ಪಿಎನ್ಬಿ ಬ್ಯಾಂಕಿಗಾದ ವಂಚನೆ ಪ್ರಮಾಣದಲ್ಲಿ ಇನ್ನಷ್ಟು ಏರಿಕೆ
ಒಟ್ಟು ವಂಚನೆಯ ಮೊತ್ತ 12,700 ಕೋಟಿ ರೂ.ಗೂ ಅಧಿಕ
ಹೊಸದಿಲ್ಲಿ, ಫೆ. 27: ಪಂಜಾಬ್ ನ್ಯಾಶನಲ್ ಬ್ಯಾಂಕ್ಗೆ ವಜ್ರೋದ್ಯಮಿ ನೀರವ್ ಮೋದಿ 11,400 ಕೋ. ರೂ. ವಂಚಿಸಿದ್ದಾರೆ ಎಂದು ಫೆಬ್ರವರಿ 14ರಂದು ಹೇಳಲಾಗಿತ್ತು. ಆದರೆ, ಈ ಮೊತ್ತ ಮತ್ತೆ 1,300 ಕೋಟಿ ರೂ. ಏರಿಕೆಯಾಗುವ ಸಾಧ್ಯತೆ ಇದ್ದು, ಒಟ್ಟು ವಂಚನೆ ಮೊತ್ತ 12,700 ಕೋ. ರೂ. ಆಗಲಿದೆ. ಮುಂಬೈ ಶೇರು ವಿನಿಮಯ ಕೇಂದ್ರದಲ್ಲಿ ಸೋಮವಾರ ರಾತ್ರಿ ಮಾಹಿತಿ ದಾಖಲಿಸಿರುವ ಪಂಜಾಬ್ ನ್ಯಾಶನಲ್ ಬ್ಯಾಂಕ್, ಅನಧಿಕೃತ ಹಣ ವರ್ಗಾವಣೆಯ ಮೊತ್ತ 1300 ಕೋ. ರೂ. ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ತನ್ನ ಮುಂಬೈಯ ಬ್ರಾಡಿ ಹೌಸ್ ಶಾಖೆಯಲ್ಲಿ 2010ರಿಂದ 11,400 ಕೋ. ರೂ. ವಂಚನೆ ನಡೆದಿದೆ ಎಂದು ಈ ತಿಂಗಳ ಆರಂಭದಲ್ಲಿ ಪಂಜಾಬ್ ನ್ಯಾಶನಲ್ ಬ್ಯಾಂಕ್ ಹೇಳಿತ್ತು. ಲೆಟರ್ ಆಫ್ ಅಂಡರ್ಟೇಕಿಂಗ್ ನೀಡಿದ್ದ ಬ್ಯಾಂಕ್ನ ಉದ್ಯೋಗಿ ಕರ್ತವ್ಯದಿಂದ ನಿವೃತ್ತರಾದ ಬಳಿಕ ಹೆಚ್ಚುವರಿ 1300 ಕೋ.ರೂ. ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಇತರ ಬ್ಯಾಂಕ್ಗಳ ನಿರ್ಲಕ್ಷವನ್ನು ಪಿಎನ್ಬಿ ಟೀಕಿಸಿದೆ. ನೀರವ್ ಮೋದಿ, ಗೀತಾಂಜಲಿ ಗುಂಪಿನ ಕಂಪೆನಿಗಳ ಅಧಿಕಾರಿಗಳು ಹಾಗೂ ತನ್ನ ಮುಂಬೈ ಶಾಖೆಯ ಅಧಿಕಾರಿಗಳು, ಇತರ ಬ್ಯಾಂಕ್ಗಳ ವಿದೇಶಿ ಶಾಖೆಯ ಅಧಿಕಾರಿಗಳ ನಡುವೆ ಹೊಂದಾಣಿಕೆ ಇತ್ತು ಎಂದು ಪಿಎನ್ಬಿ ಆರೋಪಿಸಿದೆ. ಪ್ರಾಥಮಿಕ ತನಿಖೆ ವರದಿ ಆಧಾರದಲ್ಲಿ ಪಿಎನ್ಬಿ ಆರಂಭದಲ್ಲಿ 280.7 ಕೋ. ರೂ. ವಂಚನೆ ನಡೆದಿದೆ ಎಂದು ಏಕ ಕಾಲದಲ್ಲಿ ತನ್ನ ಆಡಳಿತ ಮಂಡಳಿ, ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ ಹಾಗೂ ಮುಂಬೈ ಶೇರು ವಿನಿಮಯ ಕೇಂದ್ರಕ್ಕೆ ಮಾಹಿತಿ ನೀಡಿತ್ತು.
