಗ ಎಂದು ಭಾರತ ದೃಢವಾಗಿ ನಂಬಿದೆ ಹಾಗೂ ಈ ಭಾಗ ಪಾಕಿಸ್ತಾನದಿಂದ ಸ್ವಾಧೀನಕ್ಕೆ ಒಳಗಾಗಿದೆ ಎಂದು ಹೇಳುತ್ತಿದೆ. ಭಾರತದ ಭೂಪಟವನ್ನು ವಿರೂಪಗೊಳಿಸಿರುವುದು ಕೆನಡಾ ಸರಕಾರಕ್ಕೆ ಮುಖಭಂಗ ಉಂಟು ಮಾಡಿದೆ. ಟ್ರುಡೊ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಖಲಿಸ್ಥಾನ್ ಭಯೋತ್ಪಾದಕ ಜಸ್ಪಾಲ್ ಅತ್ವಾಲ್ ಪಾಲ್ಗೊಳ್ಳುವ ಮೂಲಕ ಕೆಲವು ದಿನಗಳ ಹಿಂದೆ ಟ್ರುಡೊ ವಿವಾದಕ್ಕೆ ಒಳಗಾಗಿದ್ದರು.