ಹಿಂದುತ್ವದಿಂದ ಪ್ರಜಾಪ್ರಭುತ್ವಕ್ಕೆ ಮಾರಕ: ಬಿ.ಟಿ.ವೆಂಕಟೇಶ್
ಬೆಂಗಳೂರು, ಫೆ.24: ಹಿಂದುತ್ವವಾದವು ಪ್ರಜಾಪ್ರಾಭುತ್ವಕ್ಕೆ ಆತಂಕಕಾರಿ ಎಂಬುವುದು ರಾಜ್ಯದಲ್ಲಿ ನಡೆದಿರುವ ಹಲವು ಘಟನೆಗಳಿಂದ ಸಾಬೀತಾಗಿದೆ ಎಂದು ಹಿರಿಯ ವಕೀಲ ಹಾಗೂ ಮಾಜಿ ಸರಕಾರಿ ಸಾರ್ವಜನಿಕ ಅಭಿಯೋಜಕ ಬಿ.ಟಿ.ವೆಂಕಟೇಶ್ ಇಂದಿಲ್ಲಿ ತಿಳಿಸಿದ್ದಾರೆ.
ಶನಿವಾರ ಪ್ರಜಾಸತ್ತಾತ್ಮಕ ಹಕ್ಕುಗಳ ಸಮನ್ವಯ ಸಮಿತಿ ನಗರದ ಸೆನೆಟ್ ಹಾಲ್ನಲ್ಲಿ ಆಯೋಜಿಸಿದ್ದ ‘ಅಭಿಪ್ರಾಯಭೇದದ ಮೇಲೆ ಹಿಂದುತ್ವವಾದಿಗಳ ದಾಳಿ’ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿಯನ್ನು ಕೊಲ್ಲುವ ಮೂಲಕ ಹಿಂದುತ್ವವಾದಿಗಳು, ಪ್ರಜಾಪ್ರಭುತ್ವವನ್ನು ಬೆಂಬಲಿಸುವ ಯಾರೇ ಆದರೂ ಅವರನ್ನು ಸುಮ್ಮನೆ ಬಿಡುವುದಿಲ್ಲವೆಂದು ಎಚ್ಚರಿಕೆ ರವಾನಿಸಿದ್ದಾರೆಂದು ಆತಂಕ ವ್ಯಕ್ತಪಡಿಸಿದರು.
ಹಿಂದುತ್ವ ಸಿದ್ದಾಂತವು ಕೇವಲ ಹತ್ತು, ಇಪ್ಪತ್ತು ವರ್ಷಗಳಿಂದ ಪ್ರಾರಂಭಗೊಂಡಿದಲ್ಲ. ಅದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೆ, ಆಧುನಿಕ ಕಾಲದಲ್ಲಿ ಆರೆಸ್ಸೆಸ್ ಸ್ಥಾಪನೆಯ ನಂತರ ಅದು ಸಾಂಸ್ಥಿಕ ರೂಪ ಪಡೆದಿದ್ದು, ಹಿಂದುತ್ವ ಒಪ್ಪದವರನ್ನು ನಿರ್ಣಾಮ ಮಾಡುವ ಬಹುಮುಖ್ಯವಾದ ಉದ್ದೇಶವನ್ನು ಹೊಂದಿದೆ ಎಂದು ಅವರು ವಿವರಿಸಿದರು.
ದೇಶದಲ್ಲಿ ಆರೆಸ್ಸೆಸ್ ಸ್ಥಾಪನೆಯ ನಂತರ ಪೊಲೀಸ್, ನ್ಯಾಯಾಲಯ, ಶಿಕ್ಷಣ ಸೇರಿದಂತೆ ಎಲ್ಲವನ್ನು ಕೇಸರಿಮಯಗೊಳಿಸಲಾಗಿದೆ. ಸರಕಾರದ ಪ್ರತಿ ಇಲಾಖೆಯು ಕೇಸರಿಮಯಗೊಂಡಿದ್ದು, ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರಿಗೆ ನ್ಯಾಯವೆ ಸಿಗದ ರೀತಿಯಲ್ಲಿ ಪರಿವರ್ತನೆಗೊಳಿಸಲಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕೇಸರಿ ಪಡೆಗಳ ಕರ್ಮಭೂಮಿಯಾಗಿರುವ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಶಾಸಕರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೂ ಅಲ್ಲಿ ಆರೆಸ್ಸೆಸ್ ತನ್ನ ದುಷ್ಕೃತ್ಯಗಳನ್ನು ಹೆಚ್ಚು ಮಾಡಿದೆ. ಇದನ್ನು ತಡೆಯುವಂತಹ ಕೆಲಸಕ್ಕೆ ಕಾಂಗ್ರೆಸ್ ನಾಯಕರು ಮುಂದಾಗುತ್ತಿಲ್ಲವೆಂದರೆ, ರಾಜಕೀಯದಲ್ಲಿ ಆರೆಸ್ಸೆಸ್ನ ಪ್ರಭಾವ ಯಾವ ಮಟ್ಟಕ್ಕಿದೆ ಎಂಬುದನ್ನು ಗಮನಿಸಬಹುದು ಎಂದು ಅವರು ತಿಳಿಸಿದರು.
ಇತ್ತೀಚಿನ ದಿನದಲ್ಲಿ ಯುವ ಜನತೆ ಕೋಮುವಾದಿಗಳನ್ನು ಪ್ರಶ್ನಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಾಗಿದ್ದು, ಇದು ಚಳವಳಿಯ ರೂಪ ಪಡೆಯಬೇಕಾಗಿದೆ. ಇದಕ್ಕಾಗಿ ದಲಿತ, ಕಾರ್ಮಿಕ ಸಂಘಟನೆಯ ನಾಯಕರು ಹಾಗೂ ಯುವಜನತೆ ಒಂದು ವೇದಿಕೆಗೆ ಬರಬೇಕಾದ ಅಗತ್ಯವಿದೆ ಎಂದು ಅವರು ಆಶಿಸಿದರು.
ವೆಂಕಟೇಶ್ವರ ವಿಶ್ವವಿದ್ಯಾಲಯದ ಉಪನ್ಯಾಸಕ ಪ್ರೊ.ಶೇಷಯ್ಯ ಮಾತನಾಡಿ, ಇತ್ತೀಚಿಗೆ ಗೋವಾದಲ್ಲಿ ನಡೆದ ಆರೆಸ್ಸೆಸ್ ಸಭೆಯಲ್ಲಿ ದೇಶದಲ್ಲಿ ಸಂವಿಧಾನ, ಜಾತ್ಯಾತೀತತೆ ಹಾಗೂ ಪ್ರಜಾಪ್ರಭುತ್ವ ನಿರ್ಣಾಮದ ಕುರಿತು ಗಂಭೀರ ಚಿಂತನೆ ನಡೆಸಿದ್ದಾರೆ. ಹೀಗಾಗಿ ಆರೆಸ್ಸೆಸ್ನ ಈ ಜನವಿರೋಧಿ ಸಿದ್ಧಾಂತವನ್ನು ಜನತೆಗೆ ತಿಳಿಸುವುದು ತೀರಾ ಅಗತ್ಯವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಜಾಪ್ರಭುತ್ವ ಹಕ್ಕುಗಳ ಸಮಿತಿಯ ಉಪಾಧ್ಯಕ್ಷ ಕ್ರಾಂತಿ ಚೈತನ್ಯ, ವಕೀಲ ಶಿವಮಣಿಧನ್, ಶ್ರೀರಾಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







