ಸರಕಾರದ ನಿರ್ದೇಶನದಂತೆ ಡಿಸಿ ಮನ್ನಾ ಭೂಮಿ ಹಂಚಿಕೆ: ಉಡುಪಿ ಡಿಸಿ ಪ್ರಿಯಾಂಕ

ಉಡುಪಿ, ಫೆ.24: ಉಡುಪಿ ಜಿಲ್ಲೆಯಲ್ಲಿರುವ ಡಿಸಿ ಮನ್ನಾ ಭೂಮಿಯನ್ನು ಯಾವ ಪ್ರಮಾಣದಲ್ಲಿ ಹಂಚಿಕೆ ಮಾಡಬೇಕೆಂಬ ಕುರಿತು ಸರಕಾರದಿಂದ ಸ್ಪಷ್ಟೀಕರಣ ಕೋರಿದ್ದು, ಈ ಬಗ್ಗೆ ಸೂಕ್ತ ನಿರ್ದೇಶನ ಬಂದ ಕೂಡಲೇ ಅರ್ಹ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಭೂಮಿ ಹಂಚಿಕೆ ಮಾಡ ಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಬನ್ನಂಜೆಯ ನಾರಾಯಣಗುರು ಸಭಾಭವನದಲ್ಲಿ ಶನಿವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಜಿಲ್ಲೆಯಲ್ಲಿರುವ ಡಿಸಿ ಮನ್ನಾ ಭೂಮಿ ಹಂಚಿಕೆ ಮಾಡುವ ಬಗ್ಗೆ ಸಾಕಷ್ಟು ಗೊಂದಲಗಳಿದ್ದು, ನಿರ್ದಿಷ್ಟವಾಗಿ ಎಷ್ಟು ಎಕರೆ ಹಂಚಿಕೆ ಮಾಡಬೇಕು ಎನ್ನುವ ಕುರಿತಂತೆ ಸರಕಾರದಿಂದ ನಿರ್ದೇಶನ ಕೋರಲಾಗಿದೆ. ಜಿಲ್ಲೆಯಲ್ಲಿ ಅತಿಕ್ರಮಣ ಗೊಂಡಿರುವ ಡಿಸಿ ಮನ್ನಾ ಭೂಮಿಯನ್ನು ಗುರುತಿಸಿ ತೆರವುಗೊಳಿಸುವ ಕಾರ್ಯವನ್ನು ತಹಶೀಲ್ದಾರರು ಮಾಡುತ್ತಿದ್ದಾರೆ ಎಂದರು. ಡಿಸಿ ಮನ್ನಾ ಭೂಮಿಗೆ ಸಂಬಂಧಪಟ್ಟ ಸಮಸ್ಯೆಗಳ ಕುರಿತು ಚರ್ಚಿಸಲು ಕೂಡಲೇ ತಾಲೂಕು ಮಟ್ಟದ ಸಭೆಯನ್ನು ಕರೆಯುವಂತೆ ಜಿಲ್ಲಾಧಿಕಾರಿಗಳು ತಹಶೀಲ್ದಾರರಿಗೆ ಸೂಚನೆ ನೀಡಿದರು.
ಡಿಸಿ ಮನ್ನಾ ಭೂಮಿ ಹಂಚಿಕೆ ಕುರಿತು ರಚಿಸಲಾಗಿರುವ ಸಮಿತಿಯ ಸಭೆ ಗಳು ನಿಗದಿತವಾಗಿ ನಡೆಯುತ್ತಿಲ್ಲ. ಡಿಸಿ ಮನ್ನಾ ಭೂಮಿ ಬಗ್ಗೆ ತಿಳುವಳಿಕೆ ಇಲ್ಲದವರನ್ನು ಸದಸ್ಯರನ್ನಾಗಿ ಮಾಡಲಾಗಿದೆ. ಕುಂದಾಪುರದ ಮಡಾಮಕ್ಕಿಯಲ್ಲಿ ವ್ಯಕ್ತಿಯೊಬ್ಬರು 38 ಎಕರೆ ಭೂಮಿಯನ್ನು ಅತಿಕ್ರಮಣ ಮಾಡಿದ್ದಾರೆ ಎಂದು ದಲಿತ ಸಂಘಟನೆಗಳ ಮುಖಂಡರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಧಿಕಾರಿ, ಈ ಕುರಿತು ತಹಶೀಲ್ದಾರ್ ಅವರಿಂದ ಪರಿಶೀಲಿಸಿ ಕ್ರಮ ಕೈಗೊಳ್ಳ ಲಾಗುವುದು ಎಂದರು.
