ದಕ್ಷಿಣ ರಾಜ್ಯದ ರಾಜ್ಯಪಾಲನ ಮೇಲೆ ಲೈಂಗಿಕ ದುರ್ನಡತೆ ಆರೋಪ
ಗೃಹ ಸಚಿವಾಲಯದಿಂದ ತನಿಖೆಗೆ ಆದೇಶ
ಹೊಸದಿಲ್ಲಿ, ಫೆ.27: ದಕ್ಷಿಣ ರಾಜ್ಯದ ರಾಜ್ಯಪಾಲರೊಬ್ಬರ ಮೇಲೆ ಲೈಂಗಿಕ ದುರ್ನಡತೆ ಆರೋಪ ಕೇಳಿಬಂದಿದ್ದು, ಗೃಹ ಸಚಿವಾಲಯಕ್ಕೆ ಈ ಬಗ್ಗೆ ದೂರು ಬಂದಿದೆ. ಆರೋಪದ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಯುತ್ತಿದೆ. ರಾಜಭವನದ ಮಹಿಳಾ ಉದ್ಯೋಗಿಯೊಬ್ಬರಿಂದ ರಾಜ್ಯಪಾಲರು ಲೈಂಗಿಕ ಸಹಕಾರ ಕೋರಿದ್ದರು ಎಂದು ದೂರು ನೀಡಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.
ಆದರೆ ಸಚಿವಾಲಯ ಇದುವರೆಗೆ ಆರೋಪಿ ರಾಜ್ಯಪಾಲರ ಹೆಸರು ಬಹಿರಂಗಪಡಿಸಿಲ್ಲ. ಸರ್ಕಾರ ಈ ದೂರನ್ನು ಗಂಭೀರವಾಗಿ ಪರಿಗಣಿಸಿದ್ದು, ಯಾವುದೇ ಪುರಾವೆ ಇದೆಯೇ ಎಂಬ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಈ ಆರೋಪದಲ್ಲಿ ಹುರುಳಿದ್ದರೆ ತಕ್ಷಣ ರಾಜೀನಾಮೆ ನೀಡುವಂತೆ ರಾಜ್ಯಪಾಲರಿಗೆ ಸೂಚನೆ ನೀಡಲಾಗುವುದು ಎಂದು ಮೂಲಗಳು ಬಹಿರಂಗಪಡಿಸಿವೆ.
ಕಳೆದ ವರ್ಷದ ಜನವರಿಯಲ್ಲಿ ಮೇಘಾಲಯ ರಾಜ್ಯಪಾಲರಾಗಿದ್ದ ವಿ.ಷಣ್ಮುಗನಾಥನ್ ವಿರುದ್ಧ ಇಂಥದ್ದೇ ಆರೋಪ ಕೇಳಿಬಂದಾಗ ರಾಜೀನಾಮೆ ನೀಡುವಂತೆ ಸೂಚಿಸಲಾಗಿತ್ತು. ಆದರೆ ಈ ಪ್ರಕರಣದಲ್ಲಿ ರಾಜ್ಯಪಾಲರಿಂದ ಸ್ಪಷ್ಟನೆ ಕೇಳಲು ಇನ್ನೂ ಕೇಂದ್ರ ಇವರನ್ನು ಕರೆಸಿಕೊಂಡಿಲ್ಲ ಎಂದು ಹೇಳಲಾಗಿದೆ. ಈ ರಾಜ್ಯ ರಾಜಕೀಯವಾಗಿ ಚಂಚಲವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಕಾದು ನೋಡುತ್ತಿದೆ ಎಂದು ಹೇಳಲಾಗಿದೆ.
ಷಣ್ಮುಗನಾಥನ್ ಪ್ರಕರಣದಲ್ಲಿ 100ಕ್ಕೂ ಹೆಚ್ಚು ಮಹಿಳಾ ಉದ್ಯೋಗಿಗಳು ರಾಜಭವನದ ವಿರುದ್ಧ ರಾಷ್ಟ್ರಪತಿಗೆ ದೂರು ನೀಡಿದ್ದರು.