ಕೇರಳ: ಶುಹೈಬ್ ಹತ್ಯೆ ಪ್ರಕರಣದ ಸಿಬಿಐ ತನಿಖೆಗೆ ಸಿಎಂ ನಕಾರ
ಯುವ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ; ಲಾಠಿಚಾರ್ಜ್
ತಿರುವನಂತಪುರಂ, ಫೆ.26: ಕಣ್ಣೂರಿನಲ್ಲಿ ಫೆ.12ರಂದು ನಡೆದ ಕಾಂಗ್ರೆಸ್ ಕಾರ್ಯಕರ್ತ ಶುಹೈಬ್ ಅವರ ರಾಜಕೀಯ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿರಾಕರಿಸಿದ ಕೆಲವೇ ಗಂಟೆಗಳ ಬಳಿಕ ತಿರುವನಂತಪುರಂನಲ್ಲಿ ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸರೊಂದಿಗೆ ಘರ್ಷಣೆಗೆ ಇಳಿದರು.
ಸಚಿವಾಲಯದ ಎದುರು ಪ್ರತಿಭಟನೆ ನಡೆಸಿದ ಸುಮಾರು 100ರಷ್ಟು ಕಾರ್ಯಕರ್ತರು ಶುಹೈಬ್ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ನಿರಾಕರಿಸಿದ ಮುಖ್ಯಮಂತ್ರಿ ವಿರುದ್ಧ ಘೋಷಣೆ ಕೂಗಿದರಲ್ಲದೆ ಪೊಲೀಸರತ್ತ ಕಲ್ಲು ಮತ್ತು ಬಾಟಲಿಗಳನ್ನು ಎಸೆದರು. ಉದ್ರಿಕ್ತರನ್ನು ಚದುರಿಸಲು ಲಾಠಿ ಚಾರ್ಜ್ ನಡೆಸಿದ ಪೊಲೀಸರು ಅಶ್ರುವಾಯು ಸಿಡಿಸಿದರು. ಈ ಮಧ್ಯೆ, ಹತ್ಯೆ ಪ್ರಕರಣದ ಸಿಬಿಐ ತನಿಖೆಗೆ ಒತ್ತಾಯಿಸಿ ಸಚಿವಾಲಯದ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಇಬ್ಬರು ಯುವಕಾಂಗ್ರೆಸ್ ಕಾರ್ಯಕರ್ತರ ಆರೋಗ್ಯಸ್ಥಿತಿ ಹದಗೆಟ್ಟ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಧಾನಸಭೆಯಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಈ ಕುರಿತು ಆಗ್ರಹ ಮಂಡಿಸಿದಾಗ ಉತ್ತರಿಸಿದ ಮುಖ್ಯಮಂತ್ರಿ ವಿಜಯನ್, ರಾಜ್ಯದ ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿರುವ ಕಾರಣ ಸಿಬಿಐ ತನಿಖೆಯ ಅಗತ್ಯವಿಲ್ಲ ಎಂದರು. ಅಲ್ಲದೆ ಈಗಾಗಲೇ 6 ಮಂದಿಯನ್ನು ಬಂಧಿಸಲಾಗಿದ್ದು ಇದರಲ್ಲಿ ಹೆಚ್ಚಿನವರು ಸಿಪಿಎಂ ಕಾರ್ಯಕರ್ತರು ಎಂದು ಹೇಳಿದರು. ಈ ಹಂತದಲ್ಲಿ ಕಾಂಗ್ರೆಸ್ ಶಾಸಕರು ಘೋಷಣೆಗಳನ್ನು ಕೂಗಿದರಲ್ಲದೆ, ಶುಹೈಬ್ ಹತ್ಯೆ ಪ್ರಕರಣದ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆಯಬೇಕು ಎಂದು ಆಗ್ರಹಿಸಿದಾಗ ಕಲಾಪವನ್ನು ಸ್ವಲ್ಪ ಸಮಯದವರೆಗೆ ಮುಂದೂಡಲಾಯಿತು.
ಕಣ್ಣೂರಿನಲ್ಲಿ ರಾಜಕೀಯ ಪ್ರೇರಿತ ಹತ್ಯಾ ಸರಣಿಯ ಮುಂದುವರಿದ ಭಾಗವಾಗಿ ಫೆ.12ರಂದು ಕಾಂಗ್ರೆಸ್ ಕಾರ್ಯಕರ್ತ ಶುಹೈಬ್ರನ್ನು ಹತ್ಯೆ ಮಾಡಲಾಗಿತ್ತು. ಶುಹೈಬ್ ಹಾಗೂ ಇತರ ಇಬ್ಬರು ಕಾರ್ಯಕರ್ತರತ್ತ ಮೊದಲು ಬಾಂಬ್ ಎಸೆದು ಅವರನ್ನು ಗಲಿಬಿಲಿಗೊಳಿಸಿ ಬಳಿಕ ಮರಕಾಯುಧಗಳಿಂದ ದಾಳಿ ನಡೆಸಲಾಗಿತ್ತು. ಶುಹೈಬ್ ಮೃತಪಟ್ಟರೆ ಇತರ ಇಬ್ಬರು ತೀವ್ರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.