ಹೆಚ್ಚಿನ ತನಿಖೆಯ ವರದಿ ಸ್ವೀಕರಿಸಿದ ಬಳಿಕ ವಂಚನೆಯ ಮೊತ್ತ 11,394 ಕೋ. ರೂ. ಏರಿಕೆಯಾಗಿತ್ತು. ಆನಂತರ ಪಿಎನ್ಬಿ ಆರ್ಬಿಐಯಲ್ಲಿ ಎಫ್ಎಂಆರ್ (ಫ್ರಾಡ್ ಮಾನಿಟರಿಂಗ್ ರಿಟರ್ನ್) ಹಾಗೂ ಸಿಬಿಐಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್ಐಆರ್) ಯನ್ನು 2018 ಫೆಬ್ರವರಿ 13ರಂದು ಸಂಜೆ ದಾಖಲಿಸಿತ್ತು. ಮುಂಬೈ ಶೇರು ವಿನಿಮಯ ಕೇಂದ್ರ ಹಾಗೂ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರಕ್ಕೆ ಫೆಬ್ರವರಿ 14ರಂದು ಬೆಳಗ್ಗೆ 9 ಗಂಟೆಗೆ ಮಾಹಿತಿ ನೀಡಿತ್ತು
ಸಿಬಿಐಯಿಂದ ಅಧಿಕಾರಿಗಳ ವಿಚಾರಣೆ
ಪಂಜಾಬ್ ನ್ಯಾಶನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಸಾರ್ವಜನಿಕ ರಂಗದ ಬ್ಯಾಂಕ್ಗಳ ಮೂವರು ಜನರಲ್ ಮ್ಯಾನೇಜರ್, ಕಾರ್ಯಕಾರಿ ನಿರ್ದೇಶಕ ಹಾಗೂ ಲೆಕ್ಕಪರಿಶೋಧಕರನ್ನು ಸಿಬಿಐ ಸೋಮವಾರ ವಿಚಾರಣೆಗೆ ಒಳಪಡಿಸಿದೆ. ಪಿಎನ್ಬಿ ಸಿಬಿಐಗೆ ನೀಡಿದ ದೂರಿನಲ್ಲಿ ನಿವೃತ್ತ ಡೆಪ್ಯುಟಿ ಮ್ಯಾನೇಜರ್ ಗೋಕುಲ್ ಶೆಟ್ಟಿ ಹಾಗೂ ಏಕಗವಾಕ್ಷಿ ನಿರ್ವಾಹಕ ಮನೋಜ್ ಕಾರಟ್ ಅವರ ಪಾತ್ರದ ಬಗ್ಗೆ ಉಲ್ಲೇಖಿಸಿತ್ತು. ಆದಾಗ್ಯೂ ಸಿಬಿಐ, ಬ್ಯಾಂಕ್ ಹಾಗೂ ಕಂಪೆನಿಯ 10 ಹಿರಿಯ ಅಧಿಕಾರಿಗಳನ್ನು ಬಂಧಿಸಿದೆ. ಮೂವರು ಜನರಲ್ ಮ್ಯಾನೇಜರ್ಗಳು ಪಿಎನ್ಬಿಯ ಮುಂಬೈ ಬ್ರಾಡಿ ಹೌಸ್ ಶಾಖೆಯ ಅಂತಾರಾಷ್ಟ್ರೀಯ ಬ್ಯಾಂಕಿಂಗ್ ವಿಭಾಗ ಹಾಗೂ ಟ್ರೆಜರಿ ವಿಭಾಗದ ಸಿಬ್ಬಂದಿ. ಪಿಎನ್ಬಿಯೊಂದಿಗಿನ ನಾಸ್ಟ್ರೊ ಖಾತೆ ಹಾಗೂ ಆ ಅವಧಿಯ ವಂಚನೆಗೆ ಸಂಬಂಧಿಸಿದ ವೆಚ್ಚದ ವಿವರಗಳ ಮಾಹಿತಿ ಹಂಚಿಕೊಳ್ಳುವಂತೆ ಸಿಬಿಐ ಐದು ಬ್ಯಾಂಕ್ಗಳ ಮುಖ್ಯ ವಿಚಕ್ಷಣಾ ಅಧಿಕಾರಿಗಳಿಗೆ ಪತ್ರ ಬರೆದಿದೆ. ಪಿಎನ್ಬಿಯ ಲೆಕ್ಕಪರಿಶೋಧಕರನ್ನು ಸಿಬಿಐ ತನಿಖಾ ತಂಡ ಕರೆಸಿಕೊಂಡು ವಿಚಾರಣೆ ನಡೆಸಿದೆ ಎಂದು ಸಿಬಿಐ ವಕ್ತಾರ ಅಭಿಷೇಕ್ ದಯಾಲ್ ತಿಳಿಸಿದ್ದಾರೆ.
ಧನ್ಯವಾದ ದೇವರೆ, ಅವರು ಜವಾನನ್ನು ಬಿಟ್ಟುಬಿಟ್ಟರು
ಹೊಸದಿಲ್ಲಿ: ‘ಧನ್ಯವಾದ ದೇವರೆ, ಅವರು ಜವಾನನ್ನು ಬಿಟ್ಟುಬಿಟ್ಟರು’ ಎಂದು ಹೇಳುವ ಮೂಲಕ ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ ಪಂಜಾಬ್ ನ್ಯಾಶನಲ್ ಬ್ಯಾಂಕ್ನ ವಂಚನೆಗೆ ಸಂಬಂಧಿಸಿ ಲೆಕ್ಕಪರಿಶೋಧಕ ಹಾಗೂ ನಿಯಂತ್ರಕರನ್ನು ಟೀಕಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವನ್ನು ಟೀಕಿಸಿದ್ದಾರೆ. ನೆಹರೂ ಅಧಿಕಾರಾವಧಿಯಿಂದ ಕಾಂಗ್ರೆಸ್ನ ದುರಾಡಳಿತ ವರೆಗೆ ಪ್ರತಿಯೊಬ್ಬರನ್ನು ಟೀಕಿಸಿದ ಬಳಿಕ ನಮ್ಮ ಪ್ರಜ್ಞಾವಂತ ಜನರು, ಪಿಎನ್ಬಿ ವಂಚನೆಗೆ ಲೆಕ್ಕಪರಿಶೋಧಕರನ್ನು ಟೀಕಿಸುತ್ತಿದ್ದಾರೆ. ಧನ್ಯವಾದ ದೇವರೆ, ಅವರು ಜವಾನನ್ನು ಬಿಟ್ಟುಬಿಟ್ಟರು ಎಂದು ಸಿನ್ಹಾ ಟ್ವೀಟ್ ಮಾಡಿದ್ದಾರೆ.