ಮಹಾದಾಯಿ ವಿವಾದ ಇತ್ಯರ್ಥಕ್ಕೆ ಪ್ರಧಾನಿ ಮಧ್ಯಪ್ರವೇಶಿಸಬೇಕು: ರಾಹುಲ್ ಗಾಂಧಿ ಆಗ್ರಹ

ಬೆಳಗಾವಿ/ಹುಬ್ಬಳ್ಳಿ,ಫೆ.26: ಪ್ರಧಾನಿ ನರೇಂದ್ರ ಮೋದಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ಮಾತುಕತೆ ಮೂಲಕ ಉತ್ತರ ಕರ್ನಾಟಕದ ನೀರಾವರಿ ಸಮಸ್ಯೆಯಾದ ಮಹಾದಾಯಿ ವಿವಾದವನ್ನು ಇತ್ಯರ್ಥಪಡಿಸಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಎರಡನೆ ಹಂತದ ಜನಾಶೀರ್ವಾದ ಯಾತ್ರೆಯ ಕೊನೆ ದಿನ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಭಾಗದಲ್ಲಿ ಕುಡಿಯುವ ನೀರಿಗೆ ಸಾಕಷ್ಟು ಸಮಸ್ಯೆಯಿದೆ. ಹೀಗಾಗಿ, ಪ್ರಧಾನಿ ಮೋದಿ ಮಧ್ಯಪ್ರದೇಶ ಮಾಡಿ, ಸಮಸ್ಯೆ ಪರಿಹರಿಸಬೇಕೆಂದು ಒತ್ತಾಯಿಸಿದರು.
ಗರಿಷ್ಠ ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿ ಜನರನ್ನು ಬ್ಯಾಂಕಿನ ಮುಂದೆ ಸಾಲು ನಿಲ್ಲುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ನಂತವರಿಗೆ ಮತ ನೀಡುತ್ತೀರೋ ಅಥವಾ ರೈತರ ಸಾಲ ಮನ್ನಾ ಮಾಡಿದ ಹಾಗೂ ಜನರಿಗಾಗಿ ಹಲವಾರು ಯೋಜನೆಗಳನ್ನು ಜಾರಿ ಮಾಡಿದ ಕಾಂಗ್ರೆಸ್ ಸರಕಾರಕ್ಕೆ ಮತ ನೀಡುತ್ತೀರಾ ಎಂದು ಜನರನ್ನು ಪ್ರಶ್ನಿಸಿದರು.
ಕೇಂದ್ರದ ನರೇಂದ್ರ ಮೋದಿ ಅವರ ಸರಕಾರ ಮಾಡಿದ್ದಾದರೂ ಏನು ಎಂದು ಪ್ರಶ್ನಿಸಿದ ಅವರು, ದೇಶದಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು. ಆದರೆ ಇಂದು ಆ ಭರವಸೆ ಕೇವಲ ಭರವಸೆಯಾಗಿಯೇ ಉಳಿದಿದೆ. ಈಗ ಪ್ರಧಾನಿ ನಮಗೆ ಪಾಠ ಕಲಿಸಲು ಬರುತ್ತಿದ್ದಾರೆ. ಮೋದಿಯವರೇ...ನಿಮ್ಮಿಂದ ನಾವು ಪಾಠ ಕಲಿಯಬೇಕಿಲ್ಲ. ನಮ್ಮದೇನಿದ್ದರೂ ಬಸವಣ್ಣನವರ ಕಾಯಕವೇ ಕೈಲಾಸ, ನುಡಿದಂತೆ ನಡೆಯುವುದು. ನೀವು ನಮ್ಮಿಂದ ಕಲಿಯಿರಿ ಎಂದು ವಾಗ್ದಾಳಿ ನಡೆಸಿದರು.
ಭ್ರಷ್ಟಚಾರದ ಕುರಿತು ಮಾತನಾಡುವ ಮೋದಿ, ಅವರು ಮುಖ್ಯಮಂತ್ರಿಯಾಗಿದ್ದ 2002 ರಿಂದ ಗುಜರಾತ್ ನಲ್ಲಿ ಲೋಕಪಾಲ್ ಮಾಡಿಲ್ಲ ಹಾಗೂ ಪ್ರಧಾನಮಂತ್ರಿಯಾಗಿ ನಾಲ್ಕು ವರ್ಷಗಳು ಕಳೆಯುತ್ತಿದ್ದರೂ ದಿಲ್ಲಿಯಲ್ಲಿ ಲೋಕಪಾಲ್ ಮಾಡಿಲ್ಲ. ಇವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಾವ ನೈತಿಕತೆಯಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರ ಪುತ್ರ 50 ಸಾವಿರ ಬಂಡವಾಳ ಹೂಡಿ, ಮೂರು ತಿಂಗಳಲ್ಲಿ 80 ಕೋಟಿ ಲಾಭ ಪಡೆದಿದ್ದಾರೆ. ಈ ಕುರಿತು ಪ್ರಧಾನಿ ಯಾಕೆ ಚಕಾರವೆತ್ತುತ್ತಿಲ್ಲ ಎಂದು ಕಿಡಿಕಾರಿದರು.