ದಲಿತ ಹೆಸರಿನಲ್ಲಿ ಮರಳುಗಾರಿಕೆ: ದಲಿತರ ಹೆಸರಿನಲ್ಲಿ ಬೇನಾಮಿ ಯಾಗಿ ಮರಳುಗಾರಿಕೆ ಮಾಡುತ್ತಿದ್ದು, ಇದರಿಂದ ದಲಿತರಿಗೆ ಯಾವುದೇ ಪ್ರಯೋಜನ ದೊರೆಯುತ್ತಿಲ್ಲ. ದಲಿತರ ಹೆಸರಲ್ಲಿ ಉಡುಪಿ ನಗರಸಭೆಯಲ್ಲಿ ಬೋಗಸ್ ವೆಬ್ಸೈಟ್ ಆರಂಭಿಸಿ ಹಣ ದುರುಪಯೋಗ ಮಾಡಲಾಗಿದೆ ಎಂದು ದಲಿತ ಮುಖಂಡ ಸುಂದರ್ ಮಾಸ್ತರ್ ಆರೋಪಿಸಿದರು.
ಇದಕ್ಕೆ ಉತ್ತರಿಸಿದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ಡಾ. ಸಿ.ಬಿ.ವೇದಮೂರ್ತಿ, ಮರಳುಗಾರಿಕೆ ಲೈಸೆನ್ಸ್ ಬಗ್ಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ವೆಬ್ಸೈಟ್ ತೆರೆದಿರುವ ಕುರಿತಂತೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
ಹಂಗಾರಕಟ್ಟೆಯ ಫಿಶ್ಕಟ್ಟಿಂಗ್ ಫ್ಯಾಕ್ಟರಿಯಿಂದ ಪರಿಸರದ ಪರಿಶಿಷ್ಟ ಜಾತಿಯ ಕುಟುಂಬದವರಿಗೆ ಹಾಗೂ ಸಮೀಪದ ಶಾಲೆಯಲ್ಲಿನ ಮಕ್ಕಳಿಗೆ ತೊಂದರೆಯಾಗಿದ್ದು, ಇದನ್ನು ಮುಚ್ಚಿಸುವಂತೆ ಮಂಜುನಾಥ್ ಬಾಳಕುದ್ರು ಸಭೆಯಲ್ಲಿ ಒತ್ತಾಯಿಸಿದರು. ಈ ಕುರಿತಂತೆ ಈಗಾಗಲೇ ಮಕ್ಕಳ ರಕ್ಷಣಾ ಆಯೋಗ ಭೇಟಿ ನೀಡಿ ಪರಿಶೀಲಿಸಿದ್ದು, ಕೂಡಲೇ ಕ್ರಮ ಕೈಗೊಂಡು ವಾರ ದೊಳಗೆ ವರದಿ ನೀಡುವಂತೆ ಐರೋಡಿ ಗ್ರಾಪಂನ ಪಿಡಿಓ ಹಾಗೂ ಉಡುಪಿ ತಾಪಂ ಕಾರ್ಯ ನಿರ್ವಹಣಾಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಹೆದ್ದಾರಿಗಳ ಬದಿಯಲ್ಲಿ ಮದ್ಯದಂಗಡಿ ತೆರೆಯುವ ಕುರಿತು ನಿಷೇಧವಿದ್ದರೂ ಬ್ರಹ್ಮಾವರ ಮತ್ತು ಕೋಟೇಶ್ವರದ ಬಳಿ ಮದ್ಯದಂಗಡಿಗಳು ಕಾರ್ಯ ನಿರ್ವ ಹಿಸುತ್ತಿರುವ ಬಗ್ಗೆ ಸಭೆಯಲ್ಲಿ ಕೇಳಿ ಬಂದ ದೂರಿಗೆ ಪ್ರತಿಕ್ರಿಯಿಸಿದ ಡಿಸಿ, ಅಬಕಾರಿ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳ ಲಾಗುವುದು ಎಂದರು.
