ಹೆಬ್ಬೆಟ್ಟಿನ ಸಹಿಗಾಗಿ ರಿಯಲ್ ಎಸ್ಟೇಟ್ ಉದ್ಯಮಿಯ ಶವ ಹೊರತೆಗೆದ ದುಷ್ಕರ್ಮಿಗಳು: ಆರೋಪ
ಸಾಂದರ್ಭಿಕ ಚಿತ್ರ
ಮೈಸೂರು,ಫೆ.24: ಹೃದಯಾಘಾತದಿಂದ ಮೃತಪಟ್ಟ ರಿಯಲ್ ಎಸ್ಟೇಟ್ ಉದ್ಯಮಿಯೋರ್ವರ ಶವವನ್ನು ಅಕ್ರಮ ದಂಧೆಕೋರರು ಹೆಬ್ಬೆಟ್ಟಿನ ಸಹಿಗಾಗಿ ಹೊರತೆಗೆದ ಘಟನೆ ನಂಜನಗೂಡು ಪಟ್ಟಣದಲ್ಲಿ ನಡೆದಿದೆ ಎನ್ನಲಾಗಿದೆ.
ನಂಜನಗೂಡು ಪಟ್ಟಣದ ಅಮೃತಾ ರಿಯಲ್ ಎಸ್ಟೇಟ್ ಉದ್ಯಮಿ ಶ್ರೀಕಂಠ ಪ್ರಸಾದ್ ಅಲಿಯಾಸ್ ಫಕ್ಕಿ ಗುರುವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದರು. ನಂತರ ಮೃತದೇಹವನ್ನು ಹೆಜ್ಜಿಗೆ ಸೇತುವೆಯ ಸ್ಮಶಾನದಲ್ಲಿ ಶವಸಂಸ್ಕಾರ ಮಾಡಿ ಹೂಳಲಾಗಿತ್ತು. ಆದರೆ ತಡರಾತ್ರಿ ಶ್ರೀಕಂಠ ಪ್ರಸಾದ್ ಮೃತದೇಹವನ್ನು ಕಿಡಿಗೇಡಿಗಳು ಹೊರ ತೆಗೆದಿದ್ದಾರೆ ಎನ್ನಲಾಗಿದೆ.
ಮೃತಪಟ್ಟ ರಿಯಲ್ ಎಸ್ಟೇಟ್ ಉದ್ಯಮಿ ಜೊತೆ ಅವರ ಜೊತೆಗಿದ್ದ ವ್ಯಕ್ತಿಗಳಿಗೆ ಕಳೆದ ಕೆಲದಿನಗಳ ಹಿಂದೆ ಭೂವಿಚಾರಕ್ಕೆ ಸಂಬಂಧಪಟ್ಟಂತೆ ವ್ಯವಹಾರ ನಡೆದಿತ್ತು. ವ್ಯವಹಾರಕ್ಕೆ ಸಂಬಂಧಿಸಿದ ಪತ್ರಗಳಿಗೆ ಮೃತ ರಿಯಲ್ ಎಸ್ಟೇಟ್ ಉದ್ಯಮಿಯ ಸಹಿ ಹಾಕಿರಲಿಲ್ಲ ಎನ್ನಲಾಗಿದ್ದು, ಇದರಿಂದಾಗಿ ಹೆಬ್ಬೆಟ್ಟಿನ ಸಹಿ ಮಾಡಲು ಹೂತಿದ್ದ ಮೃತದೇಹವನ್ನೇ ದುಷ್ಕರ್ಮಿಗಳು ಹೊರ ತೆಗೆದಿರುವ ಆರೋಪ ಕೇಳಿ ಬಂದಿದೆ.
ಈ ಸಂಬಂಧ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ನಂಜನಗೂಡು ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.