ಬ್ಯಾಂಕ್ ಹಗರಣದಿಂದ ಕೈತೊಳೆದುಕೊಳ್ಳಲು ಹೊರಟ ಮೋದಿ ಸರ್ಕಾರಕ್ಕೆ 'ಶಾಟ್ ಗನ್' ಸಿನ್ಹಾ ಗುರಿ ಇಟ್ಟಿದ್ದು ಹೀಗೆ
ಪಾಟ್ನಾ, ಫೆ.27: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣಕ್ಕೆ ಲೆಕ್ಕ ಪರಿಶೋಧಕರು ಮತ್ತು ನಿಯಂತ್ರಕರು ಕಾರಣ ಎಂದು ಮೋದಿ ಸರ್ಕಾರ ಆರೋಪಿಸಿರುವುದನ್ನು ಹಿರಿಯ ಬಿಜೆಪಿ ಭಿನ್ನಮತೀಯ ಸಂಸದ ಶತ್ರುಘ್ನ ಸಿನ್ಹಾ ಲೇವಡಿ ಮಾಡಿದ್ದಾರೆ. "ಥ್ಯಾಂಕ್ ಗಾಡ್, ದೇ ಸ್ಪೇರ್ಡ್ ದ ಪಿಯೋನ್" ಎಂದು ಸಿನ್ಹಾ ಟ್ವೀಟ್ ಮಾಡಿದ್ದಾರೆ.
ಪಿಎನ್ಬಿ ಹಗರಣದ ಬಗ್ಗೆ ಇತ್ತೀಚೆಗೆ ಹೇಳಿಕೆ ನೀಡಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ಬಹುಹಂತದ ಲೆಕ್ಕಪರಿಶೋಧನಾ ವ್ಯವಸ್ಥೆ ಇತರ ಮಾರ್ಗವನ್ನು ನೋಡಿದೆ ಅಥವಾ ತನ್ನ ಕೆಲಸವನ್ನು ಬೇಕಾಬಿಟ್ಟಿಯಾಗಿ ಮಾಡಿದ್ದು ಹಗರಣಕ್ಕೆ ಮೂಲ ಕಾರಣ ಎಂದು ಹೇಳಿದ್ದರು.
ಚಿತ್ರರಂಗದಿಂದ ರಾಜಕೀಯಕ್ಕೆ ಬಂದ ಸಿನ್ಹಾ ಪಕ್ಷ ಹಾಗೂ ಸರ್ಕಾರವನ್ನು ಟೀಕಿಸುತ್ತಲೇ ಬಂದಿದ್ದಾರೆ. ನಾಯಕ ಎನಿಸಿಕೊಂಡವನು ಹೂಗುಚ್ಛ ಹಾಗೂ ಇಟ್ಟಿಗೆಯೇಟು ಎರಡನ್ನೂ ಸ್ವೀಕರಿಸಬೇಕಾಗುತ್ತದೆ. "ಒಬ್ಬ ಪ್ರಜ್ಞಾವಂತ ವ್ಯಕ್ತಿ ನೆಹರೂ ಆಡಳಿತದಿಂದ ಹಿಡಿದು ಕಾಂಗ್ರೆಸ್ ದುರಾಡಳಿತದವರೆಗೆ ಎಲ್ಲರನ್ನೂ ಟೀಕಿಸಿದ ಬಳಿಕ ಇದೀಗ ಪಿಎನ್ಬಿ ಹಗರಣಕ್ಕೆ ಲೆಕ್ಕ ಪರಿಶೋಧಕರ ಮೇಲೆ ಗೂಬೆ ಕೂರಿಸಿದ್ದಾರೆ. ಆದರೆ ದೇವರಿಗೆ ಕೃತಜ್ಞತೆ ಹೇಳಬೇಕು; ಅವರು ಜವಾನನನ್ನು ಬಿಟ್ಟುಬಿಟ್ಟಿದ್ದಾರೆ ಎಂದು ಸಿನ್ಹಾ ಟ್ವೀಟಿಸಿದ್ದಾರೆ.
ಈ ಹಗರಣ ಕಾಂಗ್ರೆಸ್ ಅಧಿಕಾರದಲ್ಲಿದ್ದ ಅವಧಿಯಲ್ಲಿ 2011ರಲ್ಲಿ ಆರಂಭವಾಗಿದೆ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸರ್ಕಾರ ಏನು ಮಾಡುತ್ತಿತ್ತು ಎಂದು ಶತ್ರುಘ್ನ ಸಿನ್ಹಾ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರವಿದೆಯೇ ಎಂದು ಕೇಳಿದ್ದಾರೆ.