ತಲ್ಲೂರಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಯ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಉದಯ ಕುಮಾರ್ ತಲ್ಲೂರು, ಕಾರ್ಕಳ ಅಂಬೇಡ್ಕರ್ ಭವನದ ಕಳಪೆ ನಿರ್ವಹಣೆ ಬಗ್ಗೆ ದೂರಿದರು. ಚಾಂತಾರು ಗ್ರಾಮದಲ್ಲಿ ಎಸ್ಸಿ ಕಾಲೋನಿ ಬಳಿ ತ್ಯಾಜ್ಯ ಹಾಕುತ್ತಿರುವ ಕುರಿತ ದೂರಿನ ಬಗ್ಗೆ ಪರಿಶೀಲಿಸುವಂತೆ ಜಿಪಂ ಮುಖ್ಯ ಯೋಜನಾಧಿಕಾರಿಗೆ ಡಿಸಿ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರ್ಗಿ, ಕುಂದಾ ಪುರ ಸಹಾಯಕ ಆಯುಕ್ತ ಭೂಬಾಲನ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಮೇಶ್ ಹಾಗೂ ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕೊರಗ ಜನಾಂಗದ ಅವಹೇಳನ
ಕೋಲ ಮತ್ತು ಕಂಗೀಲು ನೃತ್ಯಗಳಲ್ಲಿ ಕೊರಗಜ್ಜನ ವೇಷಧಾರಿಯಿಂದ ಅಶ್ಲೀಲ ರೀತಿಯ ದೃಶ್ಯಗಳು ಮತ್ತು ಸಂಭಾಷಣೆಗಳನ್ನು ಪ್ರದರ್ಶನ ಮಾಡುವ ಪ್ರಕರಣಗಳು ಹೆಚ್ಚುತ್ತಿದ್ದು, ಇದರಿಂದ ಕೊರಗ ಜನಾಂಗದ ಅವಹೇಳನ ನಡೆಯುತ್ತಿದೆ. ಇದನ್ನು ನಿಲ್ಲಿಸುವಂತೆ ಕೊರಗ ಮುಖಂಡರು ಸಭೆಯಲ್ಲಿ ಕೋರಿದರು. ಈ ಕುರಿತು ಸಂಬಂದಪಟ್ಟ ತಹಶೀಲ್ದಾರರು ಕ್ರಮ ಕೈಗೊಳ್ಳುಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಲೋಕೋಪಯೋಗಿ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಲೈಸೆನ್ಸ್ ನೊಂದಣಿ ಆಗುತ್ತಿಲ್ಲ. ಇದರಿಂದ ಟೆಂಡರ್ ಗುತ್ತಿಗೆ ಕಾಮಗಾರಿ ದೊರೆ ಯದೇ ಅವಕಾಶ ವಂಚಿತರಾಗುತ್ತಿದ್ದೇವೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ದಲಿತ ಮುಖಂಡರು ಒತ್ತಾಯಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಧಿಕಾರಿ ಸಂಬಂದಪಟ್ಟ ಅಧಿಕರಿಗಳಿಗೆ ತಿಳಿಸಿದರು.