'ಕರ್ನಾಟಕದ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಏಳು ಕೆಜಿ ಉಚಿತ ಅಕ್ಕಿ ಕೊಡುತ್ತಿದ್ದಾರೆ. ಕೇಂದ್ರದಿಂದ ನೀವೇನು ಕೊಟ್ಟಿದ್ದೀರಿ, ಎಷ್ಟು ಉದ್ಯೋಗ ಸೃಷ್ಟಿ ಮಾಡಿದ್ದೀರಾ, ನನಗೆ ಅಧಿಕಾರ ಕೊಡಿ ಕಪ್ಪು ಹಣ ತಂದು ನಿಮ್ಮ ಖಾತೆಗೆ 15 ಲಕ್ಷ ಹಾಕುತ್ತೇನೆ ಎಂದು ಭರವಸೆ ನೀಡಿದ್ದೀರಿ. ಅದನ್ನು ಮಾಡಿದ್ದೀರಾ?' ಎಂದು ಮೋದಿಗೆ ಪ್ರಶ್ನಿಸಿದರು. .
ಭೇಟಿ ಪಡಾವೋ ಏನಾಯ್ತು: ಪ್ರಧಾನಿ ಮೋದಿ ಭೇಟಿ ಪಡಾವೋ-ಭೇಟಿ ಬಚಾವೋ ಎಂದು ಕರೆ ನೀಡಿದರು. ಆದರೆ, ಇದುವರೆಗೂ ಈ ಯೋಜನೆ ಅನುಷ್ಠಾನಕ್ಕಾಗಿ ಒಂದು ರೂ. ಹಣ ನೀಡಿಲ್ಲ. ಆದರೆ, ಕಾಪೋರೇಟ್ ಗಳಿಗೆ ಸಾವಿರಾರು ಕೋಟಿ ರೂ.ಗಳನ್ನು ನೀಡಿದ್ದಾರೆ. ದಲಿತ, ಆದಿವಾಸಿ, ಹಿಂದುಳಿದ ವರ್ಗಗಳ ಜನರ ಬಗ್ಗೆ ಮೋದಿ ಸರಕಾರಕ್ಕೆ ಕನಿಷ್ಠ ಕಾಳಜಿಯಿಲ್ಲ. ಅಂಬೇಡ್ಕರ್ ಹೆಸರು ಹೇಳುವ ಮೋದಿ ದಲಿತರ ಅಭಿವೃದ್ಧಿಗಾಗಿ ಕೇವಲ 55 ಸಾವಿರ ಕೋಟಿ ರೂ.ಗಳು ಅನುದಾನ ನೀಡಿದ್ದಾರೆ. ಆದರೆ ಕರ್ನಾಟಕ ಸರಕಾರ ಅದರ ಅರ್ಧದಷ್ಟು ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟಿದೆ ಎಂದು ರಾಹುಲ್ ಗಾಂಧಿ ಮೋದಿಗೆ ತಿರುಗೇಟು ನೀಡಿದರು.
ದೇವರ ದರ್ಶನ ಮಾಡಿದ ರಾಹುಲ್: ಮೊದಲ ಹಂತದ ಜನಾಶೀರ್ವಾದ ವೇಳೆ ದೇವಸ್ಥಾನಗಳಿಗೆ ಭೇಟಿ ನೀಡಿ ವಿಪಕ್ಷಗಳಿಂದ ಟೀಕೆಗೊಳಗಾಗಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಎರಡನೇ ಹಂತದ ರಾಜ್ಯ ಪ್ರವಾಸದ ವೇಳೆಯೂ ತಮ್ಮ ಟೆಂಪಲ್ ರನ್ ಮುಂದುವರೆಸಿದರು.
