ಜಮೀಯ್ಯತುಲ್ ಫಲಾಹ್ ಮಂಗಳೂರು ನಗರ ಘಟಕದಿಂದ ಕಿಡ್ನಿ ಡಯಾಲಿಸಿಸ್ ಯಂತ್ರ ಕೊಡುಗೆ
ಮಂಗಳೂರು, ಫೆ. 24: ಜಮೀಯ್ಯತುಲ್ ಫಲಾಹ್ ಮಂಗಳೂರು ನಗರ ಘಟಕವು ಕಿಡ್ನಿ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ಒದಗಿಸುವ ಸಲುವಾಗಿ ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆ ಕಿಡ್ನಿ ಡಯಾಲಿಸಿಸ್ ಯಂತ್ರವನ್ನು ಪ್ರಾಯೋಜಕರ ನೆರವಿನೊಂದಿಗೆ ಒದಗಿಸಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಸಾದುದ್ದೀನ್ ಸಾಲಿಹ್ ಸಂಸ್ಥೆಯು ದಾನಿಗಳ ಹಾಗೂ ಸಂಘ ಸಂಸ್ಥೆಗಳ ಪ್ರಾಯೋಜಕತ್ವ ದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಗಳ ವಿವಿಧ ಆಸ್ಪತ್ರೆಗಳಿಗೆ 9 ಡಯಾಲಿಸಿಸ್ ಯಂತ್ರಗಳನ್ನು ನೀಡಿದೆ ಎಂದರಲ್ಲದೆ ಯಂತ್ರವನ್ನು ಪ್ರಾಯೋಜಿಸಿದ ಪಿಎಫ್ಐ ಸಂಸ್ಥೆಯ ಕೊಡುಗೆಯನ್ನು ಶ್ಲಾಘಿಸಿದರು.
ಮಂಗಳೂರು ನಗರ ಡಿಸಿಪಿ ಉಮಾ ಪ್ರಶಾಂತ್ ಯಂತ್ರವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಕಣಚೂರು ಸಂಸ್ಥೆಯ ಮುಖ್ಯಸ್ಥ ಹಾಜಿ ಕಣಚೂರು ಮೋನು ಹಾಜಿ ಮಾತನಾಡಿ ಉಚಿತ ಆರೋಗ್ಯ ಸೇವೆಗೆ ಸಂಘ ಸಂಸ್ಥೆಗಳು ಸಹಕಾರ ನೀಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಕರ್ನಿರೆ ಸೈಯದ್ ಹಾಜಿ, ಅಬ್ದುರ್ರವೂಫ್ ಪುತ್ತಿಗೆ ಭಾಗವಹಿಸಿದ್ದರು. ಕಣಚೂರು ಆಸ್ಪತ್ರೆಯ ನಿರ್ದೇಶಕ ಅಬ್ದುರ್ರಹ್ಮಾನ್, ಡಯಾಲಿಸಿಸ್ ಯಂತ್ರದ ಪ್ರಾಯೋಜಕತ್ವ ನೀಡಿದ ಪಿಎಫ್ಐ ಮುಖಂಡರಾದ ನವಾಝ್ ಉಳ್ಳಾಲ್, ಅನ್ವರ್ ಸಾದಾತ್, ಜಮೀಯ್ಯತುಲ್ ಫಲಾಹ್ ಕಾರ್ಯದರ್ಶಿ ಜಮಾಲ್ ಕುದ್ರೋಳಿ, ಕೋಶಾಧಿಕಾರಿ ಇಮ್ತಿಯಾಝ್ ಖತೀಬ್ ಉಪಸ್ಥಿತರಿದ್ದರು.
ನಝೀರ್ ಅಹ್ಮದ್ ಸ್ವಾಗತಿಸಿದರು. ಡಾ. ರೋಹನ್ ವಂದಿಸಿದರು.