ಬೀಡಿ ಸೇದುತ್ತಿದ್ದ ವ್ಯಕ್ತಿಯ ಮೇಲೆ ಮದ್ಯ ಉಗಿದಿದ್ದರಿಂದ ಸಾವು!
ಹೊಸದಿಲ್ಲಿ,ಫೆ.25: ಜಗಳದ ಸಂದರ್ಭದಲ್ಲಿ ಬೀಡಿ ಸೇದುತ್ತಿದ್ದ ಯುವಕನ ಮೇಲೆ ಇನ್ನೋರ್ವ ವ್ಯಕ್ತಿ ಮದ್ಯವನ್ನು ಉಗಿದಿದ್ದರಿಂದ ಆತನ ಮೈಗೆ ಬೆಂಕಿ ಹತ್ತಿಕೊಂಡು ಸಾವನ್ನಪ್ಪಿದ ವಿಲಕ್ಷಣ ಘಟನೆ ನೈರುತ್ಯ ದಿಲ್ಲಿಯ ಸಾಗರಪುರದಲ್ಲಿ ನಡೆದಿದೆ.
ಸಾಗರಪುರದ ಗೀತಾಂಜಲಿ ಪಾರ್ಕ್ ಬಳಿಯ ನಿವಾಸಿ ಪಂಕಜ್ ಸಿಂಗ್(27) ಮೃತ ದುರ್ದೈವಿ.
ಗುರುವಾರ ಸಂಜೆ ಸಿಂಗ್ ಟ್ಯೂಷನಿಗೆ ತೆರಳಿದ್ದ ತನ್ನ ಆರರ ಹರೆಯದ ಮಗನನ್ನು ಕರೆತರುವಂತೆ ಪತ್ನಿ ಪ್ರೀತಿಗೆ ತಿಳಿಸಿ ತಾನು ಸಮೀಪದಲ್ಲಿಯೇ ಇರುವ ತಾಯಿಯ ಮನೆಗೆ ತೆರಳಿದ್ದ. ತಾನು ಮಗನನ್ನು ಕರೆತಂದು ಬಹಳ ಹೊತ್ತಾದರೂ ಗಂಡ ಮನೆಗೆ ಮರಳದಿದ್ದಾಗಿ ಪ್ರೀತಿ ಆತನನ್ನು ಹುಡುಕಿಕೊಂಡು ಹೋಗಿದ್ದಳು. ಅಲ್ಲಿ ಸಮೀಪದ ನಿವಾಸಿ ಪ್ರದೀಪ್ ಕುಮಾರ್ ಅಲಿಯಾಸ್ ಜುಗ್ನು ಮತ್ತು ಪಂಕಜ್ ನಡುವೆ ಜಗಳ ನಡೆದಿತ್ತು. ಕುಮಾರ್ನ ಕೈಯಲ್ಲಿ ಮದ್ಯದ ಬಾಟ್ಲಿಯಿದ್ದರೆ ಸಿಂಗ್ ಬೀಡಿ ಸೇದುತ್ತಿದ್ದ. ಜಗಳ ತಾರಕಕ್ಕೇರಿದಾಗ ಕುಮಾರ್ ತನ್ನ ಬಾಯಲ್ಲಿದ್ದ ಮದ್ಯವನ್ನು ಸಿಂಗ್ ಮೈಮೇಲೆ ಉಗಿದಿದ್ದ. ಅದು ಆತನ ಮುಖ ಮತ್ತು ಎದೆಯ ಮೇಲೆ ಚೆಲ್ಲಿತ್ತು. ಉರಿಯುತ್ತಿದ್ದ ಬೀಡಿಯಿಂದಾಗಿ ಏಕಾಏಕಿ ಮದ್ಯಕ್ಕೆ ಬೆಂಕಿ ಹಿಡಿದುಕೊಂಡಿದ್ದು, ಇತರರು ರಕ್ಷಣೆಗೆ ಧಾವಿಸುವ ಮುನ್ನವೇ ಸಿಂಗ್ ಮುಖ, ಎದೆ ಮತ್ತು ಹೊಟ್ಟೆಗೆ ತೀವ್ರ ಸುಟ್ಟಗಾಯಗಳಾಗಿದ್ದವು. ಪ್ರೀತಿ ಇತರರ ನೆರವಿನೊಂದಿಗೆ ಸಿಂಗ್ನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಳಾದರೂ ಚಿಕಿತ್ಸೆ ಫಲಕಾರಿ ಯಾಗದೆ ಆತ ಅಸು ನೀಗಿದ್ದಾನೆ.
ಸಿಂಗ್ ನಿರುದ್ಯೋಗಿಯಾಗಿದ್ದು, ಆಗಾಗ್ಗೆ ಕುಮಾರನೊಂದಿಗೆ ಮದ್ಯ ಸೇವಿಸುತ್ತಿದ್ದ ಎನ್ನಲಾಗಿದೆ.
ಕುಮಾರ್ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತಲೆಮರೆಸಿ ಕೊಂಡಿರುವ ಆತನಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.