ಬಾಗಲಕೋಟದಿಂದ ತಾಲೂಕಿನ ಗೊಡಚಿ ಗ್ರಾಮಕ್ಕೆ ಆಗಮಿಸಿದ ರಾಹುಲ್ ಗಾಂಧಿ ಇಲ್ಲಿನ ಇತಿಹಾಸ ಪ್ರಸಿದ್ಧ ಗೊಡಚಿ ವೀರಭದ್ರೇಶ್ವರ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು. ಅನಂತರ ಸವದತ್ತಿ ತಾಲೂಕಿನ ರೇಣುಕಾ ಯಲ್ಲಮ್ಮ ಗುಡ್ಡಕ್ಕೆ ಭೇಟಿ ನೀಡಿದರು. ಧಾರವಾಡ ಮಾರ್ಗವಾಗಿ ಸಂಚಾರದ ಸಂದರ್ಭದಲ್ಲಿ ಮುರುಘಾ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಯೊಂದಿಗೆ ಮಾತುಕತೆ ಮಾಡಿದರು.
ಮುಂಬೈ– ಕರ್ನಾಟಕದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಜನಾಶೀರ್ವಾದ ಯಾತ್ರೆಯ ಕೊನೆ ದಿನ ಸೋಮವಾರ ಸವದತ್ತಿಗೆ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಗ್ಗಲಿಗೆ ಬಾರಿಸಿದರು. ಸಿಎಂ ಜಗ್ಗಲಿಗೆ ಬಾರಿಸುತ್ತಲೇ ಕುಣಿದರು. ಇಬ್ಬರೂ ನಾಯಕರು ಜಗ್ಗಲಿಗೆ ಬಾರಿಸುತ್ತಿದ್ದರೆ ಸೇರಿದ್ದ ಕಾರ್ಯಕರ್ತರು ಘೋಷಣೆ ಕೂಗುತ್ತಾ ಹೆಜ್ಜೆ ಹಾಕಿದರು.
ಜಿಎಸ್ಟಿ ಎಂದರೆ ಗಬ್ಬರಸಿಂಗ್ ಟ್ಯಾಕ್ಸ್. ಜಿಎಸ್ಟಿಯಿಂದ ಲಕ್ಷಾಂತರ ರೂ. ವ್ಯವಹಾರ ನಿಂತುಹೋಗಿದೆ. ಇಂತಹ ಕೇಂದ್ರ ಸರ್ಕಾರ ರಾಜ್ಯದಲ್ಲೂ ಆಡಳಿತ ನಡೆಸುವುದು ನಿಮಗೆ ಇಷ್ಟವಿದೆಯೇ? ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದರು.
ಮೋದಿಗೆ ಜೈ
ಎಐಸಿಸಿ ಅಧ್ಯಕ್ಷರ ಜನಾಶೀರ್ವಾದ ಹುಬ್ಬಳ್ಳಿ ನಗರ ಪ್ರವೇಶ ಮಾಡುತ್ತಿದ್ದಂತೆಯೇ ರಸ್ತೆ ಅಕ್ಕ ಪಕ್ಕದಲ್ಲಿ ನಿಂತಿದ್ದ ಒಂದಿಷ್ಟು ಯುವಕರ ಕಡೆಯಿಂದ ಮೋದಿ ಮೋದಿ ಎಂಬ ಘೋಷಣೆಗಳು ಕೂಗಿ ಬಂದವು.
ಜನಾಶೀರ್ವಾದ ಯಾತ್ರೆಯ ಕೊನೆ ದಿನ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಮದುರ್ಗ ತಾಲೂಕಿನ ಸಿನಾಡಿ ಗ್ರಾಮದ ಭೀಮಯ್ಯ ಹಾಗೂ ರಾಮಕ್ಕ ಎಂಬ ರೈತ ಮನೆಗೆ ಭೇಟಿ ಮಾಡಿ ಅವರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಅನ್ನಭಾಗ್ಯದ ಅಕ್ಕಿ ಸರಿಯಾಗಿ ಸಿಗುತ್ತಿದೆಯಾ, ಕೃಷಿ, ಬೆಳೆ ಹಾಗೂ ಮಹಾತ್ಮಗಾಂಧಿ ನರೇಗಾ ಕುರಿತು ಮಾಹಿತಿ ಪಡೆದುಕೊಂಡರು. ಇದೇ ವೇಳೆ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ರಾಮಕ್ಕನ ಹೆಸರಿನಲ್ಲಿ ಒಂಬತ್ತು ಲಕ್ಷ ಹಾಗೂ ಭೀಮಯ್ಯನ ಹೆಸರಿನಲ್ಲಿ ಎರಡೂವರೆ ಲಕ್ಷ ಸಾಲವಿದ್ದು, ಈ ಸಾಲ ಮನ್ನಾ ಮಾಡಿಸಬೇಕು ಎಂದು ರಾಹುಲ್ ಗಾಂಧಿಗೆ ಮನವಿ ಮಾಡಿದರು.







